ಉಡುಪಿ| 10 ವರ್ಷಗಳಿಂದ ಬಾಕಿ ಭೂಮಿ ಮಂಜೂರಾತಿ: ಕೊರಗ ಕುಟುಂಬಗಳ ಪ್ರತಿಭಟನೆ

ಶೀಘ್ರದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳ ಭರವಸೆ
ಉಡುಪಿ: ಕುಂದಾಪುರ ತಾಲೂಕಿನ ಆಲೂರು ಹಾಗೂ ಹರ್ಕೂರು ಗ್ರಾಮದ ಭೂಹೀನ ಕೊರಗ (ಪರಿಶಿಷ್ಟ ಪಂಗಡ) ಕುಟುಂಬಗಳಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜುಲೈ 14ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ರಜತಾದ್ರಿ, ಮಣಿಪಾಲದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ಹಾಗೂ ಹಕ್ಕೊತ್ತಾಯ ಕಾರ್ಯಕ್ರಮ ನಡೆಯಿತು.

ಧರಣಿಯಲ್ಲಿ ಕೊರಗ ಸಮುದಾಯದ ನೂರಾರು ಸದಸ್ಯರು, ವಿವಿಧ ಜನಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ, ಸುಮಾರು ಹತ್ತು ವರ್ಷಗಳಿಂದ ಬಾಕಿ ಉಳಿದಿರುವ ಭೂಮಿ ಮಂಜೂರಾತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಧರಣಿ ನಡೆಯುತ್ತಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಧರಣಿ ನಿರತ ನಿಯೋಗವನ್ನು ತಮ್ಮ ಕಚೇರಿಗೆ ಆಹ್ವಾನಿಸಿ, ಪ್ರಕರಣದ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಸಂಘಟನೆಯಿಂದ ಸಲ್ಲಿಸಲಾದ ಹಕ್ಕೊತ್ತಾಯ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಆಲೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ ಪ್ರಕರಣದ ಕುರಿತು ತನಗೆ ಸಂಪೂರ್ಣ ಮಾಹಿತಿ ಇದೆ.

ಇದನ್ನೂ ಓದಿ: ಭೋಜಶಾಲಾ ವಿವಾದ: ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಸಂಘಟನೆಯು ಈ ಹಿಂದೆ ಸಲ್ಲಿಸಿರುವ ದಾಖಲೆಗಳು ಹಾಗೂ ವಿವಿಧ ಇಲಾಖೆಗಳ ವರದಿಗಳು ಜಿಲ್ಲಾಡಳಿತದ ಬಳಿ ಲಭ್ಯವಿದ್ದು, ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಭೆಯನ್ನು ಶೀಘ್ರದಲ್ಲಿಯೇ ತಮ್ಮ ಅಧ್ಯಕ್ಷತೆಯಲ್ಲಿ ನಡೆಸಿ ಪ್ರಕರಣದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ಆಲೂರು ಗ್ರಾಮದ ಸರ್ವೇ ನಂ.153, 154, 148/3 ಹಾಗೂ 148/4 ಮತ್ತು ಹರ್ಕೂರು ಗ್ರಾಮದ ಸರ್ವೇ ನಂ.144/1, 150/3ರಲ್ಲಿ ಗುರುತಿಸಲಾದ ಒಟ್ಟು 10.67 ಎಕರೆ ಭೂಮಿಯನ್ನು 13 ಭೂಹೀನ ಕೊರಗ ಕುಟುಂಬಗಳಿಗೆ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು. ಜೊತೆಗೆ, ಹರ್ಕೂರು ಗ್ರಾಮದ ಸರ್ವೇ ನಂ.135ರಲ್ಲಿ 1984-85ರಲ್ಲಿಯೇ ಮಂಜೂರಾಗಿರುವ ಭೂಮಿಯ ಸ್ವಾಧೀನವನ್ನು ಮೂಲ ಫಲಾನುಭವಿಗಳಿಗೆ ತಕ್ಷಣ ಒದಗಿಸುವಂತೆ ಒತ್ತಾಯಿಸಲಾಯಿತು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಸಲ್ಲಿಸಿರುವ ಆಧಾರರಹಿತ ಆಕ್ಷೇಪಣೆಯನ್ನು ತಿರಸ್ಕರಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರದಲ್ಲಿ ನಡೆಸಿ, ಜಿಲ್ಲಾ ಮಟ್ಟದಲ್ಲಿಯೇ ಪ್ರಕರಣವನ್ನು ಅಂತಿಮವಾಗಿ ಇತ್ಯರ್ಥಪಡಿಸಿ ಕೊರಗ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಸಂಘಟನೆ ಒತ್ತಾಯಿಸಿತು.

ಜಿಲ್ಲಾಧಿಕಾರಿಗಳಿಂದ ದೊರೆತ ಸಕಾರಾತ್ಮಕ ಭರವಸೆಯನ್ನು ಸಂಘಟನೆ ಸ್ವಾಗತಿಸಿದ್ದು, ಶೀಘ್ರದಲ್ಲೇ ಸಭೆ ನಡೆಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ ಹಾಗೂ ಗಣೇಶ ಆಲೂರು, ರೇವತಿ ಆಲೂರು, ಕೊರಗ ನಾರ್ಕಳಿ, ಪಡುಬಿದ್ರಿ ಘಟಕದ ಕಾರ್ಯದರ್ಶಿ ತುಳಸಿ, ರೇಷ್ಮಾ ನಾಡ, ಮಾಲತಿ ಆಲೂರು, ಶೇಖರ ನಾರ್ಕಳಿ, ಕೊರಗ ಸಮುದಾಯದ ಸಾಹಿತಿಗಳಾದ ಬಾಬು ಪಾಂಗಾಳ, ಕುಡುಪ ಕೊರಗ, ವಸಂತ ಕೊರಗ (ಉಡುಪಿ), ಕಾರ್ಮಿಕ ಮುಖಂಡರಾದ ಸುರೇಶ್ ಕಲಾಗಾರ್, ಚಂದ್ರಶೇಖರ, ಹೆಚ್. ನರಸಿಂಹ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಮುಖಂಡರು, ಹಿತೈಷಿಗಳು ಹಾಗೂ ಕೊರಗ ಸಮುದಾಯದ ನೂರಾರು ಸದಸ್ಯರು ಭಾಗವಹಿಸಿದ್ದರು.

ಇದನ್ನೂ ನೋಡಿ: ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *