ಕೊಲ್ಕತ್ತಾ: ಚುನಾವಣಾ ಅಧಿಕಾರಿಯೊಬ್ಬರು ನಗರದ ಹೊರವಲಯದಲ್ಲಿ ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ಸಜ್ಜುಗೊಳಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪಾನಿಹಾತಿ ಕ್ಷೇತ್ರದ ಚುನಾವಣಾಧಿಕಾರಿ ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ಅಧಿಕಾರಿಯನ್ನು ತಕ್ಷಣ ವಜಾಗೊಳಿಸಿ ಅವರ ವಿರುದ್ಧ ಚುನಾವಣೆಗೆ ಮುನ್ನವೇ ಕಾನೂನು ಕ್ರಮ ಕೈಗೊಳ್ಳುವಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಾರ್ಟಿ ಆಗ್ರಹಿಸಿದೆ.
ಇದನ್ನೂ ಓದಿ: ಎಕ್ಸಿಟ್ ಪೋಲ್ vs ಫಲಿತಾಂಶ: ಅಂದಾಜು ಮೀರಿದ ಎಲ್ಡಿಎಫ್ ಗೆಲುವು
ಈ ಸಂಬಂಧ ಟಿಎಂಸಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರಿಗೆ ದೂರು ನೀಡಿದೆ. ಸೆಕ್ಟರ್ ಆಫೀಸರ್ ಅತನು ಚಕ್ರಬರ್ತಿ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೇ, ಚುನಾವಣಾ ಸಿಬ್ಬಂದಿಗೆ ಅಗತ್ಯವಾದ ತಟಸ್ಥ ನಿಲುವಿನಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಲಾಗಿದೆ. ಚಕ್ರಬರ್ತಿ ಬಿಜೆಪಿಯ ಧ್ವಜ ಹಾಗೂ ಕರಪತ್ರಗಳನ್ನು ಸಜ್ಜುಗೊಳಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಟಿಎಂಸಿ ದೂರು ನೀಡಿದೆ.
ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ಈ ಸಂಬಂಧ ಸಿಇಓಗೆ ಪತ್ರ ಬರೆದಿದ್ದು, ಬಿಜೆಪಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅಧಿಕಾರಿ ಶಾಮೀಲಾಗಿರುವುದು ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಸಿಬ್ಬಂದಿಯ ಇತರ ಸಂಹಿತೆಗಳ ಉಲ್ಲಂಘನೆ ಎಂದು ಆಪಾದಿಸಿದ್ದಾರೆ. ತಕ್ಷಣವೇ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಚಕ್ರಬರ್ತಿಯವರನ್ನು ತಕ್ಷಣವೇ ಎಲ್ಲ ಚುನಾವಣಾ ಕರ್ತವ್ಯಗಳಿಂದ ಮುಕ್ತಗೊಳಿಸಬೇಕು ಹಾಗೂ ಕಾನೂನು ಪ್ರಕ್ರಿಯೆ ಆರಂಭಿಸಬೇಕು. ಅವರ ನಡತೆಯು ನ್ಯಾಯಸಮ್ಮತ ಚುನಾವಣೆಗಳಿಗೆ ಗಂಭೀರ ಅಪಾಯ ತರುವಂಥದ್ದು ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media
