ಕಳೆದ ಏಳು ದಿನಗಳಲ್ಲಿ ಯು.ಎಸ್. ಅಧ್ಯಕ್ಷ ಟ್ರಂಪ್ ತನ್ನ ‘ಟ್ರುತ್ ಸೋಷಲ್’ನಲ್ಲಿ ಹಾಕುತ್ತಿರುವ ಪೋಸ್ಟ್ ಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ. ಅದು ತಿಪ್ಪರಲಾಗಗಳ ಒಂದು ಅಧ್ಯಯನವೇ ಆಗಬಲ್ಲದು. ಜಾಗತಿಕವಾಗಿ ಮತ್ತು ಆಂತರಿಕವಾಗಿಯೂ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಅಧ್ಯಕ್ಷ ಟ್ರಂಪ್ ಪಲಾಯನದ ದಾರಿ ಹುಡುಕುತ್ತಿರುವಂತಿದೆ. ಆದರೆ, ಯುಸ್ ಸಾಮ್ರಾಜ್ಯಶಾಹಿ ಮತ್ತದರ ಝಿಯೋನಿಸ್ಟ್ ಮಿತ್ರ ಇಸ್ರೇಲ್ ಹೇರಿರುವ ಅನಗತ್ಯ ಹಾಗೂ ತಪ್ಪಿಸಲು ಸಾಧ್ಯವಿದ್ದ ಮರಣ ಮೃದಂಗ ನರ್ತನ ಮತ್ತು ವಿನಾಶದ ಈ ಕಥೆಯಲ್ಲಿ ಸ್ವಯಂಘೋಷಿತ ವಿಶ್ವಗುರು ನರೇಂದ್ರ ಮೋದಿಯದ್ದು ಒಂದು ತುಂಬಾ ಶೋಚನೀಯ ಅಧ್ಯಾಯ. ಮಾರ್ಚ್ 23ರಂದು ಲೋಕಸಭೆಯ ಕಲಾಪದಲ್ಲಿ ಮಧ್ಯಪ್ರವೇಶಿಸಿ ಅವರು ಹೇಳಿದ ಮಾತುಗಳು ಈ ದುರಂತಮಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
– ನೀಲೋತ್ಪಲ್ ಬಸು
– ಕನ್ನಡಕ್ಕೆ: ವಿಶ್ವ
ಜಗತ್ತಿನಾದ್ಯಂತ ಮಿಲಿಯನ್ ಡಾಲರ್ ಪ್ರಶ್ನೆಯೊಂದನ್ನು ಕೇಳಲಾಗುತ್ತಿದೆ: ಫೆಬ್ರವರಿ 28ರಂದು ಆಯತೊಲ್ಲಾ ಅಲಿ ಖಮೇನಿಯೆರನ್ನು ಹತ್ಯೆ ಮಾಡುವ ಮೂಲಕ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆರಂಭಿಸಿರುವ ಆಕ್ರಮಣ ಯುದ್ಧದ ಅಂತಿಮ ಫಲಿತಾಂಶ ಏನಾಗಬಹುದು ಎನ್ನುವುದೇ ಆ ಪ್ರಶ್ನೆ. ಆ ದಾಳಿಯ ನಂತರ, ಇರಾನ್ನ ಮಿಲಿಟರಿ ಮತ್ತು ನಾಗರಿಕ ಸಂಸ್ಥಾಪನೆಗಳೆರಡರ ಮೇಲೂ ಭೀಕರ ಆಕ್ರಮಣ ನಡೆಯುತ್ತಿದೆ. ತನ್ನ ಅಚ್ಚುಮೆಚ್ಚಿನ ಸಂವಹನ ಮಾಧ್ಯಮ ‘ಟ್ರುತ್ ಸೋಷಲ್’ ಮೂಲಕ ಡೊನಾಲ್ಡ್ ಟ್ರಂಪ್ ಮಾರ್ಚ್ 21ರಂದು ಇರಾನ್ಗೆ ಏಕಪಕ್ಷೀಯ ಧಮಕಿ ಹಾಕಿದ್ದಾರೆ. ಹೊರ್ಮುಜ್ ಜಲಸಂಧಿ ಮೂಲಕ ಹಾದು ಹೋಗುವ ನೌಕೆಗಳಿಗೆ ಹಾಕಲಾಗಿರುವ ಎಲ್ಲ ಅಡೆತಡೆಗಳನ್ನು ಇರಾನ್ ಸ್ವಪ್ರೇರಣೆಯಿಂದ ತೆಗೆದು ಹಾಕಬೇಕೆನ್ನುವುದೇ ಆ ಬೆದರಿಕೆ. ಇರಾನ್ನ ಸಂಪೂರ್ಣ ಶಕ್ತಿ ಹಾಗೂ ಇಂಧನ ಮೂಲಸೌಕರ್ಯವನ್ನು ನಾಶಪಡಿಸುವುದಾಗಿಯೂ ಟ್ರಂಪ್ ಪೋಸ್ಟ್ ಬೆದರಿಕೆಯೊಡ್ಡಿದೆ.
ಆದರೆ, ಟ್ರಂಪ್ ಬೆದರಿಕೆಗೆ ಸ್ವಲ್ಪವೂ ಜಗ್ಗದೇ ಇರಾನ್ ಹಾಕಿರುವ ಪ್ರತಿ-ಬೆದರಿಕೆ ಕೂಡ ಅಷ್ಟೇ ಅನಿಷ್ಟಕಾರಿ. ಒಂದು ವೇಳೆ ಅಮೆರಿಕ ತನ್ನ ಬೆದರಿಕೆಯನ್ನು ಕಾರ್ಯರೂಪಕ್ಕೆ ಇಳಿಸಿದರೆ ಇಸ್ರೇಲ್ ಮತ್ತು ಕೊಲ್ಲಿಯ ಇಡೀ ಇಂಧನ ಮೂಲಸೌಕರ್ಯವನ್ನು ನಾಶಪಡಿಸುವುದಾಗಿ ಇರಾನ್ ಬೆದರಿಸಿದೆ. ಇದರಿಂದಾಗಿ ಸ್ಪಷ್ಟವಾಗಿ ಹಿಂಜರಿದ ಟ್ರಂಪ್ `ಮಧ್ಯಪ್ರಾಚ್ಯದಲ್ಲಿನ ನಮ್ಮ ಸಂಘರ್ಷಗಳನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಲು ಕಳೆದೆರಡು ದಿನಗಳಿಂದ ಅಮೆರಿಕ ಮತ್ತು ಇರಾನ್ ಉತ್ತಮ ಹಾಗೂ ಉತ್ಪಾದಕ ಮಾತುಕತೆಗಳನ್ನು ನಡೆಸಿವೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತದೆ.
ಇದನ್ನೂ ಓದಿ: ಕೇರಳದ ಅಭಿವೃದ್ಧಿಗೆ ಎಲ್ಡಿಎಫ್ ಪುನರಾಯ್ಕೆ ಅನಿವಾರ್ಯ: ಡಾ. ವಿ. ಸಿವದಾಸನ್
ವಾರವಿಡೀ ಮುಂದುವರಿಯಲಿರುವ ಈ ಆಳವಾದ, ವಿಸ್ತ್ರೃತ ಮತ್ತು ರಚನಾತ್ಮಕ ಮಾತುಕತೆಗಳ ಧೋರಣೆಯ ಆಧಾರದಲ್ಲಿ, ಇರಾನ್ನ ಇಂಧನ ಸ್ಥಾವರಗಳು ಮತ್ತು ಮೂಲಸೌಕರ್ಯದ ವಿರುದ್ಧ ಐದು ದಿನ ಕಾಲ, ಹಾಲಿ ನಡೆಯುತ್ತಿರುವ ಮಾತುಕತೆಗಳು ಮತ್ತು ಚರ್ಚೆಗಳ ಯಶಸ್ಸನ್ನು ಅವಲಂಬಿಸಿ, ಯಾವುದೇ ಮತ್ತು ಎಲ್ಲ ಮಿಲಿಟರಿ ದಾಳಿಗಳನ್ನು ಮುಂದೂಡುವಂತೆ ಸಮರ ಇಲಾಖೆಗೆ ನಾನು ನಿರ್ದೇಶನ ನೀಡಿದ್ದೇನೆ’ ಎಂದು ಪೋಸ್ಟ್ ಮಾಡಿದರು:.ಮಿಲಿಟರಿ ಪರಿಭಾಷೆ ಮತ್ತು ನಡೆಯುತ್ತಿರುವ ವಿದ್ಯಮಾನಗಳನ್ನು ಆಧರಿಸಿ ಹೇಳುವುದಾದರೆ ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಗಬಹುದಾದ ಒಂದೇ ಸ್ಪಂದನೆ: `ಒಂದು ತಾತ್ಕಾಲಿಕ ವಿರಾಮ’.
ಜಂಟಿ ಮಿಲಿಟರಿ ಕಾರ್ಯಾಚರಣೆ ಆರಂಭವಾದಾಗಿನಿಂದಲೂ ‘ಇಡೀ ವ್ಯವಹಾರ ಕೆಲವು ದಿನಗಳಲ್ಲ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುತ್ತದೆ’ ಎಂದು ಹೇಳಿ ಹೇಳಿ ಇಸ್ರೇಲ್ ಮತ್ತು ಅಮೆರಿಕಕ್ಕೆ ಆಯಾಸವಾದಂತಿಲ್ಲ. ಇಸ್ಲಾಮಿಕ್ ಗಣರಾಜ್ಯ, ಅಂದರೆ ಇರಾನ್ನೊಳಗೆ ಆಡಳಿತ ವ್ಯವಸ್ಥೆಯ ವಿರುದ್ಧ ಅನಿವಾರ್ಯವಾಗಿ ಆಂತರಿಕ ಬಂಡಾಯ ಭುಗಿಲೇಳಬಹುದು ಎಂಬ ನಿರೀಕ್ಷೆಯಿಂದ ಈ ವೇಳಾಪಟ್ಟಿಯನ್ನು ಹೇಳಲಾಗಿತ್ತು. ಇರಾನಿನಾದ್ಯಂತ ಹಿಂದೆ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿದ್ದರಿಂದ ಈ ಬಾರಿಯೂ ಹಾಗೆ ಆಗುವುದು ನಿಶ್ಚಿತ ಎಂದು ಇಸ್ರೇಲ್ನ ಬೇಹುಗಾರಿಕೆ ಸಂಸ್ಥೆ ಮೊಸಾದ್ ನಂಬಿತ್ತು. ಇರಾನ್ ಮೇಲೆ ದಾಳಿ ಹಾಗೂ ಅಮೆರಿಕದ ಸಶಸ್ತ್ರ ಪಡೆಗಳನ್ನು ತೊಡಗಿಸುವುದಕ್ಕಾಗಿ ತಾನು ಕಳೆದ ನಾಲ್ಕು ದಶಕಗಳಿಂದ ಕೆಲಸ ಮಾಡಿದ್ದಾಗಿ ಮಿಲಿಟರಿ ಸಂಘರ್ಷದ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಟ್ಟಿಯಾಗಿ ಹೇಳಿದ್ದಾರೆ. ಇನ್ನೊಂದೆಡೆ, ಸಂಘರ್ಷದಲ್ಲಿ ಅಮೆರಿಕ ತೊಡಗಿಗೊಂಡಿರುವುದಕ್ಕೆ ಅಮೆರಿಕದೊಳಗಡೆಯೇ ಬಲವಾದ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದು ಯುಎಸ್ ಕಾಂಗ್ರೆಸ್ನ (ಸಂಸತ್) ಪೂರ್ವಾನುಮತಿಯಿಲ್ಲದ ಸಂಪೂರ್ಣವಾಗಿ ಅಸಾಂವಿಧಾನಿಕ ನಡೆಯಾಗಿರುವುದರಿಂದ ಪ್ರತಿರೋಧ ಇನ್ನಷ್ಟು ಸ್ಪಷ್ಟವಾಗಿದೆ. ಅಮೆರಿಕದ ಟೊಮ್ಹಾಕ್ ದಾಳಿಯಿಂದ ದಕ್ಷಿಣ ಇರಾನ್ನ ನಗರವೊಂದರಲ್ಲಿ 165 ಶಾಲಾ ಬಾಲಕಿಯರು ಮೃತಪಟ್ಟ ದಾರುಣ ಘಟನೆಯೂ ನಡೆದಿದೆ. ಇದೂ ಆಕ್ರೋಶಕ್ಕೆ ಕಾರಣವಾಗಿದೆ.


ಯುಎಸ್ ವಿಮಾನದಾಳಿಗೆ ಬಲಿಯಾದ ಬ್ಬ ಶಾಲಾ ಬಾಲಕಿಯ ಸ್ಕೂಲ್ಬ್ಯಾಗ್ ಮತ್ತು
ಈ ಕುರಿತು ಲುಲ್ ದೆಸೀಮಾಕೆರ್ ವ್ಯಂಗ್ಯಚಿತ್ರ-ಮೇಕ್ ಅಮೆರಿಕ ಗ್ರೇಟ್ ಅಗೇನ್
ಭಾರಿ ಕಷ್ಟ ನಷ್ಟ ಎದುರಿಸುತ್ತಿದ್ದರೂ ಅದರಲ್ಲೂ ವಿಶೇಷವಾಗಿ ಇರಾನ್ನ ಮಿಲಿಟರಿ ಮತ್ತು ಭದ್ರತಾ ವ್ಯವಸ್ಥೆಗಳ ಅತ್ಯುನ್ನತ ನಾಯಕರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದ್ದರೂ ತೆಹರಾನಿನಲ್ಲಿನ ಆಳ್ವಿಕೆ ಕುಸಿಯುವ ಬದಲು ಉಳಿದುಕೊಂಡಿದೆ.
ಇರಾನ್ನ ಮಿಲಿಟರಿ ಮತ್ತು ರಕ್ಷಣಾ ತಂತ್ರದ ಸೌಕರ್ಯಗಳ ವಿಕೇಂದ್ರೀಕೃತ ವ್ಯವಸ್ಥೆಯಿಂದಾಗಿ ಅವುಗಳು ಉಳಿದುಕೊಂಡಿದ್ದು ಮಾತ್ರವಲ್ಲದೆ ಪ್ರತೀಕಾರವನ್ನೂ ತೀರಿಸಿಕೊಳ್ಳುತ್ತಿದೆ. ಅಮೆರಿಕ ಮತ್ತು ಇಸ್ರೇಲ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಗ್ಗದ ಡ್ರೋನ್ ಮತ್ತು ಕ್ಷಿಪಣಿಗಳಿಂದ ಪರಿಣಾಮಕಾರಿಯಾಗಿ ಎದುರಿಸುತ್ತಿರುವುದರಿಂದ ಇರಾನ್ನ ಮಿಲಿಟರಿ ರಕ್ಷಣಾ ವ್ಯವಸ್ಥೆಯ ಆರ್ಥಿಕತೆ ಕೂಡ ಪರಿಣಾಮಕಾರಿಯಾಗುತ್ತಿದೆ. ಅದರೊಂದಿಗೆ, ಇಸ್ರೇಲ್ನ ಮಿಲಿಟರಿ ಮಾತ್ರವಲ್ಲದೆ ನಾಗರಿಕ ಸಂಸ್ಥಾಪನೆಗಳನ್ನು ಕೂಡ ಇರಾನ್ ಭಾರಿ ಪ್ರಮಾಣದಲ್ಲಿ ಹಾನಿಗೀಡಾಗಿಸುತ್ತಿರುವುದು ಕೂಡ ಗಮನಾರ್ಹವಾಗಿದೆ.
ಕೊಲ್ಲಿಯಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕೂಡ ಇರಾನ್ ದಾಳಿ ಮಾಡುತ್ತಿದೆ. ಜಗತ್ತಿನ ಶೇಕಡ 20ರಷ್ಟು ತೈಲ ಮತ್ತು ಅನಿಲ ಸಾಗಣೆಯಾಗುವ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವುದು `ಶವ ಪೆಟ್ಟಿಗೆಗೆ ಅಂತಿಮ ಮೊಳೆ’ ಹೊಡೆದಂತಾಗಿದೆ. ಇದರಿಂದಾಗಿ ತೈಲ ಹಾಗೂ ಅನಿಲ ಸರಬರಾಜು ವ್ಯವಸ್ಥೆಯ ಕೈಕಟ್ಟಿದಂತಾಗಿದೆ. ಇಂಧನ ಬೆಲೆಗಳು ಗಗನಕ್ಕೇರಿರುವುದರಿಂದ ಇದು ಜಾಗತಿಕ ಆರ್ಥಿಕ ವ್ಯವಸ್ಥೆಗೇ ಮಾರಕವಾಗಿದೆ. ಜಾಗತಿಕ ಷೇರು ಮಾರುಕಟ್ಟೆಗಳು ಕೂಡ ಕುಸಿಯುತ್ತಿವೆ.

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ @ಫೇಸ್ ಬುಕ್
ಮಿಲಿಟರಿ ಸಂಘರ್ಷದ ಕಳೆದ ಏಳು ದಿನಗಳಲ್ಲಿ ಟ್ರುತ್ ಸೋಷಲ್ನಲ್ಲಿ ಟ್ರಂಪ್ ಮಾಡುತ್ತಿರುವ ಪೋಸ್ಟ್ ಬಹಳ ಆಸಕ್ತಿ ಹುಟ್ಟಿಸುತ್ತವೆ. ಅದು ತಿಪ್ಪರಲಾಗಗಳ ಒಂದು ಅಧ್ಯಯನವೇ ಆಗಬಲ್ಲದು. ಜಾಗತಿಕವಾಗಿ ಮತ್ತು ಆಂತರಿಕವಾಗಿಯೂ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರಿಂದ ಅಧ್ಯಕ್ಷ ಟ್ರಂಪ್ ಪಲಾಯನದ ದಾರಿ ಹುಡುಕುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಮಿಲಿಟಿರಿ ಕಾರ್ಯಾಚರಣೆಗೆ ಕೈಜೋಡಿಸಲು ಟ್ರಂಪ್ ನೀಡಿರುವ ಕರೆಯನ್ನು ಒಂದಾದ ಮೇಲೊಂದು ದೇಶಗಳು, ಯುರೋಪ್ ಮತ್ತಿತರ ಕಡೆಯ ಮಾಜಿ ಮಿತ್ರ ರಾಷ್ಟ್ರಗಳು ಸೌಮ್ಯವಾಗಿ, ಹಾಗೂ ಕೆಲವೊಮ್ಮೆ ಒರಟಾಗಿ ತಿರಸ್ಕರಿಸಿವೆ.
ಟ್ರಂಪ್ಗಾಗಿರುವ ಹತಾಶೆ ಎಷ್ಟೆಂಬುದನ್ನು ಆತ ವಿರಾಮದ ಗುಂಡಿಯನ್ನು ಒತ್ತಿದ ಮರುಕ್ಷಣವೇ ಇರಾನಿಯನ್ನರು ನಿರ್ದಯವಾಗಿ ವರ್ತಿಸಿದರು ಎಂಬುದರಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಸಂಧಾನ ಬಿಡಿ; ಯಾವುದೇ ಮಾತುಕತೆಗೂ ತಾವು ಸಿದ್ಧರಿಲ್ಲ ಎಂದು ಇರಾನ್ ನಾಯಕರು ಕಡ್ಡಿ ಮುರಿದಂತೆ ಹೇಳಿ ಖಡಕ್ಕಾಗಿ ತಿರಸ್ಕರಿಸಿದ್ದಾರೆ. ಇಂಥ ಆಕ್ರಮಣವು ಮರುಕಳಿಸುವುದಿಲ್ಲ ಎಂಬ ಖಾತರಿ ಸಿಗುವವರೆಗೂ ತಾವು ಯುದ್ಧ ನಡೆಸಲು ಸಿದ್ಧ ಎಂದವರು ಘೋಷಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಅಮೆರಿಕದ ನೆಲೆಗಳ ಕಾರ್ಯಾಚರಣೆ ಸ್ಥಗಿತಗೊಳ್ಳಬೇಕು ಮತ್ತು ಆದ ನಷ್ಟಕ್ಕಾಗಿ ಅದು ಪರಿಹಾರ ಕೊಡಬೇಕು ಎಂದೂ ಹೇಳಿದ್ದಾರೆ. ಆದ್ದರಿಂದ ಇದು ಸದ್ಯದ ವಿರಾಮಕ್ಕಿಂತಲೂ ಹೆಚ್ಚಿನದು, ಇಲ್ಲಿ ಗೆದ್ದವರಾರು ಮತ್ತು ಸೋತವರಾರು ಎಂದು ಯೋಚಿಸಬೇಕಾಗಿಯೇ ಇಲ್ಲ.
ಆದರೆ, ಯುಸ್ ಸಾಮ್ರಾಜ್ಯಶಾಹಿ ಮತ್ತದರ ಝಿಯೋನಿಸ್ಟ್ ಮಿತ್ರ ಇಸ್ರೇಲ್ ಹೇರಿರುವ ಅನಗತ್ಯ ಹಾಗೂ ತಪ್ಪಿಸಲು ಸಾಧ್ಯವಿದ್ದ ಮರಣ ಮೃದಂಗ ನರ್ತನ ಮತ್ತು ವಿನಾಶದ ಈ ಕಥೆಯಲ್ಲಿ ಸ್ವಯಂಘೋಷಿತ ವಿಶ್ವಗುರು ನರೇಂದ್ರ ಮೋದಿಯದ್ದು ಒಂದು ತುಂಬಾ ಶೋಚನೀಯ ಅಧ್ಯಾಯವಾಗಿದೆ. ಮಾರ್ಚ್ 23ರಂದು ಲೋಕಸಭೆಯ ಕಲಾಪದಲ್ಲಿ ಮಧ್ಯಪ್ರವೇಶಿಸಿ ಅವರು ಮಾತನಾಡಿದ್ದು ಈ ದುರಂತಮಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ಇದನ್ನೂ ನೋಡಿ: ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media
ಪಶ್ಚಿಮ ಏಷ್ಯಾದಲ್ಲಿನ ಈ ಮಿಲಿಟರಿ ದುಸ್ಸಾಹಸದಿಂದ ಭಾರತ ಎಂತಹ ಸಂಕಷ್ಟಗಳಿಗೆ ತಳ್ಳಲ್ಪಟ್ಟಿದೆ ಎಂದು ತಮ್ಮ ಭಾಷಣದುದ್ದಕ್ಕೂ ಮೋದಿ ಸಂಕಷ್ಟಗಳ ಉದ್ದನೆಯ ಪಟ್ಟಿ ಮಾಡಿದರು. ಆದರೆ ಈ ದುರಂತ ಅನಾವರಣಗೊಳ್ಳಲು ಕಾರಣವಾದರೂ ಏನು ಎನ್ನುವ ಬಗ್ಗೆ ಅವರು ಒಂದು ಮಾತನ್ನೂ ಆಡಲಿಲ್ಲ. ನೆನತ್ಯಾಹುರ ಮಾರಕ ಆಲಿಂಗನ, ಇಸ್ರೇಲ್ ಪಿತೃಭೂಮಿಯಾದರೆ (ಫಾದರ್ಲ್ಯಾಂಡ್) ಭಾರತ ಮಾತೃಭೂಮಿ (ಮದರ್ ಲ್ಯಾಂಡ್) ಎಂದು ಇಸ್ರೇಲ್ ಭೇಟಿ ವೇಳೆ ಪ್ರತಿಪಾದಿಸಿದ್ದು ಮತ್ತು ತಾನು ಟ್ರಂಪ್ರ ತಾತ್ಸಾರದಿಂದ ಪದೇ ಪದೇ ಎದುರಿಸಬೇಕಾಗಿ ಬಂದಿರುವ ಕಷ್ಟಗಳು -, ಖಂಡನೆಯ ಒಂದೇ ಒಂದು ಮಾತಂತೂ ಇಲ್ಲವೇ ಇಲ್ಲ.
ಲೆನಿನ್ರ ‘ಸಾಮ್ರಾಜ್ಯಶಾಹಿ, ಬಂಡವಾಳಶಾಹಿಯ ಅತ್ಯುನ್ನತ ಘಟ್ಟ’ ಕೃತಿಯನ್ನು ಪರಾಂಬರಿಸುವ ಒಲವನ್ನು ಅವರು ತೋರುವರೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ಪ್ರಸ್ತುತ ಟ್ರಂಪ್ ಯುಗದ ಅತಿ ಬಲಪಂಥೀಯ ಆಕ್ರಮಣವನ್ನು ಅವರು ಅರ್ಥಮಾಡಿಕೊಳ್ಳುವರೆಂದೂ ನಾವು ನಿರೀಕ್ಷಿಸುವಂತಿಲ್ಲ. ಜಾಗತಿಕ ಅರ್ಥವ್ಯವಸ್ಥೆಯಲ್ಲಿ ದೊಡ್ಡ ಶಕ್ತಿಯಾಗಿ ಚೀನಾ ಹೊರಹೊಮ್ಮುತ್ತಿರುವ ಸ್ಪಷ್ಟ ಲಕ್ಷಣಗಳನ್ನು ಎದುರಿಸಲಾರದ ಯುಎಸ್ನ ಹತಾಶೆಯಿಂದ ಹುಟ್ಟಿಕೊಂಡ ಆಕ್ರಮಣವದು. ಇಂಥ ನಿರ್ಣಾಯಕ ಕಾಲಘಟ್ಟದಲ್ಲಿ, ಭಾರತ ತನ್ನ ಎಲ್ಲ ರಾಜತಾಂತ್ರಿಕ ನಡೆಗಳಿಗೂ ಸಾಮ್ರಾಜ್ಯಶಾಹಿಯನ್ನೇ ಅವಲಂಬಿಸಬಾರದು ಎಂಬ ಪಾಠ ಕಲಿಯದಿದ್ದರೆ ಬದುಕುಳಿಯಲಾರದು.
(ಮೂಲ: ಪೀಪಲ್ಸ್ ಡೆಮಾಕ್ರಸಿ ವಾರಪತ್ರಿಕೆ, ಮಾರ್ಚ್ 29, 2026)

ಅಲ್ಲಿ ಇಸ್ರೇಲಿ ಪದಕ, ಇಲ್ಲಿ…….
ವ್ಯಂಗ್ಯಚಿತ್ರ : ಮಂಜುಲ್ @ಫೇಸ್ ಬುಕ್
