ಬೀದರ್: ಸುಮಾರು ನಾಲ್ಕು ವರ್ಷಗಳಿಂದ 9.25 ಕೋಟಿ ರೂ. ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚಿಸಿದ್ದ ಜಿಲ್ಲೆಯ ರಾಹುಲ್ ಕಿಶನ್ ಕುಲಕರ್ಣಿ ರನ್ನು ಹೈದರಾಬಾದ್ನಲ್ಲಿ ದಸ್ತಗಿರಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ನಗರದಲ್ಲಿ ಆಗಸ್ಟ್ 23ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಯಾಸ್ಮಿನ್ ಬೇಗಂ ತಿಳಿಸಿದರು. ವಂಚನೆ
ರಾಹುಲ್ ಕಳೆದ 4 ವರ್ಷಗಳಿಂದ ಸುಮಾರು 34 ಕೋಟಿ ವ್ಯವಹರಿಸಿ 132 ಜನರಿಗೆ ತನ್ನ ವಿವಿಧ ನಾಲ್ಕು ಸಂಸ್ಥೆಗಳ ಮೂಲಕ ಸುಳ್ಳು ದಾಖಲೆ ಸೃಷ್ಟಿಸಿ, ನಕಲಿ ಬಿಲ್ಗಳು ನೀಡಿ ಆ ಜನರಿಗೂ ವಂಚಿಸಿದಲ್ಲದೆ ಸರ್ಕಾರದ ಬೊಕ್ಕಸಕ್ಕೆ 9. 25 ಲಕ್ಷ ತೆರಿಗೆ ಕಟ್ಟದೆ ವಂಚಿಸಿದ್ದಾರೆ. ಹೀಗಾಗಿ ತೆರಿಗೆ ಇಲಾಖೆ ಕಲಬುರಗಿ ಪೂರ್ವ ವಲಯ ಹಾಗೂ ತೆಲಂಗಾಣದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಸಹಯೋಗದಲ್ಲಿ ರಾಹುಲ್ ಅವರನ್ನು ಕಸ್ಟಡಿಗೆ ಪಡೆದು ಆಗಸ್ಟ್ 23ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. ವಂಚನೆ
ಅಪಾದಿತ ತೆರಿಗೆದಾರ ತನ್ನ ಕುಟುಂಬ ಸದಸ್ಯರ ಹಾಗೂ ಸ್ನೇಹಿತರ ಆಧಾರ, ಪ್ಯಾನ್ ಕಾರ್ಡಗಳನ್ನು ದುರುಪಯೋಗ ಮಾಡಿಕೊಂಡು, ಜಿಎಸ್ಟಿ ನೋಂದಣಿಗಳನ್ನು ಪಡೆದು, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಾ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡದೇ ನಕಲಿ ಬಿಲ್ಲುಗಳನ್ನು ನೀಡಿ ಆ ಮೂಲಕ ನಕಲಿ ಹೂಡುವಳಿ ತೆರಿಗೆಯ ಕ್ಷೇಮು ಮಾಡಲು ಸಹಕರಿಸುತ್ತಿದ್ದನು.
ಇದನ್ನೂ ಓದಿ: ಕುಡಿಯುವ ನೀರಿಗೆ ಆಗ್ರಹ: ವಿದ್ಯಾರ್ಥಿನಿಯಿಂದ ಪ್ರತಿಭಟನೆ
ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿದ್ದು ಇವರಲ್ಲಿ ಬಹುತೇಕ ಲಾಭಾಂಶಿಗಳು ಕಾಮಗಾರಿ ಗುತ್ತಿಗೆದಾರರಾಗಿದ್ದು, ಇವರು ಪಡೆದಿರುವ ನಕಲಿ ಹೂಡುವಳಿ ತೆರಿಗೆಯ ಬಗ್ಗೆ ತನಿಖೆ ಪ್ರಗತಿಯಲ್ಲಿರುತ್ತದೆ. ನಕಲಿ ಹೂಡುವಳಿ ತೆರಿಗೆ ಪಡೆದಿರುವ ಎಲ್ಲಾ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ನಕಲಿ ಹೂಡುವಳಿ ತೆರಿಗೆ ಕ್ಷೇಮು ಮಾಡಿರುವವರಿಂದ ತೆರಿಗೆಯನ್ನು ಬಡ್ಡಿ ಮತ್ತು ದಂಡದ ಸಮೇತ ವಸೂಲಿ ಮಾಡಲಾಗುವುದು ಎಂದರು.
ಸರ್ಕಾರಕ್ಕೆ ವಂಚಿಸಿದ ಆರೋಪದಡಿ ರಾಹುಲ್ಗೆ ಕೋರ್ಟ್ ಕನಿಷ್ಟ 5 ವರ್ಷ ಜೈಲು ಹಾಗೂ ದಂಡ ವಿಧಿಸಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ದೊಡ್ಡ ವಂಚನೆ ಪ್ರಕರಣವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಪರ್ವತಗೌಡ ಎಸ್., ಅಧಿಕಾರಿಗಳಾದ ಖಾಜಾ ಖಲಿಲುಲ್ಲಾ, ಶಿವಕುಮಾರ ಸ್ವಾಮಿ, ಅಶೋಕ ಶೆಂಬೆಳ್ಳೆ, ಮಹೇಶಕುಮಾರ ಮಾಶೆಟ್ಟೆ ಇದ್ದರು.
ಇದನ್ನೂ ನೋಡಿ: 40 ವರ್ಷ ನಡೆದ ಕ್ರೈಮ್ 20 ದಿನದಲ್ಲಿ ಹೇಗೆ ಸಿಗುತ್ತೆ? ಅದಕ್ಕಿನ್ನೂ ಸಮಯ ಬೇಕು Janashakthi Media
