ಕೇರಳದ ಪಡಿತರ ಅಂಗಡಿಗಳಲ್ಲಿ ಮೋದಿಯ ಫ್ಲೆಕ್ಸ್‌ ಹಾಕಲ್ಲ – ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರಂ: ರಾಜ್ಯಾದ್ಯಂತ ಪಡಿತರ ಅಂಗಡಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೆಕ್ಸ್ ಬೋರ್ಡ್‌ಗಳನ್ನು ಪ್ರದರ್ಶಿಸುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ರಾಜ್ಯವು ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ವಿಧಾನಸಭೆಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ಚುನಾವಣಾ ಸ್ಟಂಟ್ ಎಂದು ಕರೆದ ಅವರು, “ಈ ಬಗ್ಗೆ ಸರ್ಕಾರವು ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಸಂಪರ್ಕಿಸುವುದರ ಬಗ್ಗೆ ಪರಿಗಣಿಸುತ್ತದೆ” ಎಂದು ಹೇಳಿದ್ದಾರೆ.

ಕೇರಳದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಿದ ಪಿಣರಾಯಿ ವಿಜಯನ್, ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಇದನ್ನು ಬಳಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಕತ್ತಿದ್ದರೆ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಘೋಷಣೆ ಮಾಡಿ: ಅಮಿತ್ ಶಾಗೆ ಸಿದ್ದರಾಮಯ್ಯ ಸವಾಲು

ಕೇರಳದ 10,000 ಪಡಿತರ ಅಂಗಡಿಗಳಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಫ್ಲೆಕ್ಸ್ ಬೋರ್ಡ್‌ಗಳನ್ನು ಸ್ಥಾಪಿಸಿದ ನಂತರ ವರದಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ರಾಜ್ಯದ ಆಹಾರ ಇಲಾಖೆಗೆ ತಿಳಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್.ಅನಿಲ್ ಹೇಳಿದ್ದಾರೆ. 550 ಪಡಿತರ ಅಂಗಡಿಗಳಲ್ಲಿ ಪಿಎಂ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಮತ್ತು ಕೇಂದ್ರ ಸರ್ಕಾರದ ಬ್ರ್ಯಾಂಡಿಂಗ್‌ನೊಂದಿಗೆ ಕ್ಯಾರಿ ಬ್ಯಾಗ್‌ಗಳನ್ನು ವಿತರಿಸಲು ಕೇಂದ್ರವು ಕೇರಳಕ್ಕೆ ನಿರ್ದೇಶಿಸಿದೆ.

ಕೇಂದ್ರ ಸರ್ಕಾರದ ಯೋಜನೆಯಾದ ಭಾರತ್ ರೈಸ್ ಅನ್ನು ಕೆಜಿಗೆ 29 ರೂ.ಗೆ ವಿತರಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಫೆಡರಲ್ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ. “ಕೇರಳವು ಎಫ್‌ಸಿಐನಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಮೂಲಕ ಆಹಾರ ಧಾನ್ಯಗಳನ್ನು ಖರೀದಿಸಿ ಗ್ರಾಹಕರಿಗೆ ಪ್ರತಿ ಕೆಜಿಗೆ ₹ 24 ಕ್ಕೆ ನೀಡುತ್ತಿದೆ. ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಪಡಿತರ ಅಂಗಡಿಗಳನ್ನು ಪರಿಗಣಿಸದೆ ಇತರ ಮಳಿಗೆಗಳ ಮೂಲಕ ಭಾರತ್ ಅಕ್ಕಿಯನ್ನು ವಿತರಿಸುವ ಮೂಲಕ ಕೇಂದ್ರವು ನಿಯಮಾವಳಿಗಳನ್ನು ಬದಲಾಯಿಸಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಅಧಿವೇಶನ | ಸರ್ಕಾರದ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲ ಆರ್‌.ಎನ್. ರವಿ

“ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇರಳ ಸರ್ಕಾರವು ರಾಜ್ಯದ ಜನಸಂಖ್ಯೆಯ 57% ರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಧಾನ್ಯಗಳನ್ನು ನೀಡುತ್ತಿದ್ದರೆ, ಕೇಂದ್ರವು ರಾಜ್ಯದ ಜನಸಂಖ್ಯೆಯ 43% ಗೆ ಮಾತ್ರ ಆಹಾರ ಧಾನ್ಯಗಳನ್ನು ನೀಡುತ್ತಿದೆ.’’ ಎಂದು ಅವರು ಹೇಳಿದ್ದಾರೆ. ಅರ್ಹ ಫಲಾನುಭವಿಗಳು ಮಳಿಗೆಗಳ ಮೂಲಕ ಖಾತರಿಪಡಿಸಿದ ಧಾನ್ಯಗಳನ್ನು ಪಡೆಯುತ್ತಿದ್ದಾರೆಯೆ ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 8 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಕೇರಳ ಸರ್ಕಾರ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿತ್ತು. ಕೇಂದ್ರ ಸರ್ಕಾರವು ಆರ್ಥಿಕ ನಿರ್ಬಂಧಗಳನ್ನು ಹೇರುವ ಮತ್ತು ಫೆಡರಲಿಸಂ ಅನ್ನು ನಾಶಪಡಿಸುವ ಮೂಲಕ ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಕೇರಳದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಮೈತ್ರಿ ಸರ್ಕಾರ ಆರೋಪಿಸಿದೆ.

ವಿಡಿಯೊ ನೋಡಿ: ಗ್ರಂಥಾಲಯ ಸಮ್ಮೇಳನ : ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳು Janashakthi Media

Donate Janashakthi Media

Leave a Reply

Your email address will not be published. Required fields are marked *