ಅನುಮಾನ, ಶಂಕೆ, ಸಂದೇಹಗಳ ಮೋಡದಲ್ಲಿ ಮರೆಯಾಗಿರುವವರನ್ನು ಮಾನವೀಯತೆಯ ಕಡೆಗೆ ತರೋಣ

ವಿಶ್ವ ರಂಗಭೂಮಿ ದಿನವನ್ನು 1962ರಿಂದ ಮಾರ್ಚ್‌ 27ರಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷ ದೇಶ ವಿದೇಶಗಳಲ್ಲಿ ರಂಗಭೂಮಿಯಲ್ಲಿ ತಮ್ಮದೇ ಹೆಸರು ಮಾಡಿ, ಖ್ಯಾತಿ ಗಳಿಸಿರುವ ಒಬ್ಬೊಬ್ಬರು ಪ್ರತಿ ವರ್ಷ ʻವಿಶ್ವ ರಂಗಭೂಮಿ ದಿನದ ಸಂದೇಶವನ್ನು ನೀಡಲಿದ್ದಾರೆ.

ಈ ಬಾರಿ ಸಂದೇಶ ನೀಡಿದವರು ಈಜಿಪ್ಟ್‌ನ ರಂಗನಟಿ ಸಮೀಹ ಆಯುಬ್‌. ಇವರ ಸಂದೇಶವನ್ನು ಕನ್ನಡಕ್ಕೆ ಅನುವಾದ ಮಾಡಿದ್ದು, ರಂಗಕರ್ಮಿ, ನಟ, ನಿರ್ದೇಶಕ ಬಿ. ಸುರೇಶ.

ವಿಶ್ವದ ಎಲ್ಲಾ ಮೂಲೆಗಳಲ್ಲಿ ಇರುವ ಎಲ್ಲಾ ರಂಗಬಂಧುಗಳಿಗೆ, ವಿಶ್ವ ರಂಗದಿನದ ಈ ಸಂದೇಶವನ್ನು ಬರೆಯುವಾಗ, ನಿಮ್ಮೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದಕ್ಕಾಗಿ ಅತೀವ ಸಂತೋಷದ ಜೊತೆಗೇ ನಾವೆಲ್ಲರೂ, ಅಂದರೆ ಕಲಾವಿದರು ಮತ್ತು ಕಲಾವಿದರಲ್ಲದವರು ಅನುಭವಿಸುತ್ತಿರುವ ದುರಿತ ಕಾಲದ ಒತ್ತಡಗಳು ಮತ್ತು ಅತಂತ್ರ ಸ್ಥಿತಿಗಾಗಿ ದೇಹದ ಕಣಕಣವೂ ಕೊರಗುತ್ತಿದೆ. ಕಂಪಿಸುತ್ತಿದೆ ಎಂಬುದು ಸಹ ಸತ್ಯವೇ. ವಿಶ್ವವು ಈಗ ಎದುರಿಸುತ್ತಿರುವ ಯುದ್ಧಗಳು, ನೈಸರ್ಗಿಕ ವಿಕೋಪಗಳು ಮತ್ತಿತರ ಮನುಷ್ಯರೇ ಸೃಷ್ಟಿಸಿದ ಸಂಕಟಗಳ ನೇರ ಪರಿಣಾಮವೇ ಇದಾಗಿದೆ. ಇವು ನಮ್ಮ ಬಹಿರಂಗವನ್ನು ಮಾತ್ರವಲ್ಲ, ಅಂತರಂಗದ ಮನಶ್ಶಾಂತಿಯನ್ನು ಸಹ ಕದಡುತ್ತಿವೆ.

ಇದನ್ನು ಓದಿ: ಕಲೆ-ಸಾಹಿತ್ಯ-ಮನುಜ ಸಂವೇದನೆ ಮತ್ತು ಪ್ರಜಾಪ್ರಭುತ್ವ

ನಾನು ನಿಮ್ಮೊಂದಿಗೆ ಮಾತಾಡುತ್ತಿರುವ ಈ ಸಮಯದಲ್ಲಿ, ಎಲ್ಲರೂ ಒಂಟಿಯಾದ ದ್ವೀಪಗಳಂತೆ ಅಥವಾ ಮಂಜು ಮುಸುಕಿದ ಸಮುದ್ರದಲ್ಲಿ ತೇಲುತ್ತಿರುವ ಹಡಗುಗಳಂತೆ ಭಾಸವಾಗುತ್ತಿದ್ದಾರೆ. ಈ ಹಡಗುಗಳು ತಾವು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಇಲ್ಲದೆ, ತಲುಪಬೇಕಾದ ಗಮ್ಯದ ಯಾವ ಗುರುತುಗಳನ್ನೂ ದಿಗಂತದಲ್ಲಿ ಕಾಣಲಾಗದೆ, ಸುರಕ್ಷಿತ ತಾಣದಲ್ಲಿ ಲಂಗರು ಹಾಕುವ ಬಯಕೆಯನ್ನು ತಪ್ಪಿಸುವ ಭಯಂಕರ ಬಿರುಗಾಳಿ ಹಾಗೂ ಉಬ್ಬರವಿಳಿತ ತುಂಬಿದ ಸಮುದ್ರದಲ್ಲಿ, ಹಾಯಿಗಳಿಲ್ಲದ ದೋಣಿಗಳಂತೆ ಬಹುಕಾಲದಿಂದ ಸಾಗುತ್ತಿವೆಯೇನೋ ಎನಿಸುತ್ತಿದೆ.

ಹಿಂದೆಂದಿಗಿಂತಲೂ ಇಂದು ನಮ್ಮ ನಡುವೆ ಅತಿ ಹೆಚ್ಚು ಸಂಪರ್ಕ ಸಾಧಿಸಲಾಗಿದೆ. ಅದೇ ಕಾಲಕ್ಕೆ ಹೆಚ್ಚು ಅಂತರಗಳು – ಅಪಸ್ವರಗಳು ಸಹ ಇಂದು ನಮ್ಮ ನಡುವೆ ಇದೆ. ಸಮಕಾಲೀನ ವಿಶ್ವವೇ ಈ ಬಗೆಯ ವೈರುಧ್ಯವನ್ನು ನಮ್ಮ ಮೇಲೆ ಹೇರಿದೆ. ಎಲ್ಲಾ ಭೌಗೋಳಿಕ ಗಡಿಗಳನ್ನು ದಾಟಿ ಸುದ್ದಿಗಳನ್ನು ಜಗತ್ತಿನ ಎಲ್ಲಾ ಮೂಲೆಗೂ ತಲುಪಿಸುವ ಶಕ್ತಿಯನ್ನು ಆಧುನಿಕ ಸಂಪರ್ಕ ತಂತ್ರಜ್ಞಾನವು ಪಡೆದಿರುವ ಕಾಲದಲ್ಲಿಯೇ, ವಿಶ್ವದೆಲ್ಲೆಡೆ ಹುಟ್ಟುತ್ತಿರುವ ತರ್ಕಾತೀತ ಅಪಸ್ವರಗಳು, ಮೂಲಭೂತವಾದಿ ಮನಸ್ಥಿತಿಯ ವಿವಾದಗಳು – ಒಬ್ಬರಿಂದೊಬ್ಬರ ನಡುವೆ ದೂರತ್ವವನ್ನು ಸೃಷ್ಟಿಸಿ ಮನುಷ್ಯತ್ವದಿಂದಲೇ ಬಹುತೇಕರನ್ನು ವಿಮುಖರನ್ನಾಗಿಸಿದೆ.

ರಂಗಭೂಮಿಯ ಮೂಲಗುಣವೇ ಮಾನವೀಯ ಕ್ರಿಯೆಗಳ ಮೂಲಕ ನೋಡುಗರ ಬದುಕಿಗೆ ಕನ್ನಡಿಯಾಗುವುದು. ವಿಶ್ವರಂಗಭೂಮಿಯ ದಿಗ್ಗಜ ಎನಿಸಿಕೊಂಡ ಸ್ಟಾನಿಸ್‌ಲಾವ್‌ಸ್ಕಿಯು ಹೇಳುತ್ತಾನೆ; ʻʻನಿಮ್ಮ ಕಾಲಿಗೆ ಮೆತ್ತಿದ ಕೆಸರಿನ ಜೊತೆಗೆ ರಂಗಭೂಮಿಗೆ ಬರಬೇಡಿ. ಆ ಕೆಸರು, ಕೊಳೆ, ಧೂಳನ್ನು ಹೊರಗೆ ಬಿಟ್ಟುಬಿಡಿ. ನಿಮ್ಮ ಸಂಕಟಗಳನ್ನು, ಭಿನ್ನಾಭಿಪ್ರಾಯಗಳನ್ನು, ಜಗಳಗಳನ್ನು ನಿಮ್ಮ ಹೊರಗಿನ ವಸ್ತ್ರಗಳ ಜೊತೆಗೆ ರಂಗಮಂದಿರದ ಬಾಗಿಲಾಚೆಯೇ ಬಿಟ್ಟುಬಿಡಿ. ಅವೆಲ್ಲವೂ ನಿಮ್ಮ ಜೀವನವನ್ನು ಮಾತ್ರವಲ್ಲ ನಿಮ್ಮ ಮನಸ್ಸನ್ನು ಸಹ ಕಲೆ ಎಂಬುದರಿಂದ ದೂರ ಮಾಡುತ್ತವೆ.ʼʼ ನಾವು ರಂಗಮಂದಿರದ ವೇದಿಕೆಯನ್ನು ಹತ್ತುವಾಗ ಮನುಷ್ಯತ್ವ ಎಂಬ ಏಕೈಕ ಶಕ್ತಿಯ ಜೊತೆಗೆ ಹತ್ತುತ್ತೇವೆ ಮತ್ತು ಜಗತ್ತಿನ ಹಲವು ಜೀವಗಳನ್ನು ಪಾತ್ರವಾಗಿ ಅವಾಹಿಸಿಕೊಂಡು, ವೇದಿಕೆಯ ಮೇಲೆ ಜೀವಂತವಾಗಿಸುತ್ತೇವೆ. ಹಾಗೆ ಅರಳಿದ ಪ್ರತೀ ಪಾತ್ರವೂ ತನ್ನ ಪರಿಮಳದ ಮೂಲಕವೇ ಇತರರನ್ನು ಅರಳಿಸುತ್ತದೆ.

ನಾಟಕಕಾರರು, ನಿರ್ದೇಶಕರು, ನಟರು, ನೇಪಥ್ಯದವರು, ಕವಿಗಳು, ಸಂಗೀತಗಾರರು, ನೃತ್ಯ ಸಂಯೋಜಕರು, ತಂತ್ರಜ್ಞರು – ಯಾರೊಬ್ಬರನ್ನೂ ಬಿಡದೆ ಎಲ್ಲರೂ ಖಾಲಿ ವೇದಿಕೆಯ ಮೇಲೆ ಹೊಸ ಜೀವವನ್ನು ಸೃಷ್ಟಿಸುತ್ತೇವೆ. ಈ ಜೀವವು ಬಹುಕಾಲ ಉಳಿಯಲು – ಅದನ್ನು ಕೈ ಹಿಡಿದು ನಡೆಸುವವರು, ಪ್ರೀತಿಯಿಂದ ಅಪ್ಪುವವರು, ಕರುಣೆ ತೋರುವವರು ಮತ್ತು ಯಾವ ಹಾದಿ ಸರಿ ಎಂದು ಸಮಚಿತ್ತದಿಂದ ತಿಳಿಹೇಳುವ ಮನಸ್ಸುಗಳ ಅಗತ್ಯವಿದೆ.

ಏನೂ ಇಲ್ಲದ ರಂಗದ ಮೇಲೆ ಜೀವ ತರುವವರು ನಾವು ಎನ್ನುವಾಗ ನಾನು ಅತಿರೇಕದ ಮಾತಾಡುತ್ತಿಲ್ಲ. ಆ ಜೀವವು ಕತ್ತಲಿನಲ್ಲಿ ಸಣ್ಣ ಕೆಂಡದ ಹಾಗೆ ಉರಿಯುವಂತಹದು, ಇರುಳನ್ನು ಒರೆಸುವ ದೀಪಂದತಹುದು, ನಡುಗುವ ಚಳಿಯಲ್ಲಿ ಮೈ ಬೆಚ್ಚಗೆ ಮಾಡುವಂತಹದು. ಅಂತಹ ಜೀವವನ್ನು ಹೊರುವವರು, ಸೃಷ್ಟಿಸುವವರು, ಅದೇ ಆಗುವವರೂ ನಾವೇ. ಆ ಜೀವಕ್ಕೆ ಬಣ್ಣ ಮತ್ತು ಅರ್ಥವನ್ನು ಕೊಡುವವರೂ ನಾವೇ. ಆ ಜೀವವನ್ನು ಇತರರು ಅರ್ಥ ಮಾಡಿಕೊಳ್ಳಲು ಬೇಕಾದ ಕಾರಣವನ್ನು ಸೃಷ್ಟಿಸುವವರೂ ನಾವೇ. ಕಲೆ ಎಂಬ ಬೆಳಕಿನ ಮೂಲಕ ಅಜ್ಞಾನ ಮತ್ತು ಅತಿರೇಕವನ್ನು ಎದುರಿಸುವ ಹೂರಣ ಒದಗಿಸುವವರೂ ನಾವೇ. ಜೀವನದ ಎಲ್ಲಾ ಸಾರವನ್ನು ಬಿಗಿದಪ್ಪಿಕೊಂಡು ಬದುಕುವ ಶಕ್ತಿಯನ್ನು ಜಗತ್ತಿಗೆ ಹಂಚುವವರೂ ನಾವೇ. ಶ್ರಮ, ಸಮಯ, ಬೆವರು, ಕಣ್ಣೀರು, ನೆತ್ತರು ಮತ್ತು ಬುದ್ಧಿಶಕ್ತಿಯ ಜೊತೆಗೆ ನಮ್ಮದೆಂಬ ಎಲ್ಲವನ್ನೂ ತೊಡಗಿಸಿ ಸತ್ಯ, ಸೌಂದರ್ಯ, ಸದ್ಗುಣ ಎಂಬ ಮೂಲಭೂತ ವಿವರಗಳ ಮೂಲಕ, ಈ ಬದುಕು ಎಂಬುದು ಬದುಕಲು ಅರ್ಹವಾದುದು ಎಂಬ ಬಹುಮುಖ್ಯ ಸಂದೇಶ ದಾಟಿಸುವವರೂ ನಾವೇ.

ನಾನಿಂದು ನಿಮ್ಮೊಂದಿಗೆ ಮಾತಾಡುತ್ತಾ ಇರುವುದು ಎಲ್ಲಾ ಕಲೆಗಳನ್ನು ಒಳಗೊಂಡ ಅಪ್ಪನಂತಿರುವ ನಮ್ಮ ರಂಗಭೂಮಿ ಎಂಬುದನ್ನು ಸಂಭ್ರಮಿಸುವುದಕ್ಕಲ್ಲ. ಬದಲಿಗೆ, ನಾನು ನಿಮ್ಮನ್ನೆಲ್ಲ ಆಹ್ವಾನಿಸುತ್ತಾ ಇದ್ದೇನೆ. ನಾವೆಲ್ಲರೂ ಕೈ ಕೈ ಹಿಡಿದು, ಭುಜಕ್ಕೆ ಭುಜಕೊಟ್ಟು, ಧ್ವನಿ ಎತ್ತರಿಸಿ ಮಾತಾಡುವುದನ್ನು ರಂಗಭೂಮಿಯಲ್ಲಿ ಕಲಿತಿರುವಂತೆಯೇ, ಒಕ್ಕೊರಲಿನಿಂದ ದನಿ ಎತ್ತಿ ಕೂಗುತ್ತಾ, ಜಗತ್ತಿನ ಎಲ್ಲರ ಮನಸ್ಸಾಕ್ಷಿಯನ್ನು ಎಚ್ಚರಿಸುವಂತೆ, ಆ ಮೂಲಕ ಅವರೆಲ್ಲರೂ ಇರಬಹುದಾದ ಮಾನವತೆಯನ್ನು ಹುಡುಕಿ ತೆಗೆವಂತೆ ಮಾತಾಡೋಣ. ಹಾಗೇ ಎಚ್ಚರಗೊಳ್ಳಬೇಕಾದವನು ಸಹ ಸಂಪೂರ್ಣ ಮುಕ್ತ ಮನಸ್ಸಿನ, ಸಹಿಷ್ಣುತೆ ಇರುವ, ಪ್ರೇಮ – ಕರುಣೆ ತೋರುವ, ಕಕ್ಕುಲಾತಿಯಿಂದ ಎಲ್ಲರನ್ನೂ ನೋಡುವ, ಎಲ್ಲರನ್ನೂ ಒಳಗೊಳ್ಳುವ ಮನುಷ್ಯನೇ ಆಗಿರುತ್ತಾನೆ. ಈ ಮೂಲಕ ಎಲ್ಲಾ ರಾಕ್ಷಸೀ ಮನೋಭಾವಗಳನ್ನು, ವರ್ಣಬೇಧವನ್ನು, ರಕ್ತಪಾತಕ್ಕೆಳಸುವ ಸಂಘರ್ಷಗಳನ್ನು, ಏಕಪಕ್ಷೀಯ ವಾತಾವರಣವನ್ನು ಮತ್ತು ಆತಂಕವಾದವನ್ನು ಕೊಡವಿ ನಮ್ಮ ಸಮಾಜದಿಂದ ದೂರ ಇಡೋಣ. ಮನುಷ್ಯನು ಈ ಭೂಮಿಯ ಮೇಲೆ ಮತ್ತು ಈ ಆಕಾಶದ ಕೆಳಗೆ ಸಹಸ್ರಾರು ವರುಷಗಳಿಂದ ನಡೆದಿದ್ದಾನೆ, ನಡೆಯುತ್ತಿದ್ದಾನೆ, ಮುಂದೆಯೂ ನಡೆಯುತ್ತಾನೆ. ಆತನ ಕಾಲುಗಳನ್ನು ಈ ಯುದ್ಧಗಳ ಸಂತೆಯಿಂದ, ನೆತ್ತರು ಹರಿಸುವ ಅಪದ್ಧಗಳಿಂದ ಹೊರಗೆ ತೆಗೆಯಿರಿ ಮತ್ತು ಅದೆಲ್ಲವನ್ನೂ ಹೊರಗಿಟ್ಟು, ಈ ರಂಗಭೂಮಿ ಎಂಬ ವಿಶ್ವದ ಬಾಗಿಲನ್ನು ಪ್ರವೇಶಿಸಲು ತಿಳಿಸಿ. ಇಂದಿನ ದಿನಗಳಲ್ಲಿ ಹಲವು ಅನುಮಾನಗಳಲ್ಲಿ, ಶಂಕೆಗಳಲ್ಲಿ, ಸಂದೇಹಗಳ ಮೋಡದಲ್ಲಿ ಮರೆಯಾಗಿರುವವರನ್ನು ಮರಳಿ ಮಾನವೀಯತೆಯ ಕಡೆಗೆ ತರುವವರು ಮತ್ತು ನಾವೆಲ್ಲರೂ ಸೋದರರೆಂಬ ಭಾವವನ್ನು ಹಂಚುವ ಶಕ್ತಿ ಇರುವವರು ಕಲಾವಿದರು ಮಾತ್ರವೇ ಎಂಬುದು ನೆನಪಲ್ಲಿರಲಿ.

ಆದಿಮ ಕಾಲದಲ್ಲಿ ಮೊದಲ ಬಾರಿ ರಂಗವನ್ನು ಹತ್ತಿದ ನಟನಿಂದ ಇಂದಿನವರೆಗೆ, ಎಲ್ಲಾ ನಟರೂ ಜ್ಞಾನದೀಪವನ್ನು ಉರಿಸಲು ಮುಂಚೂಣಿಯಲ್ಲಿದ್ದವರು, ಇರುವವರು. ಈಗ ನಮ್ಮ ಆದ್ಯತೆಯು ನಮ್ಮೆದುರಿಗಿರುವ ಅಸಹ್ಯ ಸಂಘರ್ಷಗಳನ್ನು, ನೆತ್ತರ ಹೊಳೆ ಹರಿಸುವ ಯುದ್ಧಗಳನ್ನು, ಕೋಮುವಾದ ಮತ್ತು ದ್ವೇಷ ಹರಡುವ ಅಮಾನವೀಯತೆಯನ್ನು ತೊಳೆದು, ಶುದ್ಧ ಮತ್ತು ಸುಂದರವಾದ ಮಾನವೀಯತೆಯನ್ನು ಹರಡುವುದೇ ಆಗಿದೆ. ನಮ್ಮನ್ನು ಹೊರತು ಪಡಿಸಿ ಮತ್ಯಾರಿಗೂ ಹೀಗೆ ಜೀವನವನ್ನು ಪ್ರೀತಿಸುವುದನ್ನು ಕಲಿಸಲು ಸಾಧ್ಯವಿಲ್ಲ. ನೆಮ್ಮದಿಯ ಹಾಗೂ ಮಾನವೀಯ ಜಗತ್ತನ್ನು ಸೃಷ್ಟಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ.

(ಸಮೀಹ ಆಯೂಬ್‌ ಈಜಿಪ್ಟಿನ ರಂಗನಟಿ. ಕೈರೋ ನಗರಕ್ಕೆ ಹತ್ತಿರವಿರುವ ಶುಬ್ರ ಎಂಬ ಸ್ಥಳದಲ್ಲಿ. ೧೯೫೩ರಲ್ಲಿ ಹೈಯರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಡ್ರಮೆಟಿಕ್‌ ಆರ್ಟ್ಸ್‌ ಸಂಸ್ಥೆಯಲ್ಲಿ ನಾಟಕಕಾರ ಜಾ಼ಕಿ ಟುಲಾಯ್‌ಮತ್‌ ರಂತಹ ದಿಗ್ಗಜರಿಂದ ಕಲಿತು ಪದವಿ ಪಡೆದವರು. ಈ ವರೆಗೆ ರಾಬ್ಬಾ ಅಲ್-ಅಡವ್ಯಾ, ಸೆಕತ್‌ ಅಲ್‌-ಸಲಾಮ, ಬ್ಲಡ್‌ ಅನ್‌ ದ ಕರ್ಟನ್ಸ್‌ ಆಫ್‌ ಕಾಬಾ, ಅಗಮೆಮ್ನಾನ್‌, ಕಕೇಷಿಯನ್‌ ಚಾಕ್‌ ಸರ್ಕಲ್‌ ಸೇರಿದಂತೆ ೧೭೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಯೇ ಆಕೆಯ ಪ್ರಮುಖ ಮಾಧ್ಯಮವಾದರೂ ಹಲವು ಟೆಲಿವಿಷನ್‌ ಮತ್ತು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ದ ಲ್ಯಾಂಡ್‌ ಆಫ್‌ ಹಿಪ್ರೋಕ್ರಸಿ, ದ ಡಾನ್‌ ಆಫ್‌ ಇಸ್ಲಾಂ, ವಿದ್‌ ಹ್ಯಾಪಿನೆಸ್‌, ಅಮಾಂಗ್‌ ದ ರೂಯಿನ್ಸ್‌, ಇವರು ಅಭಿನಯಿಸಿದ ಸಿನಿಮಾಗಳು. ಸ್ಪ್ರೇ ಲೈಟ್‌, ಟೈಮ್‌ ಆಫ್‌ ರೋಸಸ್‌, ಅಮೀರಾ ಇನ್‌ ಅಬ್ಡೀನ್‌, ಅಲ್‌-ಮಸ್ರಾವಿಯ ಮುಂತಾದ ಕಿರುತೆರೆಯ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಸಮೀಹಾ ಆಯುಬ್‌ ಅವರಿಗೆ ಗಮಾಲ್‌ ಅಬ್ದೆಲ್‌ ನಾಸಿರ್‌ ಮತ್ತು ಅನ್ವರ್‌ ಸಾದತ್‌ ಸೇರಿದಂತೆ ಹಲವು ರಾಷ್ಟ್ರಾಧ್ಯಕ್ಷರ ಪ್ರಶಸ್ತಿಗಳು ಸಿಕ್ಕಿವೆ. ಜೊತೆಗೆ ಸಿರಿಯಾದ ಗೌರವ ಕೂಡ ದೊರೆತಿದೆ.)

Donate Janashakthi Media

Leave a Reply

Your email address will not be published. Required fields are marked *