ಬೆಂಗಳೂರು: ಕನ್ನಡಪರ ಹೋರಾಟಗಾರರು ಸೇರಿದಂತೆ ಅನೇಕರು ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್ ನಿಲುವನ್ನು ಸ್ವಾಗತಿಸಿದ್ದಾರೆ. ತೃತೀಯ
ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದಷ್ಟೇ ಅಲ್ಲದೆ, ಪ್ರಚಾರದ ಹಂಬಲದಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿರುವುದು ಹಿಂದಿ ಹೇರಿಕೆ ಪರವಾಗಿ ವಾದ ಮಾಡುತ್ತಿದ್ದವರಿಗೆ ನೇರವಾಗಿ ಮಾಡಿದ ಕಪಾಳಮೋಕ್ಷ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ತನ್ನ ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿ ಗೊಂದಲ ಉಂಟುಮಾಡಿದ್ದರು. ಹಿಂದಿಯೂ ಸೇರಿದಂತೆ ಮೂರನೇ ಭಾಷೆಯ ಕಲಿಕೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರಲಿಲ್ಲ. ಒಂದು ವೇಳೆ ಹಿತಾಸಕ್ತಿ ಅರ್ಜಿ ಸ್ವೀಕೃತವಾಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ವಿದ್ಯಾರ್ಥಿಗಳ ಪರ ಕಾನೂನು ಹೋರಾಟ ನಡೆಸಲು ಸಜ್ಜಾಗಿತ್ತು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆ ಅವಮಾನ ಆರೋಪ; ಎಂಎಸ್ಐಎಲ್ ಅಧಿಕಾರಿಗಳ ವಿರುದ್ಧ ದೂರು
‘ಪೂರ್ತಿ ವಿಚಾರ ತಿಳಿಯದೆ, ಕೇವಲ ಪ್ರಚಾರಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಸಿದವರಿಗೆ ದಂಡ ವಿಧಿಸಿ, ಹೈಕೋರ್ಟ್ ನೀಡಿರುವ ಸೂಚನೆಗಳು ಅರ್ಜಿ ಸಲ್ಲಿಸಿದವರಿಗೆ ಮಾತ್ರವಲ್ಲ, ಪೂರ್ತಿ ವಿಚಾರ ತಿಳಿಯದೇ ಕಮೆಂಟ್ ಮಾಡಿದವರಿಗೂ ಅನ್ವಯವಾಗುತ್ತದೆ’ ಎಂದು ಹೋರಾಟಗಾರ ಕವಿರಾಜ್ ಪ್ರತಿಕ್ರಿಯಿಸಿದ್ದಾರೆ.
‘ಹೈಕೋರ್ಟ್ ಇದರ ಜೊತೆಗೆ ಇನ್ನೊಂದು ಕೆಲಸ ಮಾಡಬೇಕಿತ್ತು. ವಿಜಯೇಂದ್ರ, ಆರ್. ಅಶೋಕ, ಸುರೇಶ್ ಕುಮಾರ್, ಥಾವರಚಂದ್ ಗೆಹಲೋತ್ ಇವರನ್ನೆಲ್ಲ ಕರ್ನಾಟಕದಿಂದ ಒದ್ದೊಡಿಸುವ ಆದೇಶ ನೀಡಬೇಕಾಗಿತ್ತು’ ಎಂದು ನಾಗೇಗವ್ಡ ಕೆ.ಎಸ್. ಸಲಹೆ ನೀಡಿದ್ದಾರೆ.
‘ಶಿಕ್ಷಣದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಬಾರದು ಎಂದು ನಾವು ಹಿಂದಿ ವಿರೋಧಿ ಕರ್ನಾಟಕ ಎಂಬ ಸಂಘಟನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೂ ಚರ್ಚಿಸಿದ್ದೆವು. ಅದರಂತೆ ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆ ಆದೇಶವನ್ನು ಹೈಕೊರ್ಟ್ ಎತ್ತಿ ಹಿಡಿದಿದೆ’ ಎಂದು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಎಕ್ಸಿಟ್ ಪೋಲ್ vs ಫಲಿತಾಂಶ: ಅಂದಾಜು ಮೀರಿದ ಎಲ್ಡಿಎಫ್ ಗೆಲುವು Janashakthi Media
