ನೋಯ್ಡಾ ಕಾರ್ಮಿಕರ ಪ್ರತಿಭಟನೆ ಪ್ರಕರಣ: ವಿದ್ಯಾರ್ಥಿ ಹೋರಾಟಗಾರ್ತಿಯ ವಿರುದ್ಧದ ಎನ್‌ಎಸ್‌ಎ ಬಂಧನ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿ ಹೋರಾಟಗಾರ್ತಿ ಆಕೃತಿ ಚೌಧರಿ ಅವರ ವಿರುದ್ಧ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಬಂಧನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ರಾಜ್ಯ ಸರ್ಕಾರ ಮಂಡಿಸಿರುವ ಪ್ರಕರಣದ ನಿರೂಪಣೆ ‘ಕಲ್ಪಿತ ಕಥೆ’ಯನ್ನು ಆಧರಿಸಿದೆ ಎಂದು ನ್ಯಾಯಾಲಯ ಕಠಿಣವಾಗಿ ಅಭಿಪ್ರಾಯಪಟ್ಟಿದೆ. ನೋಯ್ಡಾ

ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅಚಲ್ ಸಚ್‌ದೇವ್ ಅವರ ಪೀಠವು ಆಕೃತಿ ಚೌಧರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅಂಗೀಕರಿಸಿ, ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಅವರ ಬಂಧನ ಅಗತ್ಯವಿಲ್ಲದಿದ್ದರೆ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

25 ವರ್ಷದ ಆಕೃತಿ ಚೌಧರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪದವಿ ಪಡೆದಿದ್ದು, 2026ರ ಏಪ್ರಿಲ್‌ನಲ್ಲಿ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದರು. ನಂತರ ಮೇ 13ರಂದು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ ಕ್ರಮ ಕೈಗೊಳ್ಳಲಾಗಿತ್ತು.

‘ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?’

ಪ್ರತಿಭಟನಾಕಾರರನ್ನು ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವಂತೆ ಆಕೃತಿ ಪ್ರಚೋದಿಸಿದ್ದರು ಎಂಬುದು ಉತ್ತರ ಪ್ರದೇಶ ಪೊಲೀಸರ ಆರೋಪವಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿದ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಶೀಲಿಸಿತು.

ಹಿಂದಿನ ವಿಚಾರಣೆಯಲ್ಲಿಯೇ ಆಕೃತಿ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿರುವುದನ್ನು ತೋರಿಸುವ ವಿಡಿಯೊ ಸಾಕ್ಷ್ಯವನ್ನು ಸಲ್ಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಸುಮಾರು ಐದು ತಿಂಗಳಿನಿಂದ ಅವರು ಜೈಲಿನಲ್ಲಿರುವುದನ್ನು ಗಮನಿಸಿದ ಪೀಠ, ಮತ್ತಷ್ಟು ಕಾಲಾವಕಾಶ ನೀಡಲು ನಿರಾಕರಿಸಿತ್ತು.

ವಿಚಾರಣೆ ವೇಳೆ ಪ್ರತಿಭಟನೆಯ ದಿನ ಹಾಗೂ ಆಕೃತಿಯ ಬಂಧನದ ಸಮಯದ ಕ್ರಮವನ್ನು ನ್ಯಾಯಾಲಯ ಗಮನಿಸಿದೆ. ಏಪ್ರಿಲ್ 11ರಂದು ಪ್ರತಿಭಟನೆ ನಡೆದಿದ್ದರೆ, ಆಕೃತಿಯನ್ನು ಏಪ್ರಿಲ್ 12ರಂದು ಬೆಳಿಗ್ಗೆ 10.56ಕ್ಕೆ ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಹೀಗಿರುವಾಗ ಆಕೃತಿಯ ಬಂಧನದ ನಂತರ ನಡೆದ ಹಿಂಸಾಚಾರಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಆಧಾರವೇನು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿತು. ನೋಯ್ಡಾ

ಇದನ್ನೂ ಓದಿ : ದೆಹಲಿ ಮತದಾರರ ಪಟ್ಟಿಯಲ್ಲಿ ಭಾರೀ ಕಡಿತ: ಮೂವರಲ್ಲಿ ಒಬ್ಬರ ಹೆಸರು ಕರಡು ಪಟ್ಟಿಯಿಂದ ಹೊರಗೆ

ಬಂಧನ ಪ್ರಕ್ರಿಯೆಯಲ್ಲೂ ಲೋಪ

ಆಕೃತಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ನೀಡಲಾದ ನೋಟಿಸ್ ಮತ್ತು ಬಂಧನದ ಕ್ರಮದಲ್ಲಿಯೂ ವ್ಯತ್ಯಾಸ ಕಂಡುಬಂದಿದೆ ಎಂದು ಪೀಠ ಗಮನಿಸಿದೆ.

ಸರ್ಕಾರದ ಪ್ರಕಾರ, ಏಪ್ರಿಲ್ 12ರಂದು ಬಂಧನಕ್ಕೂ ಸಂಬಂಧಿಸಿದಂತೆ ಸೆಕ್ಷನ್ 130ರ ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಆದರೆ ಅದಕ್ಕೂ ಮುನ್ನ ಅನ್ವಯಿಸಬೇಕಾದ ಸೆಕ್ಷನ್ 126ರ ಪ್ರಕ್ರಿಯೆ ನಡೆದಿತ್ತೇ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿತು. ಜನರಲ್ ಡೈರಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಬಂಧನ ಮೊದಲು ನಡೆದಿದ್ದು, ನಂತರ ನೋಟಿಸ್ ಸಿದ್ಧಪಡಿಸಿದಂತೆ ದಾಖಲೆಗಳು ಸೂಚಿಸುತ್ತಿವೆ ಎಂದು ಅಭಿಪ್ರಾಯಪಟ್ಟಿತು.

ಪೊಲೀಸರ ಆರೋಪಕ್ಕೆ ಸಾಕ್ಷ್ಯ ಕೇಳಿದ ನ್ಯಾಯಾಲಯ

ಆಕೃತಿ ಪ್ರತಿಭಟನಾಕಾರರಿಗೆ ಕಲ್ಲು ತೂರಲು ಅಥವಾ ವಾಹನಗಳಿಗೆ ಬೆಂಕಿ ಹಚ್ಚಲು ಕರೆ ನೀಡಿದ್ದರು ಎಂಬುದಕ್ಕೆ ಯಾವ ವಿಡಿಯೊ ಸಾಕ್ಷ್ಯವಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಆರೋಪಪಟ್ಟಿ ಸಲ್ಲಿಕೆಯಾಗಿದ್ದರೂ, ಸಾಕ್ಷಿಗಳ ಹೇಳಿಕೆಗಳಲ್ಲಿ ಆಕೃತಿಯ ಪಾತ್ರವನ್ನು ಹೇಗೆ ದಾಖಲಿಸಲಾಗಿದೆ ಎಂಬುದನ್ನೂ ಪೀಠ ಪರಿಶೀಲಿಸಿತು.

ಈ ಹಿನ್ನೆಲೆಯಲ್ಲಿ ಎನ್‌ಎಸ್‌ಎ ಅಡಿ ಮುಂದುವರಿದಿದ್ದ ಬಂಧನಕ್ಕೆ ಸಮರ್ಪಕ ಆಧಾರವಿಲ್ಲ ಎಂದು ಕಂಡ ನ್ಯಾಯಾಲಯ, ಬಂಧನ ಆದೇಶವನ್ನು ರದ್ದುಗೊಳಿಸಿದೆ. ಆಕೃತಿ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ವಾದ ಮಂಡಿಸಿದ್ದು, ಚಾರ್ಲಿ ಪ್ರಕಾಶ್ ಸಹಕರಿಸಿದ್ದರು.

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *