ಜುಬಾ: ಭೀಕರ ಹತ್ಯಾಕಾಂಡವೊಂದು ನಡೆದಿದ್ದು, ಸುಮಾರು 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸುಡಾನ್ನ ರಾಜಧಾನಿ ಜುಬಾ ಸಮೀಪವಿರುವ ಜೆಬೆಲ್ ಇರಾಕ್ ಎಂಬ ಚಿನ್ನದ ಗಣಿ ಪ್ರದೇಶದಲ್ಲಿ ನಡದಿದೆ ಎಂದು ವರದಿಯಾಗಿದೆ.
ಏನಿದು ಘಟನೆ?
ದಕ್ಷಿಣ ಸುಡಾನ್ನ ರಾಜಧಾನಿ ಜುಬಾದಿಂದ ಸ್ವಲ್ಪ ದೂರದಲ್ಲಿರುವ ಜೆಬೆಲ್ ಇರಾಕ್ ಎಂಬ ಪ್ರದೇಶದಲ್ಲಿ ಗಣಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ, ಬಂದೂಕುಧಾರಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪುರುಷರು ಮಾತ್ರವಲ್ಲದೆ, ಗಣಿ ಪ್ರದೇಶದ ಸಮೀಪವಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿ ಸುಮಾರು 73 ಜನ ಗಣಿ ಕಾರ್ಮಿಕರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ.
ದಕ್ಷಿಣ ಸುಡಾನ್ನ ಐ ರೇಡಿಯೋವರದಿ ಮಾಡಿರುವಂತೆ, ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳ ಗುಂಪು ಏಕಾಏಕಿ ಗಣಿ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಜುಬಾದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: ಗ್ರಾಮಾಂತರದಲ್ಲಿ ಕಾಂಗ್ರೆಸ್–ಬಿಜೆಪಿ ತೀವ್ರ ಪೈಪೋಟಿ
ಈ ಕುರಿತು ಮಾತನಾಡಿರುವ ದಕ್ಷಿಣ ಸುಡಾನ್ನ ಉಪಾಧ್ಯಕ್ಷ ಜೇಮ್ಸ್ ವಾನಿ ಇಗ್ಗಾ, “ಜೆಬೆಲ್ ಇರಾಕ್ ಚಿನ್ನದ ಗಣಿಯಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 73 ಜನ ಅಮಾಯಕರು ಸಾವನ್ನಪ್ಪಿದ್ದು, ಇದು ಮಾನವೀಯತೆಯ ಮೇಲಿನ ಪ್ರಹಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಘಟನೆಯನ್ನ ಖಂಡಿಸಿರುವ ಅಲ್ಲಿನ ವಿರೋಧ ಪಕ್ಷವು, ಈ ದಾಳಿಗೆ ಸರ್ಕಾರಿ ಪಡೆಗಳೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದೆ. “ಜೆಬೆಲ್ ಇರಾಕ್ ಚಿನ್ನದ ಗಣಿ ಪ್ರದೇಶವು ಸಂಪೂರ್ಣವಾಗಿ ಸರ್ಕಾರದ ಭದ್ರತಾ ಪಡೆಗಳ ನಿಯಂತ್ರಣದಲ್ಲಿದೆ, ಹೀಗಿದ್ದರೂ ಇಷ್ಟು ದೊಡ್ಡ ಮಟ್ಟದ ದಾಳಿ ನಡೆಯಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದೆ.
ಮುಂದುವರೆದು, ದಾಳಿಯ ಬೆನ್ನಲ್ಲೇ ನೂರಾರು ಜನರು ಪ್ರಾಣ ಉಳಿಸಿಕೊಳ್ಳಲು ಹತ್ತಿರದ ಕಾಡುಗಳಿಗೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಶಿಬಿರಗಳಿಗೆ ಧಾವಿಸಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆಯ ಪ್ರತಿನಿಧಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ದಕ್ಷಿಣ ಸುಡಾನ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media
