ಧಾರವಾಡ| ಅಕ್ರಮ ಸಾರಾಯಿ ವಿರುದ್ಧ ಕಠಿಣ ಕ್ರಮಕ್ಕೆ ಸ್ನೇಹಲ್ ಆರ್ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಸಾರಾಯಿ ಅಂಗಡಿಗಳ ವಿರುದ್ಧ ತೀವ್ರ ನಿಗಾವಹಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ, ತಪಾಸಣೆ ಕಾರ್ಯವನ್ನು ಮತ್ತಷ್ಟು ಬಲಪಡಿಸಿ. ಯಾವುದೇ ಸ್ಥಳದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಬಕಾರಿ ಇಲಾಖೆಯ ಸಾಯಿ ಸಮಿತಿ ಸಭೆ ಜರುಗಿಸಿ, ಮಾತನಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು. ಧಾರವಾಡ

ನಕಲಿ ಸಾರಾಯಿ ಹಾಗೂ ಕಳ್ಳ ಬಟ್ಟೆ ಸಾರಾಯಿ ತಯಾರಿಕೆ ಪ್ರಕರಣಗಳು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಹಿನ್ನೆಲೆಯಲ್ಲಿ, ಇವುಗಳ ನಿರ್ಮೂಲನೆಗೆ ವಿಶೇಷ ತಂಡಗಳನ್ನು ರಚಿಸಿ. ಇಂತಹ ಮದ್ಯ ಸೇವನೆಯಿಂದ ಜನರ ಆರೋಗ್ಯ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಈ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು. ಧಾರವಾಡ

ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಗಮನ ಹರಿಸಿ, ಜಿಲ್ಲೆಯ ಗಡಿಭಾಗಗಳಲ್ಲಿ ತಪಾಸಣೆ ಕಠಿಣಗೊಳಿಸಿ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನಗಳ ಪರಿಶೀಲನೆ ಹೆಚ್ಚಿಸಿ, ಸಂಶಯಾಸ್ಪದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಧಾರವಾಡ

ಇದನ್ನೂ ಓದಿ: RTO ದಾಳಿ: ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪಾರ್ಟಿಷನ್ ಡೋರ್ ತೆರವು; 8 ಬಸ್‌ ಸೀಜ್

ಉದ್ಯೋಗದ ಕೊರತೆ ಮತ್ತು ವ್ಯಸನಿ ವ್ಯಕ್ತಿಗಳ ಪರಿಣಾಮವಾಗಿ ಹಲವಾರು ಯುವಕರು ವ್ಯಸನಗಳಿಗೆ ಒಳಗಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅರಿವು ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಧಾರವಾಡ

ವ್ಯಸನಕ್ಕೆ ಒಳಗಾದ ಯುವಕರನ್ನು ಗುರುತಿಸಿ, ಅವರಿಗೆ ಸಮಾಲೋಚನೆ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸುವತ್ತ ಗಮನ ಹರಿಸಬೇಕು. ಕೇವಲ ದಂಡಾತ್ಮಕ ಕ್ರಮಗಳಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ ಅವರನ್ನು ಸರಿಯಾದ ದಾರಿಗೆ ತರುವ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು. ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದ್ದು, ಅಕ್ರಮ ಸಾರಾಯಿ ಮಾರಾಟ ಅಥವಾ ವ್ಯಸನ ಸಂಬಂಧಿತ ಯಾವುದೇ ಮಾಹಿತಿ ದೊರೆತಲ್ಲಿ, ತಕ್ಷಣವೇ ಅಬಕಾರಿ ಇಲಾಖೆಗೆ ತಿಳಿಸಲು ಜಾಗೃತಿ ಮೂಡಿಸಲು ಕ್ರಮವಹಿಸಬೇಕು. ಮಾಡಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯವೆಂದು ಅವರು ತಿಳಿಸಿದರು.

ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಹಾಗೂ ಅದರ ಪರಿಣಾಮಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯವರು ಸನಿತ್ರರ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಬಳಕೆ, ಸಾಗಾಟ ಮತ್ತು ವಿತರಣೆಯ ಮೇಲೆ ನಿಗಾ ವಹಿಸಿದ್ದಾರೆ. ಇಂತಹ ಕಾರ್ಯಗಳು ಇಲಾಖೆಗಳ ಪರಸ್ಪರ ಸಮನ್ವಯದಿಂದ ಆಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿ, ಮಾದಕ ವಸ್ತುಗಳಿಗೆ ಒಳಗಾಗಿರುವ ಅಥವಾ ಅವುಗಳ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಅವರ ಸಂಪರ್ಕ ವಲಯ, ಆರ್ಥಿಕ ಚಟುವಟಿಕೆಗಳು ಹಾಗೂ ಸಂಶಯಾಸ್ಪದ ವರ್ತನೆಗಳನ್ನು ಗಮನಿಸಿ, ಅಗತ್ಯವಿದ್ದಲ್ಲಿ ತನಿಖೆ ನಡೆಸಲಾಗುತ್ತದೆ. ಇದರ ಮೂಲಕ ಮಾದಕ ವಸ್ತುಗಳ ಜಾಲವನ್ನು ಪತ್ತೆಹಚ್ಚಿ, ದೊಡ್ಡ ಮಟ್ಟದ ಜಾಲವನ್ನು ಭೇದಿಸುವುದು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ವ್ಯಸನಕ್ಕೆ ಒಳಗಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಮಾಜವನ್ನು ಮಾದಕ ವಸ್ತುಗಳ ಹಾನಿಯಿಂದ ರಕ್ಷಿಸುವುದಾಗಿದೆ. ಕೇವಲ ಅಪರಾಧಿಗಳನ್ನು ಬಂಧಿಸುವುದರಿಂದ ಇಲಾಖೆ ಕೆಲಸ ಅಲ್ಲ, ಯುವಕರನ್ನು ಸರಿಯಾದ ದಾರಿಗೆ ತರುವುದಕ್ಕೂ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಬಕಾರಿ ಇಲಾಖೆಯ ಉಪಆಯುಕ್ತ ರಮೇಶಕುಮಾರ ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಬಕಾರಿ ಇಲಾಖೆಯಿಂದ ಕೈಗೊಂಡ ನಿಯಂತ್ರಣ ಕ್ರಮಗಳನ್ನು ಮತ್ತು ಪರಿಹಾರ ಕ್ರಮಗಳನ್ನು ವಿವರಿಸಿದರು. ಅಬಕಾರಿ ಅಧೀಕ್ಷಕ ಮಂಜುನಾಥ ಅರೆಗುಳ ಅವರು ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಹೊನಕೇರಿ ಸೇರಿದಂತೆ ಅಬಕಾರಿ, ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಹಶಿಲ್ದಾರರು ವಿಡಿಯೋ ಸಂವಾದ ಮೂಲಕ ಭಾಗವಹಿಸಿದ್ದರು.

ಇದನ್ನೂ ನೋಡಿ: ನಿತೀಶ್ ಕುಮಾರ್ ಎಂಬ ನಾನು…!? ಜೆಡಿಯುಗೆ ಇದು ಕೊನೆಯ ಮೊಳೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *