ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆ ದುರಂತ: 12 ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಗಡಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಅತಿವೃಷ್ಟಿಯಿಂದ ಉಂಟಾದ ದಿಢೀರ್‌ ಪ್ರವಾಹ ಮತ್ತು ಭೂಕುಸಿತಗಳಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಅನೇಕ ವಾಹನಗಳು ಹೊಯ್ದೊಯ್ಯಲ್ಪಟ್ಟಿದ್ದು, ಮನೆಗಳು ಹಾಗೂ ರಸ್ತೆಗಳು ಭಾರೀ ಹಾನಿಗೊಳಗಾಗಿವೆ. ಜಮ್ಮು

ಪೂಂಚ್ ಜಿಲ್ಲೆಯ ಸುರಂಕೋಟೆ ಪ್ರದೇಶ ಅತ್ಯಂತ ತೀವ್ರವಾಗಿ ಬಾಧಿತವಾಗಿದ್ದು, ಲೋವರ್ ಮುರ್ರಾ ಪ್ರದೇಶದಲ್ಲಿ ಪ್ರವಾಹದ ನೀರು ಮತ್ತು ಭೂಕುಸಿತದ ಮಣ್ಣು ಮನೆಗಳ ಮೇಲೆ ಹರಿದು ಕುಟುಂಬಗಳನ್ನು ಸಿಲುಕಿಸಿತು. ಹಲವು ಮನೆಗಳು ಕುಸಿದುಬಿದ್ದಿವೆ. ಪೂಂಚ್ ಮುಖ್ಯ ವೈದ್ಯಾಧಿಕಾರಿ ಡಾ. ಪರ್ವೇಜ್ ಅಹ್ಮದ್ ಮಾಹಿತಿ ಪ್ರಕಾರ, ಜಿಲ್ಲೆಯಲ್ಲೇ 11 ಮಂದಿ ಮೃತಪಟ್ಟಿದ್ದಾರೆ.

ಮಾರ್ಹೋಟೆ ಪ್ರದೇಶದಲ್ಲಿ ಒಂದು ಬಾಲಕಿ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದು, ಇನ್ನೊಬ್ಬ ಮಹಿಳೆಯ ಮೃತದೇಹ ಧುಂಡಾಕ್ ಸೇತುವೆ ಬಳಿ ಪತ್ತೆಯಾಗಿದೆ. ಒಂದು ಕುಟುಂಬದ ಸದಸ್ಯರು ಮನೆ ಕುಸಿತದಲ್ಲಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಸೋನಂ ವಾಂಗ್‌ಚುಕ್ ಬೆಂಬಲಿಸಿ ಎಸ್‌ಎಫ್‌ಐ ನಾಯಕರ ಅನಿರ್ದಿಷ್ಟಾವಧಿ ಉಪವಾಸ ಆರಂಭ

ಪಕ್ಕದ ರಾಜೌರಿ ಜಿಲ್ಲೆಯಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಬಸ್ ನಿಲ್ದಾಣ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಹಲವು ಮನೆಗಳು ನೀರಿನಲ್ಲಿ ಮುಳುಗಿದವು. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪ್ರವಾಹ ಹೊಯ್ದೊಯ್ದಿದ್ದು, ಹಲವಾರು ವಾಹನಗಳು ಮಣ್ಣಿನಡಿ ಮುಳುಗಿವೆ. ಪಿಂಕಿ ಎಂಬ ಮಹಿಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೃತದೇಹ ಶೋಧ ಕಾರ್ಯ ಮುಂದುವರಿದಿದೆ.

ಪ್ರವಾಹದಿಂದ ತಳ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ನಿರಂತರ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದೆ.

ಉಪರಾಜ್ಯಪಾಲ ಮನೋಜ್ ಸಿನ್ಹಾ ಪರಿಸ್ಥಿತಿಯನ್ನು ಪರಿಶೀಲಿಸಿ, ನಾಗರಿಕ ಆಡಳಿತ, ಪೊಲೀಸ್, ಸೇನೆ, SDRF ಮತ್ತು ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ. ಬಾಧಿತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ತುರ್ತು ನೆರವು ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.

ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ದೆಹಲಿ ಭೇಟಿಯನ್ನು ಕಡಿತಗೊಳಿಸಿ ಜಮ್ಮುವಿಗೆ ಮರಳುತ್ತಿದ್ದು, ಪರಿಸ್ಥಿತಿಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

ಇದೇ ವೇಳೆ ಹವಾಮಾನ ಇಲಾಖೆ ಜುಲೈ 19ರಿಂದ 23ರವರೆಗೆ ಮುಂದುವರಿಯುವ ಮಳೆ ಬಗ್ಗೆ ಎಚ್ಚರಿಕೆ ನೀಡಿದ್ದು, ಭೂಕುಸಿತ, ಪ್ರವಾಹ ಮತ್ತು ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಪಿರ್ ಪಂಜಾಲ್ ಶ್ರೇಣಿ, ಚೆನಾಬ್ ಕಣಿವೆ ಹಾಗೂ ಕಾಶ್ಮೀರದ ಮೇಲ್ದಂಡೆ ಪ್ರದೇಶಗಳು ಅಪಾಯ ಪ್ರದೇಶಗಳೆಂದು ಗುರುತಿಸಲಾಗಿದೆ.

ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ನೋಡಿ: ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *