ವಿಜಯಪುರ: ಪಾಲಕರು ಮತ್ತು ವಿದ್ಯಾರ್ಥಿಗಳು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರ ಮತ್ತು ಪೂಜಾರಿ ವಸತಿ ಶಾಲೆಗಳನ್ನು ಮುಚ್ಚದಂತೆ ಒತ್ತಾಯಿಸಿ ಎಐಡಿಎಸ್ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಶಾಲೆಗಳ ಮುಂಭಾಗದಲ್ಲಿ ಮೇ 27ರಂದು ಪ್ರತಿಭಟನೆ ನಡೆಸಿದರು.
ಅಲ್ಲದೇ, ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೇ ಉಳಿಯಲಿ ಎಂಬ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಒ ಯುವಜನ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ಬರುತ್ತಿರುವ ದುಡ್ಡಿಗೋಸ್ಕರ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರ ಶಾಲೆ ಮುಚ್ಚಲು ಹೊರಟಿರುವ ಕ್ರಮ ಖಂಡನಾರ್ಹ. ನಾಗರಿಕ ಸಮಾಜ ಸೃಷ್ಟಿಸಲು ಕಾರಣವಾಗುವ ಶಿಕ್ಷಣ ನೀಡಲು ಶಾಲೆಗಳು ಅವಶ್ಯಕ.
ಇದನ್ನೂ ಓದಿ: ಸಿಎಂ ಬದಲಾವಣೆ ಚರ್ಚೆಗೆ ವೇಗ: ಪ್ರಿಯಾಂಕಾ ಗಾಂಧಿ ಮಧ್ಯಸ್ಥಿಕೆಯಿಂದ ಡಿಕೆಶಿಗೆ ಬಲ?
ವಸತಿ ಶಾಲೆಗಳು ಬಂದ್ ಆದರೆ ಶಿಕ್ಷಣಕ್ಕಾಗಿ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ದೂರದ ಶಾಲೆಗೆ ಹೋಗುವುದು ಕಷ್ಟಕರವಾಗಲಿದೆ. ಶಿಕ್ಷಣ ಎಂಬುದು ಲಾಭ ನಷ್ಟ ನೋಡುವ ಕ್ಷೇತ್ರವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ಅವಶ್ಯಕ ಎಂಬುದನ್ನು ಮನಗಂಡು ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.
ನಾವು ಕಟ್ಟುವ ಪ್ರತಿಯೊಂದು ತೆರಿಗೆ ಹಣವೂ ಜನಪರ ಕೆಲಸಕ್ಕೆ ಖರ್ಚಾಗಬೇಕು. ಪ್ರತಿಯೊಬ್ಬ ಬಡವರ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು. ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಹತ್ತಳ್ಳಿ, ಶ್ರೀಶೈಲ ಕೆರೂರ, ಸಂಜು ಕೆರೂರ, ಸಚಿನ ಕೆರೂರ, ನಾಗೇಶ ಕೆರೂರ, ರಮೇಶ ಕೆಂಭಾವಿ, ನಿಂಗಣ್ಣ ಕೆರೂರ, ಶಿವಾನಂದ ಕೆರೂರ, ಶಿವಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಯಲ್ಲಪ್ಪ ಪೂಜಾರಿ ಮತ್ತಿತರರಿದ್ದರು.
ಇದನ್ನೂ ನೋಡಿ: IPL 2026 | ಪ್ಲೇಆಫ್ ಪೈಪೋಟಿ: ನಾಲ್ಕು ತಂಡಗಳ ಪ್ಲಸ್, ಮೈನಸ್ ಮತ್ತು ಕಪ್ ಲೆಕ್ಕಾಚಾರ Janashakthi Media
