ಹಾವೇರಿ ವಿಶ್ವವಿದ್ಯಾಲಯ ಅಭಿವೃದ್ಧಿಗೆ ₹100 ಕೋಟಿ ವಿಶೇಷ ಅನುದಾನಕ್ಕೆ ಮನವಿ

ಹಾವೇರಿ: ವಿಶ್ವವಿದ್ಯಾಲಯ ಉಳಿಸಿ – ವಿಶ್ವವಿದ್ಯಾಲಯದ ಅಭಿವೃದ್ಧಿಯನ್ನು ವಿಶೇಷ ಆದ್ಯತೆಯಾಗಿ ಪರಿಗಣಿಸಿ 100 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನುದಾನ ಒದಗಿಸಲು ರಾಜ್ಯ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದು, ಇನ್ನು ಮುಂದೆ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ವಿ. ವಿ ಯ ಕ್ಯಾಂಪಸ್ ನಲ್ಲಿಯೇ ಆಯೋಜಿಸುವಂತೆ ವಿ.ವಿ ಉಪಕುಲಪತಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಗೌರವಾನ್ವಿತ ರಾಜ್ಯಪಾಲರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಅಭಿವೃದ್ಧಿ

ಏಪ್ರಿಲ್‌ 6ರಂದು ನಗರದ ಪ್ರವಾಸಿ ಮಂದಿರದ ವಿವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ವಿ.ವಿ ಉಳಿಸಿ ಹೋರಾಟ ಸಮಿತಿಯು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಡಾ‌ ಥಾವರಚಂದ ಗೆಹ್ಲೊಥ್ ಅವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ, ದಾಸವೇರಣ್ಯರು, ಶರಣರು, ಸಂತರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಹಾಗೂ ಸೌಹಾರ್ದ-ಸಾಮರಸ್ಯದ ಬಹುತ್ವ ಪರಂಪರೆಯ ಹೆಮ್ಮೆಯ ನೆಲ, ಯಾಲಕ್ಕಿ ಕಂಪಿನ ನಗರ; ಹಾವೇರಿ ಜಿಲ್ಲೆಯ ಹೆಮ್ಮೆಯಾಗಿರುವ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲು, ಹಾವೇರಿ ಜಿಲ್ಲೆಗೆ ಆಗಮಿಸುತ್ತಿರುವ ತಮಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಹೃತ್ಪೂರ್ವಕ ಸ್ವಾಗತವನ್ನು ಕೋರಿತು.

ಹಾವೇರಿ ವಿಶ್ವವಿದ್ಯಾಲಯ ಅಭಿವೃದ್ಧಿಯ ಕುರಿತು ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಾವೇರಿ ವಿಶ್ವವಿದ್ಯಾಲಯವು 19 ಮಾರ್ಚ್ 2023 ರಲ್ಲಿ ಆರಂಭಗೊಂಡು ಮೂರನೇ ವರ್ಷವಾಗಿದೆ. ನಮ್ಮ ವಿ.ವಿ ವ್ಯಾಪ್ತಿಯಲ್ಲಿ 42 ಪದವಿ ಕಾಲೇಜುಗಳು ಮತ್ತು‌ ವಿ.ವಿ ಯ ವಿವಿಧ ಕೋರ್ಸುಗಳಲ್ಲಿ 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ಆರೋಪ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಕಳೆದ ವರ್ಷ ರಾಜ್ಯ ಸರಕಾರ ನಮ್ಮ ಹಾವೇರಿ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದಲ್ಲಿ 2023 ರಲ್ಲಿ ಹೊಸದಾಗಿ ಆರಂಭಗೊಂಡ 7 ವಿಶ್ವ ವಿದ್ಯಾಲಯಗಳನ್ನು ವಿಲೀನದ ಹೆಸರಲ್ಲಿ ಮುಚ್ಚಲು ಹೊರಟಾಗ ಜಿಲ್ಲೆಯ ವಿದ್ಯಾರ್ಥಿ-ಯುವಜನರು, ಎಲ್ಲ ಜನಪರ ಹಾಗೂ ಶಿಕ್ಷಣಪ್ರೇಮಿ ಸಂಘಟನೆಗಳು, ಎಲ್ಲ ಧಾರ್ಮಿಕ ಮುಖಂಡರು ಐಕ್ಯತೆಯಿಂದ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವು ಹಂತಗಳಲ್ಲಿ ತೀವ್ರ ತೆರನಾದ ಹೋರಾಟವನ್ನು ನಡೆಸಿದ್ದರಿಂದಾಗಿ ರಾಜ್ಯ ಸರಕಾರ ವಿಶ್ವವಿದ್ಯಾಲಯಗಳನ್ನು ವಿಲೀನದ ಹೆಸರಲ್ಲಿ ಮುಚ್ಚುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿತು. ಆ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮುಚ್ಚದಂತೆ ಕ್ರಮ ಕೈಗೊಳ್ಳುವಂತೆ ಕೋರಿ ತಮಗೂ ಕೂಡ ಮನವಿ ಸಲ್ಲಿಸಲಾಗಿತ್ತು.

ಅಗತ್ಯ ಅನುದಾನ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಲ್ಲಿಯೂ ನಮ್ಮ ಹಾವೇರಿ ವಿಶ್ವವಿದ್ಯಾಲಯವು ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಈ ಸಲ ನಮ್ಮ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯವಾಗಿದೆ. ಆದರೆ ಪ್ರಥಮ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ಆಯೋಜಿಸದೇ ಬೇರೆ ಕಾಲೇಜಿನಲ್ಲಿ ಆಯೋಜಿಸಿರುವುದು ಬೇಸರ ತರಿಸಿದೆ. ವಿಶ್ವವಿದ್ಯಾಲಯದ ಆವರಣದಲ್ಲಿಯೇ ಘಟಿಕೋತ್ಸವ ನಡೆಸಬೇಕೆಂಬುದು ನಮ್ಮ ಜಿಲ್ಲೆಯ ಎಲ್ಲ ಜನರ ಆಶಯವಾಗಿದೆ ಎಂಬುದನ್ನು ಮನಃಪೂರ್ವಕವಾಗಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಮನವಿ ಪತ್ರದಲ್ಲಿ ಬರೆಯಲಾಗಿದೆ.

ನಮ್ಮ ಹಾವೇರಿ ವಿಶ್ವವಿದ್ಯಾಲಯದ ಅಭಿವೃದ್ದಿಗೊಳ್ಳಲು ಈ ಕೆಳಗಿನ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ.

• 42 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವ ನಮ್ಮ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ, ಖಾಯಂ ಸಿಬ್ಬಂದಿ ನೇಮಕ, ಹೊಸ ವಿಭಾಗಗಳು; ಕೋರ್ಸುಗಳು, ಅಧ್ಯಯನ ಪೀಠಗಳು, ಕಟ್ಟಡಗಳು- ಸಭಾಂಗಣ, ಹಾಸ್ಟೇಲ್ ಗಳು, ಕ್ಯಾಂಟೀನ್, ಸಮರ್ಪಕ ರಸ್ತೆ ಸೇರಿದಂತೆ ಇನ್ನೂ ಹಲವು ಮೂಲಭೂತ ಸೌಲಭ್ಯಗಳು ಅಗತ್ಯವಿದೆ.

• ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳು, ಕುಲಸಚಿವರು (ಮೌಲ್ಯಮಾಪನ) ಹಾಗೂ ಕುಲಸಚಿವರು (ಆಡಳಿತ) ಕೇವಲ ಈ ಮೂವರು ಅಧಿಕಾರಿಗಳು ಮಾತ್ರ ಖಾಯಂ ನೌಕರರಿದ್ದಾರೆ. ಉಳಿದಂತೆ ಎಲ್ಲ ಬೋಧಕ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರಾಗಿ ಹಾಗೂ ಬೋಧಕೇತರ ಸಿಬ್ಬಂದಿಗಳು ಖಾಯಂಮೇತರರಾಗಿ ದುಡಿಯುತ್ತಿದ್ದಾರೆ. ವಿ.ವಿ ಗೆ ಅಗತ್ಯವಿರುವ ಹಾಗೂ ಖಾಲಿಯಿರುವ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.

• ವಿ.ವಿ ಗೆ ಅಗತ್ಯವಿರುವ ಕಟ್ಟಡಗಳು, ಅರ್ಜಿ ಹಾಕುವ ಎಲ್ಲ  ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಕಲ್ಪಿಸಲು ಅಗತ್ಯ  ಹಾಸ್ಟೇಲ್ ಮಂಜೂರುಗೊಳಿಸುವುದು, ಘಟಿಕೋತ್ಸವ ಸೇರಿದಂತೆ ವಿ.ವಿ ಯ ಇನ್ನಿತರ ದೊಡ್ಡ  ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಸಭಾಂಗಣ ನಿರ್ಮಾಣ, ಕ್ಯಾಂಟೀನ್, ಸಮರ್ಪಕ ರಸ್ತೆ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಹೊಸ ವಿಭಾಗಗಳು; ಕೋರ್ಸುಗಳು, ಅಧ್ಯಯನ ಪೀಠಗಳನ್ನು ಆರಂಭಿಸುವುದು. ನಮ್ಮ ಜಿಲ್ಲೆಯ ಬೌಧ್ಧಿಕ ಸ್ವಾವಲಂಬನೆಯ ಹಾಗೂ ಸಂಶೋಧನಾ ಕೇಂದ್ರವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ವಿಶೇಷವಾಗಿ ಪರಿಗಣಿಸಿ, ವಿ.ವಿ ಅಭಿವೃದ್ಧಿಗಾಗಿ ವೀಶೇಷ ಅನುದಾನವಾಗಿ ಒಂದು ನೂರು ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮತ್ತು ಯು.ಜಿ.ಸಿ ಗೆ ಸೂಕ್ತ ಶಿಫಾರಸ್ಸು ಮಾಡಬೇಕು.

• ಇನ್ನು ಮುಂದೆ ನಡೆಯುವ ಹಾವೇರಿ ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಕ್ಯಾಂಪಸ್ ನಲ್ಲಿಯೆ ಆಯೋಜಿಸುವಂತೆ ಉಪಕುಲಪತಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಬೇಕು.

• ವಿಶ್ವವಿದ್ಯಾಲಯದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲು ನಮ್ಮ ಜಿಲ್ಲೆಯ ಪ್ರದೇಶವ್ಯಾಪ್ತಿಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯ-ಸಾಂಸ್ಕೃತಿಕ, ಕೃಷಿ, ಮಾನವ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಉತ್ಕೃಷ್ಠ ಸಂಶೋಧನೆಗಳು ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

• ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ನಮ್ಮ ಹಾವೇರಿ ವಿಶ್ವ ವಿದ್ಯಾಲಯವನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು.

• ಭವಿಷ್ಯದಲ್ಲಿ ಜರುಗಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸನ್ಮಾನಕ್ಕೆ ವಿಶೇಷವವಾಗಿ ತಳ ಸಮುದಾಯಗಳ, ದಲಿತ, ಹಿಂದುಳಿದ-ಅಲ್ಪ ಸಂಖ್ಯಾತರು ಸೇರಿದಂತೆ ನಾಡು ನುಡಿಗೆ, ಶಿಕ್ಷಣ, ಸಾಹಿತ್ಯ-ಸಂಸ್ಕೃತಿ, ಜನರ ಬದುಕಿನ ಏಳಿಗೆಗಾಗಿ ಅರ್ಪಣಾ ಮನೋಭಾವದಿಂದ ಶ್ರಮಿಸಿರುವ ಮಹನೀಯರನ್ನು ಪರಿಗಣಿಸಲು‌ ಸಾಧ್ಯವಾಗಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಮುಖಂಡರು ವಿನಂತಿಸಿದರು.

ಮನವಿ ಸ್ವೀಕರಿಸಿ ಹೋರಾಟ ಸಮಿತಿಯ ಮುಖಂಡರೊಂದಿಗೆ ತಾಳ್ಮೆಯಿಂದ ಚರ್ಚಿಸಿದ ಮಾನ್ಯ ರಾಜ್ಯಪಾಲರು ಮನವಿ ಪತ್ರದಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹಾಗೂ ಮುಂದಿನ ಸಲ ಘಟಿಕೋತ್ಸವವನ್ನು ಕ್ಯಾಂಪಸ್ ನಲ್ಲಿ ನಡೆಸುವಂತೆ ನಿರ್ದೇಶನ ನೀಡುವುದಾಗಿ ಹೇಳಿದರು.

ಮಾನ್ಯ ರಾಜ್ಯಪಾಲರಿಗೆ ಮನವಿ ಕೊಡಲು ಮುತುವರ್ಜಿವಹಿಸಿ ಅವಕಾಶ ಕಲ್ಪಿಸಿದ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಯುತ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲ ಪೋಲಿಸ್ ವರೀಷ್ಠಾಧಿಕಾರಿಗಳಾದ ಶ್ರೀಮತಿ ಯಶೋಧಾ ಒಂಟಿಗೋಡಿ ಅವರಿಗೂ ಹಾಗೂ ಸಹಕರಿಸಿದ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ವಿ.ವಿ ಉಳಿಸಿ ಹೋರಾಟ ಸಮಿತಿಯು ಅಭಿನಂದನೆ ಸಲ್ಲಿಸಿತು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಬಸವರಾಜ ಪೂಜಾರ, ಹೋರಾಟ ಸಮಿತಿಯ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರಾದ ಶ್ರೀಮತಿ ಪರಿಮಳ ಜೈನ, ಸಮಿತಿ ಸದಸ್ಯರು ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷರಾದ  ಬಸವರಾಜ ಎಸ್, ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ,  ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕರಾದ ಎಂ. ಆಂಜನೇಯ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಶಹರ ಘಟಕದ ಅಧ್ಯಕ್ಷರಾದ ಸುರೇಶ ಛಲವಾದಿ, ಜಿಲ್ಲಾ ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ತಿಪ್ಪೇಸ್ವಾಮಿ ಹೊಸಮನಿ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಮಕಬುಲ್ ಎಂ.ಕೆ, ಎಸ್ಎಫ್ಐ ಜಿಲ್ಲಾ ಮುಖಂಡರಾದ ಅರುಣ ನಾಗಾವತ್ ಹಾಗೂ ಸಂಗೀತಾ ಮೋಟಳ್ಳಿ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್.‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *