ಬೆಂಗಳೂರು: ದಲಿತ ಚಳವಳಿಯ ಧ್ವನಿಯಾಗಿದ್ದ ‘ಪಂಚಮ’ ಪತ್ರಿಕೆ ಆರ್ಥಿಕ ಸಂಕಷ್ಟದಿಂದ ಸ್ಥಗಿತಗೊಂಡಿಲ್ಲ. ಚಳವಳಿಯೊಳಗಿನ ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಒಗ್ಗಟ್ಟಿನ ಕೊರತೆಯೇ ಅದರ ಪ್ರಕಟಣೆ ನಿಲ್ಲಲು ಪ್ರಮುಖ ಕಾರಣ ಎಂದು ‘ಪಂಚಮ’ ಪತ್ರಿಕೆಯ ಮಾಜಿ ಪ್ರಕಾಶಕ ಎಚ್. ಗೋವಿಂದಯ್ಯ ಅಭಿಪ್ರಾಯಪಟ್ಟರು. ಪಂಚಮ
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಪಂಚಮ’ ಪತ್ರಿಕೆಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1985ರಲ್ಲಿ ‘ಪಂಚಮ’ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿತು. ಆ ಕಾಲದಲ್ಲೇ ಯಾವುದೇ ಒತ್ತಡಕ್ಕೆ ಮಣಿಯದೆ ಸತ್ಯವನ್ನು ನಿರ್ಭಯವಾಗಿ ಪ್ರಕಟಿಸುವ ನೈತಿಕ ಧೈರ್ಯ ಪತ್ರಿಕೆಗೆ ಇತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸ್ವತಂತ್ರವಾಗಿ ಬರೆಯಲು ಸಾಧ್ಯವಾಗದ ಮಾಧ್ಯಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇಂದಿನ ದಲಿತ ಚಳವಳಿ ಹಲವು ಗುಂಪುಗಳಾಗಿ ವಿಭಜನೆಯಾಗಿದ್ದು, ಚಳವಳಿಯ ಮೂಲ ಆಶಯಗಳು ಹಿನ್ನಡೆ ಅನುಭವಿಸುತ್ತಿವೆ. ವಿವಿಧ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಚಳವಳಿಯ ಸ್ವಾಯತ್ತತೆ ಕುಂದುತ್ತಿದೆ. ಈ ಪರಿಸ್ಥಿತಿಯಿಂದ ಹೊರಬರಬೇಕಾದರೆ ದಲಿತ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೆ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ ಎಂದು ಅವರು ಕರೆ ನೀಡಿದರು. ಪಂಚಮ
ಇದನ್ನೂ ಓದಿ : ಬಿಡದಿ ಟೌನ್ಶಿಪ್ ಯೋಜನೆ : ಬಲವಂತದ ಭೂಸ್ವಾಧೀನ ಇಲ್ಲ, ಡಿಕೆಶಿ ಮಹತ್ವದ ಘೋಷಣೆ – ರೈತರ ಹೋರಾಟಕ್ಕೆ ಜಯ!
ಸಮಾಜದಲ್ಲಿ ಅನ್ಯಾಯದ ವಿರುದ್ಧ ದಿಟ್ಟ ಧ್ವನಿಯಾಗಿ ‘ಪಂಚಮ’ ಪತ್ರಿಕೆ ಕಾರ್ಯನಿರ್ವಹಿಸಿತ್ತು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ದಲಿತ ಸಮುದಾಯದ ಹಕ್ಕುಗಳ ಪರವಾಗಿ ನಿರಂತರವಾಗಿ ಲೇಖನಗಳು, ವರದಿಗಳು ಮತ್ತು ಚರ್ಚೆಗಳನ್ನು ಪ್ರಕಟಿಸುವ ಮೂಲಕ ವಿಶಿಷ್ಟ ಗುರುತನ್ನು ಗಳಿಸಿತ್ತು. ಅದರ ಸಂಪುಟಗಳ ಮರುಬಿಡುಗಡೆ ಹೊಸ ತಲೆಮಾರಿಗೆ ಆ ಚಳವಳಿಯ ಇತಿಹಾಸ ಮತ್ತು ವಿಚಾರಧಾರೆಯನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್.ಎನ್. ಮುಕುಂದರಾಜ್ ವಹಿಸಿದ್ದರು. ಬಿ.ಎಸ್. ಮಂಜುನಾಥ ಸ್ವಾಮಿ, ಇಂದೂಧರ ಹೊನ್ನಾಪುರ, ಶಿವಾಜಿ ಗಣೇಶ್, ದೇವನೂರು ಶಿವಮಲ್ಲು, ಸಿದ್ಧಲಿಂಗಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಹುಲ್ಲುಕೆರೆ ಮಹಾದೇವ, ಇಂದಿರಾ ಕೃಷ್ಣಪ್ಪ, ಎಂ. ವೆಂಕಟಸ್ವಾಮಿ ಹಾಗೂ ರವಿ ಬಾಗಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಪಂಚಮ
ಇದನ್ನೂ ನೋಡಿ : ಪಂಚಮ – ಪತ್ರಿಕೆಯ ಸಂಪುಟಗಳ ಬಿಡುಗಡೆ
