ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪರಿಶೀಲನೆ ಬೆಂಗಳೂರಿನ ಹಲವು ಹಿರಿಯ ನಾಗರಿಕರಿಗೆ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪರಿಶೀಲನಾ ಕೇಂದ್ರಗಳಲ್ಲಿ ನೋಟಿಸ್, ದಾಖಲೆಗಳು ಹಾಗೂ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯಿಂದ ಹಿರಿಯರು ತೊಂದರೆ ಅನುಭವಿಸುತ್ತಿದ್ದಾರೆ.
ಹೆಸರು ಅಥವಾ ವಿವರಗಳು ಹಳೆಯ ದಾಖಲೆಗಳಿಗೆ ಹೊಂದಿಕೆಯಾಗದ ಮತದಾರರನ್ನು ದಾಖಲೆಗಳೊಂದಿಗೆ ಪರಿಶೀಲನಾ ಕೇಂದ್ರಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ, ಪ್ರಕ್ರಿಯೆ ಕುರಿತು ಸ್ಪಷ್ಟ ಮಾಹಿತಿ ಸಿಗದಿರುವುದು ಹಾಗೂ ದೀರ್ಘಕಾಲ ಕಾಯಬೇಕಾಗಿರುವುದು ಹಿರಿಯ ನಾಗರಿಕರಿಗೆ ಮತ್ತಷ್ಟು ಸಮಸ್ಯೆ ತಂದಿದೆ.
ಕೆಲವು ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಜನರು ಗಂಟೆಗಟ್ಟಲೆ ಕಾಯುತ್ತಿರುವುದು, ಸಮರ್ಪಕ ಆಸನ ವ್ಯವಸ್ಥೆ ಇಲ್ಲದಿರುವುದು ಹಾಗೂ ಏನು ಮಾಡಬೇಕು ಎಂಬುದರ ಬಗ್ಗೆ ಗೊಂದಲ ಉಂಟಾಗಿರುವುದಾಗಿ ಹಿರಿಯ ನಾಗರಿಕರು ತಿಳಿಸಿದ್ದಾರೆ. ಬೆಂಗಳೂರಿನ ಭಾಷಾ ವೈವಿಧ್ಯತೆಯ ಹಿನ್ನೆಲೆಯಲ್ಲಿ ಬಹುಭಾಷೆಯಲ್ಲಿ ಸ್ಪಷ್ಟ ಸೂಚನೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಇದನ್ನೂ ಓದಿ : ರೈಲು ತಾಂತ್ರಿಕ ದೋಷ: ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಿ – ಡಿವೈಎಫ್ಐ
ಪ್ರಯಾಣಿಸಲು ಅಥವಾ ಹಲವು ಗಂಟೆಗಳ ಕಾಲ ಕೇಂದ್ರಗಳಲ್ಲಿ ಕಾಯಲು ಸಾಧ್ಯವಾಗದ ಹಿರಿಯ ನಾಗರಿಕರ ಮನೆಗಳಿಗೆ ಸರ್ಕಾರಿ ಸಿಬ್ಬಂದಿ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ನಡುವೆ, ‘ನೋ ಮ್ಯಾಪಿಂಗ್’ ಅಥವಾ ‘ಅನಾಮಲಿಸ್’ ನೋಟಿಸ್ ಪಡೆದ ಮತದಾರರು ನೋಟಿಸ್ನಲ್ಲಿ ತಿಳಿಸಿರುವ ದಿನಾಂಕದಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ವಿಚಾರಣಾ ಕೇಂದ್ರಕ್ಕೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. SIR ಪ್ರಕ್ರಿಯೆಯಲ್ಲಿ ಅರ್ಹ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದರೆ, ಪ್ರಸ್ತುತ ಶಾಶ್ವತವಾಗಿ ವಾಸಿಸುವ ಸ್ಥಳದಲ್ಲಿ ಫಾರ್ಮ್–6 ಮೂಲಕ ಹೊಸದಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media
