ಹಾಸನ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ರಾಜ್ಯಾದ್ಯಂತ ಮೇ 30ರಂದು ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದ್ದಾರೆ. ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಕನಿಷ್ಠ ಕೂಲಿ ಜಾರಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇ
ಮೇ ದಿನದ ಭಾಗವಾಗಿ ಹಾಸನದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕರ ಶ್ರಮದಿಂದಲೇ ದೇಶದ ಸಂಪತ್ತು ಸೃಷ್ಟಿಯಾಗುತ್ತಿದ್ದರೂ, ಅದರ ಹಂಚಿಕೆಯಲ್ಲಿ ತೀವ್ರ ಅಸಮಾನತೆ ಮುಂದುವರಿದಿದೆ. ದೇಶದ ಒಟ್ಟು ಸಂಪತ್ತಿನ ಬಹುಪಾಲು ಕೆಲವೇ ಮಂದಿಯ ಕೈಯಲ್ಲಿ ಕೇಂದ್ರೀಕೃತವಾಗಿದ್ದು, ಬಹುಸಂಖ್ಯಾತ ಕಾರ್ಮಿಕ ವರ್ಗ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಜಾಗತಿಕ ಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಸ್ಥಗಿತಗೊಂಡ ವೇತನಗಳು ಕಾರ್ಮಿಕರ ಬದುಕನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಿವೆ ಎಂದು ಹೇಳಿದರು. ಮೇ
ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಕಾರ್ಮಿಕರ ಪ್ರಮುಖ ಬೇಡಿಕೆಗಳಾಗಿ ₹36,000 ಕನಿಷ್ಠ ವೇತನ ಜಾರಿ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, ಗುತ್ತಿಗೆ ಪದ್ಧತಿ ನಿರ್ಮೂಲನೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹಾಗೂ ವಸತಿ–ಆರೋಗ್ಯ–ಶಿಕ್ಷಣ ಸೇರಿದಂತೆ ಮೂಲಭೂತ ಹಕ್ಕುಗಳ ಖಾತರಿಯನ್ನು ಒತ್ತಾಯಿಸಲಾಗಿದೆ. ಸರ್ಕಾರ ಕರಡು ಅಧಿಸೂಚನೆಗಳನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದ್ದು, ಬಂಡವಾಳದಾರರ ಪರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಮೇ
ಮೇ 30ರವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದ್ದು, ಬೇಡಿಕೆಗಳು ಈಡೇರಿಸದಿದ್ದರೆ ರಾಜ್ಯದಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಹೋರಾಟದ ಭಾಗವಾಗಿ ಸಹಿ ಸಂಗ್ರಹ ಅಭಿಯಾನ, ಗೇಟ್ ಮೀಟಿಂಗ್ಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಮೇ
ಇದಕ್ಕೂ ಮೊದಲು ನಗರದಲ್ಲಿ ನಡೆದ ಮೇ ದಿನಾಚರಣೆಯ ಅಂಗವಾಗಿ ಹೇಮಾವತಿ ಪ್ರತಿಮೆಯ ಬಳಿಯಿಂದ ಕೆಂಪು ಸಮವಸ್ತ್ರಧಾರಿಗಳ ಕಾರ್ಮಿಕರು ಆಕರ್ಷಕ ಮೆರವಣಿಗೆ ನಡೆಸಿ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಮೆರವಣಿಗೆ ಮಹಾವೀರ ವೃತ್ತದಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಟ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್, ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಡಿಎಚ್ಎಸ್ ಸಂಚಾಲಕ ಎಂ.ಜಿ. ಪೃಥ್ವಿ, ಎಸ್ಎಫ್ಐ ಕಾರ್ಯದರ್ಶಿ ರಮೇಶ್, ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಎಲ್ಐಸಿ ಮುಖಂಡರಾದ ಮಂಜು, ರವಿಕುಮಾರ್ ಕೆ.ಎಸ್., ವಿಶ್ವನಾಥ್ ಹಾಗೂ ಸಿಐಟಿಯು ಪದಾಧಿಕಾರಿಗಳಾದ ಅರವಿಂದ್, ಸೌಮ್ಯ, ಪ್ರಕಾಶ್, ಶೌಲಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : “(ಲೇಬರ್ ಕೋಡ್ಸ್) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media
