ಮಂಡ್ಯ: ‘ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಡುವ ನೆಪದಲ್ಲಿ ರೈತರ ಜೀವನೋಪಾಯಕ್ಕಿರುವ ತುಂಡು ಜಮೀನನ್ನು ಕಿತ್ತುಕೊಳ್ಳುವುದನ್ನು ಕೈಬಿಟ್ಟು, ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು’ ಎಂದು ಮದ್ದೂರು, ಮಂಡ್ಯ ತಾಲ್ಲೂಕಿನ ರೈತರು ಏಪ್ರಿಲ್ 23ರಂದು ಸಭೆ ಬಹಿಷ್ಕರಿಸಿ ಹೊರನಡೆದರು.
ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು, ಎಲೆಚಾಕನಹಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕುದರಗುಂಡಿ ಹಾಗೂ ಅಕ್ಕಪಕ್ಕದ ರೈತರ ಜೊತೆ ನಡೆದ ಸಭೆಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಬಾರದೆಂದು ಎಲ್ಲರೂ ಹೊರನಡೆದು, ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಮಿರ್ಜಾಪುರ್| ಹಲವು ವಾಹನಗಳ ಸರಣಿ ಅಪಘಾತದಲ್ಲಿ 11 ಮಂದಿ ಸಾವು
ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವು ರೈತಪರ ಸಂಘಟನೆಗಳು ರೈತರ ಪರವಾಗಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಜಮೀನು ಉಳಿಸಿಕೊಡುವಂತೆ ಆಗ್ರಹಿಸಿದರು.
‘ಮದ್ದೂರು ತಾಲ್ಲೂಕಿನ ಕುದುರುಗುಂಡಿ ಸ.ನಂ.245ರಲ್ಲಿ 109 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಳ್ಳಲು ಹೊರಟಿರುವ ಕ್ರಮ ಸರಿಯಿಲ್ಲ. ಈ ಭಾಗದಲ್ಲಿ ಹಳ್ಳಿಗಳನ್ನು ಸ್ಥಾಪಿಸಲು ಬಡ ಕೂಲಿಕಾರರು, ದಲಿತರು ವಲಸೆ ಬಂದಾಗ ಸರ್ಕಾರ ಬಡ ರೈತರಿಗೆ ಜೀವನ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಜಮೀನು ನೀಡಿದೆ. ಈ ಜಮೀನಿನಲ್ಲಿ ಜೀವನೋಪಾಯಕ್ಕೆಂದು ಆಹಾರ ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆ ಜೀವನವನ್ನೇ ಕಸಿದುಕೊಳ್ಳಲು ಹೊರಟಿರುವುದು ಯಾವ ನ್ಯಾಯ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಲ್. ಭರತ್ರಾಜ್ ಪ್ರಶ್ನಿಸಿದರು.
‘ನೊದೆಕೊಪ್ಪಲು ಹಾಗೂ ಎಲೆಚಾಕನಹಳ್ಳಿ ಗ್ರಾಮದ ರೈತರು ಸಭೆಯನ್ನು ಬಹಿಷ್ಕರಿಸಿ ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ. ಈ ಹಿಂದೆಯೂ ಮೂರು ಬಾರಿ ಚರ್ಚೆ ಮಾಡಿದ್ದೆವು. ಅಲ್ಲಿ ಪ್ರತಿಯೊಬ್ಬರೂ ಜಮೀನು ಕೊಡುವುದಿಲ್ಲ ಎಂದು ಮೈಸೂರು ಕೆಐಎಡಿಬಿ ಕಚೇರಿಗೆ ರೈತರು ಭೂ ಸ್ವಾಧೀನಾಧಿಕಾರಿಗಳ ಮುಂದೆ ಲಿಖಿತ ಬರವಣಿಗೆ ನೀಡಿದ್ದೇವೆ’ ಎಂದು ಆರೋಪಿಸಿದರು.
ವಿವಿಧ ಗ್ರಾಮದ ಮುಖಂಡರಾದ ಮಹದೇವು, ಸಿದ್ದಯ್ಯ, ಪುನೀತ್, ಶ್ರೀನಿವಾಸ್, ಬಿ.ಕುಮಾರ್, ರೆಡ್ಡಿ ಗೋಪಾಲ್, ಸತೀಶ್, ದಿನೇಶ್, ಸಂತೋಷ್, ರವಿ, ಪಾಪ,ಶ್ರೀನಿವಾಸ್, ಲಿಖಿತ್ಗೌಡ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ವಿಶ್ವ ಪುಸ್ತಕ ದಿನ: ಶಿಕ್ಷಣದ ಕೇಂದ್ರೀಕರಣದ ವಿರುದ್ಧ ಚಿಂತನೆಯ ಧ್ವನಿ Janashakthi Media
