ಚಳುವಳಿಗೆ ರಾಜಕೀಯ ಅರಿವು ಮುಖ್ಯ ; ಎಲ್ ಹನುಮಂತಯ್ಯ

ತುಮಕೂರು : ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಹಾಗೂ ನಗರದ ವಿವಿಧ ಕಾರ್ಮಿಕ ಸಂಘಟನೆಗಳು ಒಗ್ಗೂಡಿ, ಮೇ-1’ರ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಟೌನ್-ಹಾಲ್ ಸರ್ಕಲ್’ ಬಳಿ ಕಾರ್ಮಿಕರ ಬಹಿರಂಗ ಸಭೆಯನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯರಾದ ಎಲ್ ಹನುಮಂತಯ್ಯನವರು
ಕಾರ್ಮಿಕರ ಸೌಲಭ್ಯಗಳು, ಕಾನೂನು ಮತ್ತು ಸಾಮಾಜಿಕ ಭದ್ರತೆಗಳನ್ನು ಕಸಿಯುತ್ತಿರುವ ಈ ಕಾಲದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಶಕ್ತಿಸಾಮರ್ಥ್ಯದೊಂದಿಗೆ ಕಾರ್ಮಿಕ ಚಳವಳಿ ಪುಟಿದೇಳಬೇಕು ಎಂದು ಕರೆ ಕೊಟ್ಟರು. ಕೋಮು-ಧ್ರುವೀಕರಣದ ಈ ಕಾಲದಲ್ಲಿ ಸೊರಗಿರುವ ಕಾರ್ಮಿಕರ ಚಳುವಳಿ ಹಾಗೂ ಜನಪರ-ಚಳವಳಿಗಳು ಮತ್ತೆ ಪುಟಿದೇಳಬೇಕು. ತಾತ್ವಿಕ ನೆಲೆಯಲ್ಲಿ ಸಂಘಟನೆಗಳನ್ನು ಮತ್ತೆ ಕಟ್ಟಬೇಕು ಎಂದು ಹೇಳಿದ ಅವರು, ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದವರಿಗೆ ಮತ ನೀಡುವುದು ಸಮಂಜಸವಾದುದಲ್ಲ. ಸಮಾನತೆ ಸೌಹಾರ್ದತೆ ಮರೆತು ಜಾತಿ, ಮತಗಳ ಹಿಂದೆ ಹೋಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಎಲ್ಲಬಗೆಯ ಕಾರ್ಮಿಕರು ಬರಬೇಕು. ಆಳುವ ಸರ್ಕಾರಗಳು ಜೀವನ ನಡೆಸಲು ಬೇಕಾಗುವಷ್ಟು ಕನಿಷ್ಠ ವೇತನವನ್ನೂ ಕಾರ್ಮಿಕರಿಗೆ ನೀಡುತ್ತಿಲ್ಲ. ವೇತನ ನಿಗದಿಯಲ್ಲೂ ಸಹಾ ಸರ್ಕಾರ ಬದ್ಧತೆ ತೋರದಿರುವ ಬಗ್ಗೆ ಕಾರ್ಮಿಕರು ಒಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ. ಇದಕ್ಕಾಗಿ ತನ್ನ ಕಾಲದ ರಾಜಕೀಯ-ಅರಿವು ಸಂಘಟನೆಗಳಿಗೆ, ಚಳವಳಿಗಳಿಗೆ ಮುಖ್ಯವಾಗಿ ಬೇಕು. ಕಾರ್ಮಿಕರು, ಚಳವಳಿಗಾರರು ಈ ಕುರಿತು ಗಂಭೀರವಾಗಿ ಆಲೋಚಿಸಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಲೇಖಕ-ನಾಟಕಕಾರರೂ ಆದ ಎಲ್ ಹನುಮಂತಯ್ಯ ಸಲಹೆ ನೀಡಿದರು.

ಇದನ್ನೂ ಓದಿ : ಪಶ್ಚಿಮ ಬಂಗಾಳ ಚುನಾವಣೆ: ಸಿಸಿಟಿವಿ ಇಲ್ಲದೆ ಇವಿಎಂಗಳನ್ನು ಸ್ಟ್ರಾಂಗ್‌ರೂಮ್‌ಗೆ ಸಾಗಿಸಲಾಗಿದೆ – ಟಿಎಂಸಿ ಆರೋಪ, ತನಿಖೆಗೆ ಒತ್ತಾಯ

ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್, ಭಾರತ ಸರ್ಕಾರವು ಸಂವಿಧಾನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಅಂಶಗಳನ್ನು ಹೊಂದಿರುವ ಕಾರ್ಮಿಕ ಸಂಹಿತೆ ಮತ್ತು ಶ್ರಮನೀತಿ ಜಾರಿಮಾಡಲು ಹೋರಟಿದೆ. ಕಾರ್ಮಿಕರ ತೀವ್ರ ವಿರೋಧದ ನಡುವೆಯೂ ಇದನ್ನು ಜಾರಿ ಮಾಡಲಾಗುತ್ತಿದೆ. ಕಾರ್ಮಿಕರ ವಿರೋಧ ಹೊಂದಿರುವ ಈ ನೀತಿ-ನಿರೂಪಣೆಗಳನ್ನು ಸರ್ಕಾರ ಯಾರ ಹಿತಕ್ಕಾಗಿ ಜಾರಿ ಮಾಡುತ್ತಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಕಾರ್ಮಿಕರ ಐಕ್ಯತೆ ಮತ್ತು ಸಮರಧೀರ ಅಹಿಂಸಾತ್ಮಕ ಹೋರಾಟವೇ ಇಂದಿನ ಅಗತ್ಯ. ಕಾಲಕ್ಕೆ ತಕ್ಕಂತೆ ಕಾರ್ಮಿಕ ಸಂಘಟನೆಗಳನ್ನು ಸುಧಾರಣೆಗೆ ತಂದು ಸಂಘಟನೆಗಳ ಆಲೋಚನೆ-ಚಿಂತನೆಗಳನ್ನು ಪರಿವರ್ತನಶೀಲ ಮತ್ತು ಚಲನಶೀಲಗೊಳಿಸಬೇಕಾದ ತುರ್ತಿದೆ. ಆಳುತ್ತಿರುವ ಸರ್ಕಾರಗಳನ್ನು ಬದಲಿಸುವ ಶಕ್ತಿ, ಕಾರ್ಮಿಕರಿಗಿದೆ. ಸ್ವಚ್ಛ, ಪ್ರಾಮಾಣಿಕ, ಪರಿವರ್ತನಶೀಲ ದೇಶ ನಿರ್ಮಾಣಕ್ಕಾಗಿ ದುಡಿಯುವ ಕಾರ್ಮಿಕರಲ್ಲಿ ಸರ್ಕಾರಗಳನ್ನು ಪಲ್ಲಟಗೊಳಿಸುವ ಶಕ್ತಿಯಡಗಿದೆ. ಅದನ್ನು ವಿವೇಕದಿಂದ ಬಳಸಬೇಕು. ಅದಕ್ಕಾಗಿ ರಾಜಕೀಯ ಅರಿವು ಮತ್ತು ಮುಂದಾಲೋಚನೆಯ ದೂರದೃಷ್ಟಿ ಸಂಘಟನೆಗಳಿಗೆ ಬರಬೇಕು ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ ಮಾತನಾಡಿ, ಆಳುವ ಸರ್ಕಾರಗಳು ಜನಹಿತ ಮರೆತು ಸ್ವಹಿತಕ್ಕೆ – ಬಂಡವಾಳದ ಹಿತಕ್ಕೆ ಮಾತ್ರ ದುಡಿಯುತ್ತಿವೆ ಎಂದು ಆಪಾದಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಮಾತನಾಡಿ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಇಲ್ಲದೆ ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳುತ್ತಿರುವ ಸರ್ಕಾರವೇ ದೊಡ್ಡ-ಶೋಷಕನಂತೆ ವರ್ತಿಸುತ್ತಿದೆ. ಇದು ಸ್ಪಷ್ಟವಾದ ಅಸಮಾನತೆ ಮತ್ತು ಅನ್ಯಾಯ ಎಂದರು.

ಸಭೆಯಲ್ಲಿ ಜಿಲ್ಲಾ ಖಜಾಂಚಿ ಎ.ಲೋಕೇಶ್, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಿ.ಉಮೇಶ್, ಇಬ್ರಾಹಿಂ ಕಲೀಲ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವರಾಜು, ಸಿಐಟಿಯು ಕಾರ್ಯದರ್ಶಿಗಳಾದ ಪುಷ್ಪ, ಶಿವಕುಮಾರಸ್ವಾಮಿ, ಎನ್.ಕೆ.ಸುಬ್ರಮಣ್ಯ, ಅಬ್ದುಲ್ ಮುನಾಫ್, ಉಪಾಧ್ಯಕ್ಷರುಗಳಾದ ಅನುಸೂಯ, ಪಾರ್ವತಮ್ಮ, ಡಿಸಾ ಕಾರ್ಮಿಕ ಸಂಘಟನೆಯ ಚಿಕ್ಕೇಗೌಡ, ಪುಟ್ಪಾತ್ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಸೀಂಅಕ್ರಮ್, ಮುತ್ತುರಾಜ್, ಹಮಾಲಿ ಸಂಘಟನೆಯ ನಾಗರಾಜು, ನಿಖಿತಾ ಕಾರ್ಮಿಕರ ಸಂಘದ ಯತೀಶ್ ಕುಮಾರ್, ಮಹಾನಗರಪಾಲಿಕೆ ನೀರು ಸರಬರಾಜು ಕುಮಾರ್, ಸಂಘಟನೆಯ ಇಂತಿಯಾಜ್ ಪಾಶ, ತಿಪ್ಪೇಸ್ವಾಮಿ, ತುಮಕೂರು ತಾಂತ್ರಿಕ ಸಂಸ್ಥೆಗಳ ಮುಖಂಡ ದೊಡ್ಡರಾಮೇಗೌಡ, ತುಮಕೂರು ವಿವಿಯ ಗಂಗಮ್ಮ ಮತ್ತಿತರರು ಹಾಜರಿದ್ದರು. ಸಭೆಯಲ್ಲಿ ಗಾಯಕ ಅರುಣ್ ಮತ್ತು ತಿರುಮಲಯ್ಯ ಹಾಗೂ ಸಂಗಡಿಗರು ಹೋರಾಟದ ಗೀತೆಗಳನ್ನು ಹಾಡಿದರು.

ಗುತ್ತಿಗೆ ಪದ್ಧತಿ ಮತ್ತು 8 ಗಂಟೆಗಿಂತ ಹೆಚ್ಚಿನ ದುಡಿಮೆ ಮಾನವ-ವಿರೋಧಿಯಾದದ್ದು ; ಎಲ್ ಹನುಮಂತಯ್ಯ

ನೆಹರೂ ಸರ್ಕಾರದ ಸಂದರ್ಭದಲ್ಲಿ ಜನತೆಯ ಹಣದಲ್ಲಿ ಕಟ್ಟಿದ ಸಾರ್ವಜನಿಕ ಉದ್ಯಮಗಳನ್ನು ಮೂರು ಕಾಸಿಗೆ–ಆರು ಕಾಸಿಗೆ ಮಾರಲಾಗುತ್ತಿದೆ. ದೇಶದ ಅಸ್ತಿ ಉಳಿಸುವ ಹೋರಾಟವು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಸ್ವಾತಂತ್ರ್ಯ ಬಂದ ಸಮಯದಲ್ಲಿ ಇದ್ದ ಕಲ್ಯಾಣದ ಪರಿಕಲ್ಪನೆ ಇನ್ನಷ್ಟು ಬಲಿಷ್ಠಗೊಳ್ಳಬೇಕಾಗಿತ್ತು. ಆದರೆ ಅದನ್ನು ದಿನೇದಿನೇ ಕಸಿಯಲಾಗುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಲ್ಲಿ ಸುಮಾರು 14 ಲಕ್ಷ ಮತ್ತು ರಾಜ್ಯ ಸರ್ಕಾರದಲ್ಲಿ 3 ಲಕ್ಷದಷ್ಟು ಉದ್ಯೋಗಗಳು ಖಾಲಿ ಇವೆ, ಇದನ್ನು ತುಂಬಬೇಕಾದ ಅಗತ್ಯವಿದೆ. ಆದರೆ, ಕಾರ್ಮಿಕರ ವಿಷಯದಲ್ಲಿ ಸರ್ಕಾರಗಳು ತಮ್ಮ ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿಲ್ಲ. ಭೂಮಿ ರಾಷ್ಟ್ರದ ಸಂಪತ್ತಾಗಬೇಕು ಎಂದು ಕಮ್ಯುನಿಸ್ಟರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಈ ಚಿಂತನೆ ಸರಿಯಿದೆ. ಆದರೆ, ಅಂಥ ಚಿಂತನೆಗಳನ್ನು ಹೊಂದಿದ್ದಂತಹ ಎಡಪಂಥೀಯ ಪಕ್ಷಗಳೇ ಇಂದು ಸೊರಗಿ ಕುಂತಿವೆ. ಇಂದು ಈ ಎಡಪಕ್ಷಗಳು ಎಲ್ಲ-ರೀತಿಯಲ್ಲೂ ಹೀಗೆ ಶಕ್ತಿಗುಂದಲು ಕಾರಣಗಳೇನು ಎಂಬುದನ್ನು ಆ ಪಕ್ಷದ ನಾಯಕರು ಪರಾಮರ್ಶೆಗೆ ಒಳಪಡಿಸಬೇಕು. ಜನತೆ ಹಸಿವಿನಿಂದ ಸಾಯಬಾರದು ಮತ್ತು ಇದಕ್ಕಾಗಿ ಜನ ವಾಸಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲೇ ಅವರಿಗೆ ಉದ್ಯೋಗ ಮತ್ತು ಅನ್ನ ಸಿಗುವಂತಹ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯುಪಿಎ-ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿತ್ತು. ಅದರ ಹಿಂದೆ ಕಮ್ಯುನಿಸ್ಟ್-ಎಡಪಕ್ಷಗಳ 60’ಕ್ಕೂ ಹೆಚ್ಚುಮಂದಿ ಸಂಸತ್ ಸದಸ್ಯರ ಒತ್ತಾಸೆಯೂ ಕಾರಣವಾಗಿತ್ತು. ಆದರೆ, ಇಂಥ ಮಹತ್ವದ ಜನಪರ ಯೋಜನೆಯನ್ನು ಇಂದಿನ ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ದೇಶದ ಜನ, ಧ್ವನಿ ಎತ್ತುವಂತಾಗಬೇಕು. ಇನ್ನು ಎಂಟು ಗಂಟೆಗಿಂತ ಹೆಚ್ಚಿನ ಸಮಯದ ದುಡಿಮೆ ಮನುಷ್ಯವಿರೋಧಿಯಾದದ್ದು. ಇದನ್ನು ಸರ್ಕಾರಗಳೇ ಮೊದಲು ಕೈಬಿಡಬೇಕು. ಗುತ್ತಿಗೆ ಆಧಾರದಲ್ಲಿ ನೌಕರಿಗೆ ನೇಮಿಸಿಕೊಳ್ಳುವ ಪದ್ಧತಿ ಹೆಚ್ಚೆಚ್ಚು ಬೆಳೆಯುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ, ಸರ್ಕಾರಗಳನ್ನೂ ಈ-ಗುತ್ತಿಗೆ ಕಾರ್ಮಿಕರೇ ನಡೆಸುವಂತಹ ಸ್ಥಿತಿ ಬರಲಿದೆ. ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೇ ವಂಚಿಸುವುದು ನ್ಯಾಯೋಚಿತವಾದುದಲ್ಲ.

ಇದನ್ನೂ ನೋಡಿ :“ಮೇ ದಿನದ ಇತಿಹಾಸ: 8 ಗಂಟೆ ಕೆಲಸದ ಹಕ್ಕು ಹೇಗೆ ಬಂದಿತು?” JanashakthiMedia

Donate Janashakthi Media

Leave a Reply

Your email address will not be published. Required fields are marked *