410 ಕೋಟಿ ಜಿಎಸ್‌ಟಿ ಹಗರಣ ಬಯಲು: ನಕಲಿ ಬಿಲ್ ಜಾಲ ಪತ್ತೆ, ಪ್ರಮುಖ ಆರೋಪಿ ಬಂಧನ

ಬೆಂಗಳೂರು: ನಗರದಲ್ಲಿ ಬರೊಬ್ಬರಿ 410 ಕೋಟಿ ಜಿಎಸ್‌ಟಿ ಹಗರಣ ಬಯಲಾಗಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಗರಣ

ಸುಮಾರು 410 ಕೋಟಿ ರೂಪಾಯಿ ಮೊತ್ತದ ಈ ವ್ಯವಹಾರದಲ್ಲಿ 102.5 ಕೋಟಿ ರೂಪಾಯಿ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ. ಈ ವಂಚನೆಯ ಜಾಲದ ರೂವಾರಿ ಆಂಧ್ರಪ್ರದೇಶದ ಚಿತ್ತೂರಿನ ತೌಕೀರ್ ಮೊಹಮ್ಮದ್ (42) ಎಂದು ಗುರುತಿಸಲಾಗಿದೆ.

ಆತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಈತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿದೇಶಕ್ಕೆ ಪರಾರಿಯಾಗಿರುವ ಈತನ ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತನಿಗೆ ತೀವ್ರ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ; ವೀಕ್ಷಿಸುವುದು ಹೇಗೆ?

ಈ ಜಾಲದಲ್ಲಿರುವವರು ಅಮಾಯಕ ಜನರ ಪಾನ್ (PAN) ಮತ್ತು ಆಧಾರ್ ಕಾರ್ಡ್‌ಗಳನ್ನು ಅಕ್ರಮವಾಗಿ ಬಳಸಿ ಹಲವು ನಕಲಿ ಕಂಪನಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದರು.

ಯಾವುದೇ ಸರಕು ಅಥವಾ ಸೇವೆಗಳನ್ನು ಸರಬರಾಜು ಮಾಡದೆಯೇ, ಕೇವಲ ಸಿಮೆಂಟ್, ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈ ಜಾಲ ಹಬ್ಬಿತ್ತು. ನಕಲಿ ಐಟಿಸಿಯನ್ನು ವಿವಿಧ ಕಾಂಟ್ರಾಕ್ಟರ್‌ಗಳಿಗೆ ವರ್ಗಾಯಿಸಿ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದರು.

ತೆರಿಗೆ ಇಲಾಖೆಯಿಂದ ನೋಂದಣಿ ಅಥವಾ ನೋಟಿಸ್ ಬರುತ್ತಿದ್ದಂತೆಯೇ ಜಿಎಸ್‌ಟಿ ನೋಂದಣಿ ರದ್ದು ಮಾಡಿ, ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು.

ಈ ಕುರಿತು ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಕ್ಕೆ ಬರಬೇಕಿದ್ದ 102.5 ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ನೋಡಿ: ‘ಡ್ರೋನ್-ಸಂತೆ’ ಯಲ್ಲೊಂದು ದಿನ….. Janashakthi Media

Donate Janashakthi Media

Leave a Reply

Your email address will not be published. Required fields are marked *