2024ರ ಲೋಕಸಭಾ ಚುನಾವಣೆ ದೇಶದ ಗಣತಂತ್ರ ವ್ಯವಸ್ಥೆಯನ್ನು ಉಳಿಸುವ ಚುನಾವಣೆಯಾಗಲಿದೆ – ಎಸ್‌ಜಿ ಸಿದ್ದರಾಮಯ್ಯ

ಬಳ್ಳಾರಿ : 2024 ರ ಚುನಾವಣೆ ನಮ್ಮ ದೇಶದ ಗಣತಂತ್ರ ವ್ಯವಸ್ಥೆಯನ್ನು ಉಳಿಸುವ , ಬೆಳೆಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹಿರಿಯ ಸಾಹಿತಿ ಎಸ್‌ ಜಿ ಸಿದ್ದರಾಮಯ್ಯ ತಿಳಿಸಿದರು.

ಅವರಿಂದು ಬಳ್ಳಾರಿಯಲ್ಲಿ ಜಾಗೃತ ನಾಗರಿಕರು ಕರ್ನಾಟಕದ ವತಿಯಿಂದ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, ಇಂದಿನ ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವದ ಅಳಿವು ಉಳಿವಿನ, ಸಂವಿಧಾನದ ಸಂರಕ್ಷಣೆಯ ಚುನಾವಣೆ. ದ್ವೇಷ ರಾಜಕಾರಣ ತುಂಬಿ ತುಳುಕುತ್ತಿರುವ ಈ ಹೊತ್ತಿನಲ್ಲಿ ಇವೆರಡೂ ಅಪಾಯದ ಸ್ಥಿತಿಯಲ್ಲಿವೆ. ಬಹುತ್ವ ಭಾರತದ ಸೌಹಾರ್ದತೆಗೆ ಧಕ್ಕೆ ಒದಗಿದೆ. ಸಮಾಜವನ್ನು ಧರ್ಮ,ಭಾಷೆ,ಜಾತಿಗಳ ಹೆಸರಿನಲ್ಲಿ ಒಡೆಯುವುದನ್ನು ತಡೆಗಟ್ಟುವ ಅನಿವಾರ್ಯತೆ ಇದೆ, ಆದ್ದರಿಂದಲೇ. ಈ ಕಾರಣದಿಂದ ಮತದಾರ ಬಂಧುಗಳು ಯಾವುದೇ ಭಾವನಾತ್ಮಕ ಆವೇಶಗಳಿಗೆ ಬಲಿಯಾಗದೇ ವಿವೇಕಶಾಲಿಗಳಾಗಿ ಮತ ಚಲಾಯಿಸುವ ಅಗತ್ಯವಿದೆ ಎಂದರು.

ಜಾತಿ, ಹಣ, ಹೆಂಡ ಇಂಥಹ ಆಮಿಷಗಳಿಗೆ ಬಲಿಯಾಗದೇ ದೇಶದ ಭವಿಷ್ಯವನ್ನು, ಪ್ರಗತಿಯ ವಿಚಾರಗಳನ್ನು ಗಮನಕ್ಕೆ ತಂದುಕೊಂಡು ಮತ ಚಲಾಯಿಸುವ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಯಾವುದಾದರೂ ಕೊಡುಗೆ ಇದ್ದರೆ ಅದು ಸೌಹಾರ್ದತೆಯ ನೆಲೆಯಲ್ಲಿ ಪ್ರಗತಿಯ ಗುರಿಗಾಗಿ ಹೆಜ್ಜೆ ಇಡುವ, ವೈಚಾರಿಕ ಎಚ್ಚರದ ವೈಜ್ಞಾನಿಕ ಮನೋಧರ್ಮದ ಸುಭದ್ರ ಭಾರತ. ಇದು ನಮ್ಮ ನಿಜವಾದ ಬಹುತ್ವ ಭಾರತ ಎಂದು ಹೇಳಿದರು.

ಚಿಂತಕರಾದ ಕೆ.ಎಸ್‌ ವಿಮಲಾ ಮಾತನಾಡಿ, ಭಾರತ ಒಕ್ಕೂಟ ವ್ಯವಸ್ಥೆಯ ಗಣತಂತ್ರ ದೇಶ. ಇಲ್ಲಿ ಎಲ್ಲ ರಾಜ್ಯಗಳಿಗೂ ತಮ್ಮ ಭಾಷೆ,ಪರಂಪರೆ,ಸಂಸ್ಕೃತಿಗಳ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಹಕ್ಕು ಇದೆ. ಅದಕ್ಕೆ ಧಕ್ಕೆ ತರುವ ಯಾವ ವ್ಯಕ್ತಿಗೂ, ಪಕ್ಷಕ್ಕೂ ಜನ ಮತ ನೀಡಬಾರದು.  ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಏಕಚಕ್ರಾಧಿಪತ್ಯವನ್ನು ಸಾಧಿಸ ಹೊರಟಿರುವವರಿಗೆ ಮತ್ತೆ ಮಣೆ ಹಾಕಿದರೆ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದೀತೆಂಬ ಎಚ್ಚರ ನಮಗೆ ಇರಬೇಕು ಎಂದರು

ನಮ್ಮ ರಾಜ್ಯದ ತೆರಿಗೆಯ ಪಾಲು ನಮಗೆ ಬರಬೇಕಿರುವುದು ನಮ್ಮ ಹಕ್ಕು. ಜಿದ್ದಿನ ರಾಜಕಾರಣದಲ್ಲಿ ನಮ್ಮ ರಾಜ್ಯದ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ನಾವು ನಿಲ್ಲಬೇಕಿದೆ. ಜಿ.ಎಸ್.ಟಿ.ಯಲ್ಲಿ ಕೂಡಾ ನಮ್ಮ ಪಾಲನ್ನು ನಾವು ಪಡೆಯುವುದು ನಮ್ಮ ಹಕ್ಕು. ನಮ್ಮಿಂದಲೇ ತೆರಿಗೆ ವಸೂಲು ಮಾಡಿ ಅದರಲ್ಲಿ ನಮಗೆ ಬರಬೇಕಿರುವ ಪಾಲನ್ನು ಕಿತ್ತುಕೊಳ್ಳುತ್ತಿರುವವರನ್ನು ನ್ಯಾಯವಾಗಿಯೇ ನಾವು ಸೋಲಿಸಬೇಕು. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು ಎಂದು ಸಾರ್ವಜನಕಿರಿಗೆ ಕರೆ ನೀಡಿದರು.

ಚಿಂತಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ,  ಗೋದಾಮುಗಳಲ್ಲಿ ಧಾನ್ಯ ಕೊಳೆಯುತ್ತಿದ್ದಾಗಲೂ ನಮ್ಮ ಜನರಿಗೆ ಅನ್ನ ಭಾಗ್ಯ ಯೋಜನೆಗೆ ರಾಜ್ಯ ಸರಕಾರಕ್ಕೆ ಖರೀದಿಗೂ ಅಕ್ಕಿ ಕೊಡಲು ನಿರಾಕರಿಸಿದ ಅನ್ನ ಕಂಟಕರನ್ನು ಕರ್ನಾಟಕದ ಜನ ತಿರಸ್ಕರಿಸಬೇಕಲ್ಲವೇ? ದೇಶದ ರೈತರ ಬೆನ್ನು ಮೂಳೆ ಮುರಿಯುವ ಕರಾಳ ಕೃಷಿ ಕಾನೂನು ತಂದವರು, ಅದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರ ಮೇಲೆ ಧಾಳಿ, ದಬ್ಬಾಳಿಕೆ ನಡೆಸಿ ನೂರಾರು ಜನರ ಸಾವಿಗೆ ಕಾರಣರಾದವರು, ಬೆಂಬಲ ಬೆಲೆ ಘೋಷಿಸಿ ಕಾನೂನು ತರುವೆನೆಂದು ಮಾತಿಗೆ ತಪ್ಪಿದವರು ಮತ್ತೆ ಅಧಿಕಾರಕ್ಕೆ ಬಂದರೆ ಉಣ್ಣುವ ಅನ್ನಕ್ಕೂ ತತ್ವಾರವಾದೀತಲ್ಲವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿಸಾಮಾಜಿಕ ನೈತಿಕತೆಯೂ ರಾಜಕೀಯ ಮಾಲಿನ್ಯವೂ

ಮಹಿಳೆಯರ ಕುರಿತು ಉದ್ದಾನುದ್ದ ಭಾಷಣ ಮಾಡಿ ಭೇಟಿ ಬಚಾವ್‌ ಬೇಟಿ ಪಢಾವ್‌ ಎಂದವರು ಮಣಿಪುರದಲ್ಲಿ ಹಾಡು ಹಗಲು ಸಾವಿರಾರು ಜನ ಮಹಿಳೆಯರನ್ನು ಬೆತ್ತಲೆಗೊಳಿಸಿ,ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಿ ಕೊಲೆಗೈದರೂ ಸುಮ್ಮನಿದ್ದರಲ್ಲವೇ, ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದರೆ ಇವರು ನಿಂತಿದ್ದು ತಮ್ಮ ಪಕ್ಷದ ಸಂಸದರ ಪರವಾಗಿಯೇ ಅಲ್ಲವೇ? ಇವನ್ನೆಲ್ಲ ಕ್ಷಮಿಸಬೇಕೇ? ತಾನೆಂದಿಗೂ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಸಾರಿಕೊಂಡು ಅಧಿಕಾರಕ್ಕೆ ಬಂದು ಈಗ ಚುನಾವಣಾ ಬಾಂಡ್‌ ಹೆಸರಿನಲ್ಲಿ ಭ್ರಷ್ಟಾಚಾರವನ್ನೇ ಕಾನೂನು ಬದ್ಧಗೊಳಿಸಿ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಲ್ಲದೇ ಭ್ರಷ್ಟಾಚಾರಿಗಳನ್ನು ಸಾಕಲು ಹೊರಟ, ಕೋಮುವಾದವನ್ನು ಬಿತ್ತಿ ಬೆಳೆಯುತ್ತಿರುವ ಬಿ.ಜೆ.ಪಿ.ಗೆ ಮತ ಹಾಕುವುದು ಬೇಡವೇ ಬೇಡ ಎಂದರು.

ದೇಶದ ಸಾರ್ವಜನಿಕ ಸಂಸ್ಥೆಗಳು ನಮ್ಮ ಯುವ ಜನತೆಯ ಉದ್ಯೋಗದ ತವರುನೆಲಗಳು. ಅಂಥವುಗಳನ್ನು ಖಾಸಗಿಯವರಿಗೆ ಮಾರಿ ಯುವಜನರನ್ನು ಪಕೋಡಾ ಮಾರಿರೆಂದು ಹೀಯಾಳಿಸಿ, ಯುವಜನರನ್ನು ಉದ್ಯೋಗ ವಂಚಿತರನ್ನಾಗಿಸುವವರ ವಿರುದ್ಧ ಮತ ಚಲಾಯಿಸುವುದು ಇಂದಿನ ವಿವೇಕವಾಗಿದೆ. ಆದ್ದರಿಂದ ಜನತೆ ಆವೇಶದ ಭಾಷಣಗಳಿಗೆ ಮತಿಯನ್ನು ಮಾರಿಕೊಳ್ಳದೇ ವಿವೇಕಶಾಲಿಗಳಾಗಿ ಮತ ಚಲಾಯಿಸಬೇಕು. ಮತ ಧರ್ಮಗಳ ಹೆಸರಿನಲ್ಲಿ ಒಡೆದಾಳುವವರನ್ನು, ಸಂವಿಧಾನವನ್ನು ಬದಲಿಸುವ ಮಾತನ್ನಾಡುವವರನ್ನು ದೂರ ಇಡದಿದ್ದರೆ ದೇಶದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಒದಗಲಿದೆ ಎಂದು ಸಾಹಿತಿ ವಸಂಧರ ಭೂಪತಿ ಹೇಳಿದರು.

ಇರುವ ಈ ಒಂದು ಅವಕಾಶವನ್ನು ಬಳಸಿಕೊಂಡು ಸಂವಿಧಾನ ಕೊಟ್ಟ ಮಹತ್ತರ ಅಧಿಕಾರವನ್ನು ವಿನಮ್ರತೆಯಿಂದ ಸಂವಿಧಾನದ ಉಳಿವಿಗಾಗಿ, ಪ್ರಜಾಸತ್ತೆಯ ರಕ್ಷಣೆಗಾಗಿ ದೇಶವನ್ನು ಮುನ್ನಡೆಸುವ ಜನಪ್ರತಿನಿಧಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಆರಿಸೋಣ. ಸರ್ವ ಜನಾಂಗದ ಶಾಂತಿಯ ತೋಟವಾಗಿ, ಭವ್ಯ ಭಾರತವನ್ನು ಕಟ್ಟುವ ಮನಸ್ಸುಗಳ ಪಕ್ಷಗಳ ಕಡೆ ನಮ್ಮ ನಡೆ ಎಂದು ಜನತೆ ಎಚ್ಚರಗೊಂಡು ಮತ ನೀಡಬೇಕು. ಪ್ರಶ್ನಿಸುವ ಹಕ್ಕುಗಳನ್ನು ಉಳಿಸಿಕೊಳ್ಳಲು ನಿರ್ಭೀತಿಯಿಂದ, ಕಡ್ಡಾಯವಾಗಿ ಮತ ಚಲಾಯಿಸೋಣ ಎಂದರು.

ಭಯ, ಆತಂಕ, ಆಮಿಷಗಳನ್ನು ಗೆದ್ದು ಪ್ರಜಾಪ್ರಭುತ್ವದ ಶಕ್ತಿ ನಮ್ಮ ಮತದಾನದ ಶಕ್ತಿ ಎಂಬ ಅರಿವಿನಲ್ಲಿ ಮತ ಚಲಾಯಿಸೋಣ. ಪ್ರಜಾಪ್ರಭುತ್ವವನ್ನು ಉಳಿಸೋಣ. ಸಂವಿಧಾನವನ್ನು ಸಂರಕ್ಷಿಸೋಣ. ಧರ್ಮ ಜಾತಿಯ ಆವೇಶದ ಅನಾಹುತಕ್ಕೆ ನಮ್ಮ ಮತಿ ಬಲಿಯಾಗದಿರಲಿ. ದೇಶದ ನಿಜವಾದ ಪ್ರಗತಿಯೇ ನಮ್ಮೆಲ್ಲರ ಆಶಯವಾಗಲಿ ಎಂದು ಮನವಿ ಮಾಡಿದರು.

 

 

Donate Janashakthi Media

Leave a Reply

Your email address will not be published. Required fields are marked *