ದೊಡ್ಡಬಳ್ಳಾಪುರ: ಒಳಚರಂಡಿ ಸಮಸ್ಯೆಯು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರೀಪುರ ಕಾಲೋನಿಯಲ್ಲಿ ತೀವ್ರವಾಗಿದ್ದು, ಗ್ರಾಮಸ್ಥರು ಪಂಚಾಯತಿ ಎದುರು ಕೊಳಚೆ ನೀರು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುತೇಕ ದಲಿತರು ವಾಸಿಸುವ ಈ ಕಾಲೋನಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದು, ಕಳೆದ ಹತ್ತು ವರ್ಷಗಳಿಂದ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಕಾಲೋನಿಯ ಚರಂಡಿಗಳು ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಮನೆಗಳ ಸುತ್ತಮುತ್ತ ಹರಿಯುತ್ತಿದೆ.
ಇದನ್ನೂ ಓದಿ: ಕಸ ಸಂಗ್ರಹಣೆಯಲ್ಲಿ ಅಸ್ತವ್ಯಸ್ತ; 20 ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲು
ಸಮಸ್ಯೆ ಪರಿಹರಿಸಲು ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೊಳಚೆ ನೀರನ್ನು ಪಂಚಾಯತಿ ಕಚೇರಿ ಮುಂದೆ ತಂದು ಸುರಿದು ಪ್ರತಿಭಟನೆ ನಡೆಸಿದರು. ಹತ್ತು ವರ್ಷಗಳಿಂದ ನಾವು ಈ ದುರ್ವಾಸನೆ ಸಹಿಸಿಕೊಂಡಿದ್ದೇವೆ. ಕನಿಷ್ಠ ಒಂದು ದಿನವಾದರೂ ಅಧಿಕಾರಿಗಳು ಇದನ್ನು ಅನುಭವಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಾತ್ರಿ ವೇಳೆ ಹಾವು, ಚೇಳುಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಮನೆಗಳ ಒಳಗೂ ಕೊಳಚೆ ಹುಳುಗಳ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ದಿಕ್ಕಾರ ಕೂಗಿ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media
