ಚೆನ್ನೈ: ಮುಂಬರುವ ಚುನಾವಣೆಯ ಹಿನ್ನೆಲೆ, ಆಡಳಿತಾರೂಢ ಡಿಎಂಕೆ (DMK) ಜೊತೆ ಸೀಟ್ ಹಂಚಿಕೆ ವಿಚಾರದಲ್ಲಿ ಉದ್ಭವಿಸಿರುವ ಸ್ಥಗಿತ ಪರಿಸ್ಥಿತಿಯ ನಡುವೆ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) [ಸಿಪಿಐ(ಎಂ)] ಮಾರ್ಚ್ 21ರಂದು ತನ್ನ ರಾಜ್ಯ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸಭೆಗಳನ್ನು ಕರೆಯಲಾಗಿದೆ.
ಪಕ್ಷ ಮೂಲಗಳ ಪ್ರಕಾರ, ಈ ಸಭೆಗಳಲ್ಲಿ ಸಿಪಿಐ(ಎಂ) ಡಿಎಂಕೆ ನೇತೃತ್ವದ ಮೈತ್ರಿಯಲ್ಲಿ ಮುಂದುವರಿಯುವುದೇ ಅಥವಾ ಸೀಟು ಹಂಚಿಕೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಮೊದಲು, ಪಕ್ಷವು ತನ್ನ ಜಿಲ್ಲಾ ಘಟಕಗಳಿಗೆ ಅನುಕೂಲಕರ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಗೆ ಸಿದ್ಧರಾಗಿರಲು ಸೂಚಿಸಿತ್ತು.
ಇದನ್ನೂ ಓದಿ: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಹಸ್ತಕ್ಷೇಪ; ಸಿಎಂ ಸಿದ್ದರಾಮಯ್ಯ ವಿರುದ್ದ ಹೈಕೋರ್ಟ್ ಅಸಮಾಧಾನ
2021ರ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ಸೋಲಿಸುವ ಸಮಗ್ರ ತಂತ್ರದ ಭಾಗವಾಗಿ ಸಿಪಿಐ(ಎಂ) ಆರು ಕ್ಷೇತ್ರಗಳನ್ನು ಒಪ್ಪಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಪ್ರಸ್ತುತ ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದ್ದು, ಪಕ್ಷವು ತನ್ನ ನೆಲಮಟ್ಟದ ಬಲದ ಆಧಾರದ ಮೇಲೆ ನ್ಯಾಯಸಮ್ಮತ ಸೀಟು ಹಂಚಿಕೆಯನ್ನು ನಿರೀಕ್ಷಿಸುತ್ತಿದೆ. ಇದಲ್ಲದೆ, ಹಿಂದಿನ ಬಾರಿ ನೀಡಿದ ಸೀಟ್ಗಳ ಸಂಖ್ಯೆಯನ್ನು ಕಡಿಮೆ ಮಾಡಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಗಿದೆ.
ಚರ್ಚೆಗಳು ಇನ್ನೂ ಅಂತಿಮ ಹಂತಕ್ಕೆ ತಲುಪದ ಹಿನ್ನೆಲೆ, ಸಿಪಿಐ(ಎಂ) ತನ್ನ ನಿಲುವನ್ನು ಮರುಪರಿಶೀಲಿಸುತ್ತಿದೆ. ಶನಿವಾರ ನಡೆಯುವ ಸಭೆಯಿಂದ ಮುಂದಿನ ರಾಜಕೀಯ ದಿಕ್ಕಿನ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ ಎಂದು ಪಕ್ಷ ನಾಯಕರು ತಿಳಿಸಿದ್ದಾರೆ.
ಇದಕ್ಕೂ ಮಧ್ಯೆ, ಸಿಪಿಐ ಪಕ್ಷವು ಡಿಎಂಕೆಯೊಂದಿಗೆ ಐದು ಸೀಟ್ಗಳ ಒಪ್ಪಂದವನ್ನು ಅಂತಿಮಗೊಳಿಸಿರುವುದಕ್ಕೆ ಸಿಪಿಐ(ಎಂ) ಜಿಲ್ಲಾ ಮಟ್ಟದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕ್ರಮ ಎಡಪಕ್ಷಗಳ ಮಾತುಕತೆ ಸಾಮರ್ಥ್ಯವನ್ನು ದುರ್ಬಲಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಪಕ್ಷಗಳು ಒಟ್ಟಾಗಿ ಮಾತುಕತೆ ನಡೆಸಿದ್ದರೆ ಕನಿಷ್ಠ ಆರು ಸೀಟ್ಗಳನ್ನಾದರೂ ಪಡೆಯಬಹುದಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಮುಟ್ಟಿನ ರಜೆಜೆ ಏಕಿಷ್ಟು ಸಿಟ್ಟು , ಅದು ನಮ್ಮ ಹುಟ್ಟಿನ ಗುಟ್ಟು – ಕೆ.ಎಸ್. ವಿಮಲಾ Janashakthi Media
