ಚಾಮರಾಜನಗರ: ಕಬ್ಬು ಬೆಳೆಗಾರರ ಸಂಘವು ವನ್ಯಪ್ರಾಣಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಅರಣ್ಯ ಸಚಿವರ ಪ್ರಸ್ತಾವನೆ ಮತ್ತು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ.
ಚಾಮರಾಜನಗರದ ಮರಿಯಾಲ ಮೇಲ್ಸೇತುವೆ ಬಳಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೈಸೂರು-ಚಾಮರಾಜನಗರ ರಾಜ್ಯ ಹೆದ್ದಾರಿ ತಡೆದ ಪ್ರತಿಭಟನಾಕಾರರು, ಸರ್ಕಾರದ ವನ್ಯಜೀವಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಮೃತ, ನಿವೃತ್ತ ನೌಕರರ ಹೆಸರಿನಲ್ಲಿ ₹4.24 ಕೋಟಿ ಅಕ್ರಮ; ಸಹಾಯಕಿ ಅಮಾನತು
ಭಾಗ್ಯರಾಜ್ ಕಟು ಟೀಕೆ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜ್, ಸರ್ಕಾರ ಮತ್ತು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿರೋದು ಅಮಾಯಕ ವನ್ಯಪ್ರಾಣಿಗಳಿಗಲ್ಲ, ಬದಲಿಗೆ ಕುಟುಂಬ ರಾಜಕಾರಣ ಮಾಡುವವರಿಗೆ ಹಾಗೂ ಪಾರ್ಲಿಮೆಂಟ್ ಮತ್ತು ವಿಧಾನಸೌಧದೊಳಗೆ ಭ್ರಷ್ಟಾಚಾರ ನಡೆಸುತ್ತಿರುವ ರಾಜಕಾರಣಿಗಳಿಗೆ,” ಎಂದು ಅವರು ಕಿಡಿಕಾರಿದರು. ವನ್ಯಜೀವಿಗಳಿಗೆ ಸಂತಾನಹರಣ ಮಾಡುವುದು ಅವಿವೇಕದ ಪರಮಾವಧಿ ಎಂದು ಅವರು ಅರಣ್ಯ ಸಚಿವರ ಹೇಳಿಕೆಯನ್ನು ಖಂಡಿಸಿದರು.
ಪ್ರಿಯಾಂಕಾ ವಾದ್ರಾ ವಿರುದ್ಧ ಆಕ್ರೋಶ
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಪ್ರಿಯಾಂಕಾ ವಾದ್ರಾ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅವರ ವಿರುದ್ಧ ದಿಕ್ಕಾರ ಕೂಗಿದರು. “ತಮ್ಮ ರಾಜಕೀಯ ಹಿತಾಸಕ್ತಿಗಾಗಿ ವನ್ಯಪ್ರಾಣಿಗಳನ್ನು ಬಲಿ ಕೊಡಲು ಪ್ರಿಯಾಂಕಾ ವಾದ್ರಾ ಮುಂದಾಗಿದ್ದಾರೆ” ಎಂದು ಸಂಘದ ಕಾರ್ಯಕರ್ತರು ಆಪಾದಿಸಿದರು. ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಪಾಡುವ ಬದಲು, ಸರ್ಕಾರ ಹಾದಿ ತಪ್ಪಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಇದನ್ನೂ ನೋಡಿ: ಎಸ್ ಐಆರ್: ವಿಶೇಷ ಸಮಗ್ರ ಹೊರತಳ್ಳುವಿಕೆ: ಮುಗಿಯದ ವ್ಯಥೆ? Janashakthi Media
