ಬೆಂಗಳೂರು: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಫ್ಲಿಪ್ಕಾರ್ಟ್ ಇ ಕಾಮರ್ಸ್ ಸಂಸ್ಥೆಯ ವಿರುದ್ದ ಸಿಡಿದೆದ್ದಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಫ್ಲಿಪ್ಕಾರ್ಟ್ ಸಂಸ್ಥೆಯು 1 ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿದ್ದನ್ನ ತೀವ್ರವಾಗಿ ಖಂಡಿಸಿದರು.
“ಫ್ಲಿಪ್ಕಾರ್ಟ್ ವಿರುದ್ಧ ನವದೆಹಲಿಯ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾಗೆ ದೂರು ನೀಡಲಾಗುತ್ತಿದೆ. ಸೆಕ್ಷನ್ 19/1ರಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ಇ ಮೇಲ್ ಮೂಲಕ ತಿಳಿಸುತ್ತೇನೆ” ಎಂದೂ ಹೇಳಿದ್ದಾರೆ.
“ಫ್ಲಿಪ್ಕಾರ್ಟ್ ಸಂಸ್ಥೆಯು ಹಣ ಮಾಡುವ ಭರದಲ್ಲಿ 1 ರೂಪಾಯಿಗೆ 1 ಲೀಟರ್ ಹಾಕು ನೀಡಲು ಮುಂದಾಗಿದೆ. ಇದು ರೈತ ಸಮುದಾಯವನ್ನೇ ಧ್ವಂಸ ಮಾಡಲು ಹೊರಟಂತಿದೆ. ಈ ಸಂಸ್ಥೆ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ, ಇಡೀ ದೇಶದಾದ್ಯಂತ ದಂಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಬೆಂಗಳೂರು | ಯುದ್ಧದ ಹೊರೆ ಜನರ ಮೇಲೆ: ಎಲ್ಪಿಜಿ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ
ರೈತರಿಗೆ ಹೊಡೆತ..
ಫ್ಲಿಪ್ಕಾರ್ಟ್ ಸಂಸ್ಥೆಯು ಮಾರುಕಟ್ಟೆಯನ್ನ ಸಂಪೂರ್ಣವಾಗಿ ಆವರಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಕೆಲಸದಿಂದ ರೈತರಿಗೆ ಹೊಡೆತ ಬೀಳುತ್ತಿದೆ. ಇದಕ್ಕಾಗಿಯೇ ಸುಮಾರು 2 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ಶೇರಿನ ಹಣ ಬಳಸಿ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಾ ಇರುವುದು ಸೂಕ್ತವಲ್ಲʼ ಎಂದು ಡಿ.ಕೆ.ಸುರೇಶ್ ಹೇಳಿದರು.
ʻಹಾಲು ಒಕ್ಕೂಟ ಸಂಸ್ಥೆಗಳು ಸ್ವಾತಂತ್ರ್ಯಪೂರ್ವದಿಂದಲೂ ಇವೆ. ಈ ಸಂಸ್ಥೆಗಳನ್ನ ನಾಶ ಮಾಡುವ ಪ್ರಕ್ರಿಯೆಯನ್ನ ಫ್ಲಿಪ್ಪಾರ್ಟ್ ಮಾಡುತ್ತಿದೆ. ಎಂಎನ್ ಸಿಗಳು ರೈತರ ಹಿತವನ್ನ ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಡಿಮೆ ದರಕ್ಕೆ ಎಷ್ಟು ದಿನ ಹಾಲನ್ನು ನೀಡುತ್ತಾರೆ ಎಂದು ಜಾಹಿರಾತಿನಲ್ಲಿ ತಿಳಿಸಬೇಕು. ರೈತ ಸಂಕುಲವನ್ನ ಹಾಳು ಮಾಡುತ್ತಿರುವ ಈ ಕೆಲಸದಿಂದ ಫ್ಲಿಪ್ ಕಾರ್ಟ್ ಸಂಸ್ಥೆ ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.
ಇನ್ನು ಫ್ಲಿಪ್ಕಾರ್ಟ್ನಿಂದ ಈಗಾಗಲೇ 14.5 ಲಕ್ಷ ಲೀಟರ್ ಹಾಲು ಮಾರಾಟ ಆಗಿದೆ. ಈಗಾಗಲೇ ಎಲ್ಲ ಕಡೆ ಜಾಹೀರಾತು ನೀಡಲಾಗಿದೆ. ಸಾರ್ವಜನಿಕರ ಹಣವನ್ನ ಹೂಡಿಕೆ ಮಾಡಿ ಗ್ರಾಹಕರನ್ನ ಆಕರ್ಷಣೆ ಮಾಡಲಾಗುತ್ತಿದೆ. ಆ ಕಂಪನಿಯವರು ಎಷ್ಟು ದಿನ ಈ ರೀತಿ ಹಾಲು ಕೊಡುತ್ತಾರೆ ಎಂಬುದನ್ನು ಬಹಿರಂಗಗೊಳಿಸಬೇಕು” ಎಂದರು.
ಇದರ ಹಿಂದೆ ಬೇರೆ ಯಾವುದಾದರೂ ಸಂಸ್ಥೆಗಳು ಇವೆಯೇ ಎಂದು ಕೇಳಿದಾಗ, “ಇದರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಬಗ್ಗೆ ಒಂದೆರಡು ಜಾಹೀರಾತು ನೋಡಿದೆ. ಇದರ ಬಗ್ಗೆ ಅಧಿಕಾರಿಗಳ ಬಳಿಯೂ ಚರ್ಚೆ ನಡೆಸುವೆ. ವ್ಯಾಪಾರದ ಹೆಸರಿನಲ್ಲಿ ರೈತ ಸಂಕುಲಕ್ಕೆ ಬೆಂಕಿ ಇಡುವುದು ತರವಲ್ಲ. ದೇಶದ ಒಳಗೆ ಇರುವವರೇ ಹೀಗೆ ಮಾಡುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ.
ರೈತರಿಗೆ ಯುಗಾದಿ ಗಿಫ್ಟ್ ಘೋಷಿಸಿದ ಬಮೂಲ್
ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (BAMUL) ರೈತರಿಗೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಭರ್ಜಿ ಗುಡ್ ನ್ಯೂಸ್ ನೀಡಿದೆ. ಬಂದಿರುವ ಲಾಭಾಂಶವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಇತ್ತೀಚೆಗೆ ತಿಳಿಸಿದ್ದಾರೆ.
ಬಮೂಲ್ ಪ್ರಸಕ್ತ ಸಾಲಿನಲ್ಲಿ ಅಂದಾಜು 60 ಕೋಟಿ ರೂಪಾಯಿ ಲಾಭ ಪಡೆದಿದೆ. ಕಳೆದ ಸಾಲಿನಲ್ಲಿ ಸುಮಾರು 14.5 ಕೋಟಿ ನಷ್ಠ ಅನುಭವಿಸಿದ್ದ ಬಮೂಲ್ ಈ ಬಾರಿ ಲಾಭದತ್ತ ಮುಖ ಮಾಡಿದೆ. ಇದಕ್ಕೆ ಕಾರಣ ನಮ್ಮ ರೈತರು ಮತ್ತು ಉದ್ಯೋಗಿಗಳು. ಆದ್ದರಿಂದ ಬಂದಿರುವ ಲಾಭವನ್ನು ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media
