ಅಕ್ರಮ ಆರೋಪ: KSOU ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ, ಬ್ಯಾಂಕ್ ಖಾತೆ ಫ್ರೀಜ್’ಗೆ ಆದೇಶ

ಬೆಂಗಳೂರು: ಅಕ್ರಮ ಆರೋಪಗಳ ಹಿನ್ನೆಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ವಿಶ್ವವಿದ್ಯಾಲಯದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ ಆದೇಶಿಸಿದೆ.

ವಿಶ್ವವಿದ್ಯಾಲಯದ ಆರ್ಥಿಕ ವ್ಯವಹಾರಗಳಲ್ಲಿ ಕಂಡುಬಂದ ಗಂಭೀರ ಅಕ್ರಮ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ (ವಿಶ್ವವಿದ್ಯಾಲಯಗಳು) ಎನ್ ಕುಮಾರ್ ಅವರು ವಿವಿಧ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆದು, ಕೆಎಸ್‌ಓಯುಗೆ ಸಂಬಂಧಿಸಿದ ಎಲ್ಲಾ ಖಾತೆಗಳು ಹಾಗೂ ಅವುಗಳಿಗೆ ಸಂಪರ್ಕಿತ ಖಾತೆಗಳಿಗೂ ಡೆಬಿಟ್ ಫ್ರೀಜ್ ವಿಧಿಸಲು ಸೂಚಿಸಿದ್ದಾರೆ. ಸಾರ್ವಜನಿಕ ಹಣದ ಭದ್ರತೆ ಹಾಗೂ ನಡೆಯುತ್ತಿರುವ ತನಿಖೆಯ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ದಾವಣಗೆರೆ ಉಪ ಚುನಾವಣೆ | ಚುನಾವಣಾ ಅಖಾಡದಲ್ಲೇ ಉಳಿದ ಸಾದಿಕ್ ಪೈಲ್ವಾನ್

ಸತ್ಯ ಶೋಧನಾ ವರದಿ ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರ ನೇತೃತ್ವದ ಸಮಿತಿಯು ಈ ಅಕ್ರಮಗಳನ್ನು ಗುರ್ತಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ‘ಏಕತಾ ಮಾನವ ದರ್ಶನ’ ಶೈಕ್ಷಣಿಕ ಸಮ್ಮೇಳನವನ್ನು ರದ್ದುಗೊಳಿಸುವಂತೆ ಸರ್ಕಾರ ಸೂಚಿಸಿದ್ದರೂ, ವಿಶ್ವವಿದ್ಯಾಲಯ ಅದನ್ನು ಲೆಕ್ಕಿಸದೇ ಕಾರ್ಯಕ್ರಮವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ವಿವಾದ ಮತ್ತಷ್ಟು ತೀವ್ರಗೊಂಡಿದೆ.

ಆರ್‌ಎಸ್‌ಎಸ್ ಸಿದ್ಧಾಂತವಾದಿಯೊಬ್ಬರು ಆಯೋಜಿಸಿದ್ದ ಈ ಸಮ್ಮೇಳನವನ್ನು ಆಯೋಜಿಸಿದ್ದರು. ಅಗತ್ಯ ಅನುಮತಿ ಹಾಗೂ ಪ್ರಕ್ರಿಯೆಗಳ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ರದ್ದುಗೊಳಿಸಲು ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಬುಧವಾರ ಮೈಸೂರು ಕೆಎಸ್‌ಓಯು ಆವರಣದಲ್ಲಿ ಸಮ್ಮೇಳನ ಆರಂಭವಾಗಿತ್ತು. ಇದು ಸರ್ಕಾರ-ವಿಶ್ವವಿದ್ಯಾಲಯ ನಡುವಿನ ಘರ್ಷಣೆಗೆ ಕಾರಣವಾಗಿದೆ.

ಇದನ್ನೂ ನೋಡಿ : “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media

Donate Janashakthi Media

Leave a Reply

Your email address will not be published. Required fields are marked *