ಉಡುಪಿ: ಕೊರಗ ಸಮುದಾಯದ ವ್ಯಕ್ತಿಯನ್ನು 30 ವರ್ಷಗಳಿಂದ ಜೀತದಾಳಾಗಿ ಇಟ್ಟುಕೊಂಡು, ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ರಜನಿ ಶೆಟ್ಟಿ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ.
ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸೇರಿದ ಕನ್ಯಾನ ಗ್ರಾಮದ ನಾಗ(65) ಅವರನ್ನು ಸುಮಾರು 30 ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಕೆಲಸಕ್ಕೆ ಇಟ್ಟುಕೊಂಡಿದ್ದರು.
ಇದನ್ನೂ ಓದಿ: ಬೇಡಿಕೆಗಳನ್ನು ಈಡೇರಿಸುವ ಭರವಸೆ: ಮುಷ್ಕರ ಹಿಂಪಡೆದ ವೈದ್ಯರು
ಸುಬ್ಬಣ್ಣ ಶೆಟ್ಟಿ ನಿಧನರಾದ ನಂತರ ಅವರ ಮಗಳು ರಜನಿ ಶೆಟ್ಟಿ, ಅಳಿಯ ಕರುಣಾಕರ ಶೆಟ್ಟಿ ಕೂಡ ನಾಗ ಅವರನ್ನು ದನ ಕಾಯುವ ಮತ್ತು ತೋಟದ ಕೆಲಸಕ್ಕಾಗಿ ಮನೆಯಲ್ಲಿಟ್ಟುಕೊಂಡಿದ್ದರು.
ನಾಗ ಅವರಿಂದ 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಕೊಂಡಿದ್ದರು. ಸರಿಯಾಗಿ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಸೌಕರ್ಯ ನೀಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು. ತಿಂಡಿಯ ತಟ್ಟೆ, ಬಟ್ಟೆ ಎಲ್ಲವನ್ನು ದನದ ಕೊಟ್ಟಿಗೆಯಲ್ಲಿ ಇಡುವಂತೆ ಒತ್ತಾಯಿಸಿದ್ದರು. ಮನೆಯಿಂದ ಹೊರಗೆ ಹೋಗಲು ಬಿಡದೆ ದೌರ್ಜನ್ಯ ಎಸಗಿದ್ದರು ಎಂದು ನಾಗ ದೂರು ನೀಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಜನಿ ಶೆಟ್ಟಿ ಬಂಧಿಸಿದ್ದು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಇದನ್ನೂ ನೋಡಿ: ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ – ಡಾ. ವಿನಯಾ ಒಕ್ಕುಂದ Janashakthi Media
