ಬೆಂಗಳೂರು : ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ 2022ರಲ್ಲಿ ಜಾರಿಗೊಳಿಸಿದ್ದ ಹಿಜಾಬ್ ನಿಷೇಧವನ್ನು ರದ್ದುಪಡಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಜಾಬ್ ನಿಷೇಧ ಹಿಂಪಡೆಯುವ ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಹಿಂದೆ ಹಿಜಾಬ್ ನಿಷೇಧ ತೆರವುಗೊಳಿಸುವ ಕುರಿತು ಹೇಳಿಕೆ ನೀಡಿದ್ದರು. ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಘೋಷಣೆಯೊಂದಿಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸಿಇಟಿ ಪರೀಕ್ಷೆ ಸಂದರ್ಭ ಕೆಲ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಹೇಳಿದ ಘಟನೆ ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಧಾರ್ಮಿಕ ಚಿಹ್ನೆಗಳಿಗೆ ಸಮಾನ ಅವಕಾಶ ನೀಡುವ ನಿಲುವನ್ನು ಸರ್ಕಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಸರ್ಕಾರವು ನೀಡಿರುವ ಈ ಅನುಮತಿಯಲ್ಲಿ ಕೆಲವು ಸ್ಪಷ್ಟ ಷರತ್ತುಗಳಿದೆ. ವಿದ್ಯಾರ್ಥಿಗಳು ಧರಿಸುವ ಸಾಂಪ್ರದಾಯಿಕ ಸಂಕೇತಗಳು ಶಾಲಾ ಸಮವಸ್ತ್ರಕ್ಕೆ ಪೂರಕವಾಗಿರಬೇಕೇ ಹೊರತು, ನಿಗದಿತ ಸಮವಸ್ತ್ರವನ್ನು ಬದಲಿಸುವ ಅಥವಾ ಮಾರ್ಪಡಿಸುವಂತಿರಬಾರದು. ಅಲ್ಲದೆ, ಇವು ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗುರುತಿಸುವಿಕೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಾರದು. ಯಾವುದೇ ವಿದ್ಯಾರ್ಥಿಯನ್ನು ಇಂತಹ ಸಂಕೇತಗಳನ್ನು ಧರಿಸುವಂತೆ ಒತ್ತಾಯಿಸುವಂತಿಲ್ಲ ಹಾಗೂ ಬಲವಂತವಾಗಿ ತೆಗೆಯುವಂತೆ ಸೂಚಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಾಧಿಕಾರಗಳು ನಿಗದಿಪಡಿಸುವ ವಸ್ತ್ರ ಸಂಹಿತೆ ನಿಯಮಗಳು ಅನ್ವಯವಾಗಲಿವೆ. ರಾಜ್ಯದ
ಇದನ್ನೂ ಓದಿ : ಸಿಎಂ ಆಯ್ಕೆ ವಿಳಂಬ: ರಾಹುಲ್, ಪ್ರಿಯಾಂಕಾ ವಿರುದ್ಧ ವಯನಾಡ್ನಲ್ಲಿ ಪೋಸ್ಟರ್ ವಾರ್
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC), ಕಾಲೇಜು ಆಡಳಿತ ಮಂಡಳಿಗಳು ಯಾವುದೇ ವಿದ್ಯಾರ್ಥಿಯೊಂದಿಗೆ ತಾರತಮ್ಯದಿಂದ ವರ್ತಿಸಿ ಅವಮಾನ ಮಾಡಬಾರದು. ಜಗಜ್ಯೋತಿ ಬಸವಣ್ಣನವರ “ಇವ ನಮ್ಮವ” ಎಂಬ ಉದಾತ್ತ ತತ್ವದಡಿ ಎಲ್ಲರನ್ನೂ ಒಳಗೊಳ್ಳುವ ನಿಲುವನ್ನು ಅಳವಡಿಸಿಕೊಂಡು ಶಿಸ್ತು ಕಾಪಾಡಬೇಕು ಎಂದು ಸರ್ಕಾರ ಸೂಚಿಸಿದೆ. ಈ ಆದೇಶಕ್ಕೆ ವಿರುದ್ಧವಾಗಿರುವ ಹಿಂದಿನ ಎಲ್ಲಾ ಸುತ್ತೋಲೆಗಳು ಮತ್ತು ಸಂಸ್ಥೆಯ ನಿರ್ದೇಶನಗಳು ಅನೂರ್ಜಿತಗೊಳ್ಳಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಆದೇಶದ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
2022ರಲ್ಲಿ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಅಂದಿನ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ, ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳಿಗೆ ನಿರ್ಬಂಧ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ನಾಟಕ ಹೈಕೋರ್ಟ್ ಸರ್ಕಾರದ ಆದೇಶವನ್ನು ಸಮರ್ಥಿಸಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ಗೆ ಹೋಗಿದ್ದು, ಅಲ್ಲಿ ವಿಭಜಿತ ತೀರ್ಪು ಬಂದ ಕಾರಣ ಪ್ರಕರಣ ಇನ್ನೂ ಅಂತಿಮ ನಿರ್ಧಾರಕ್ಕೆ ಬಾರದೆಯೇ ಬಾಕಿಯಿದೆ. ರಾಜ್ಯದ
ಇದನ್ನೂ ನೋಡಿ : “ತಮಿಳುನಾಡು | ವಿಜಯ್ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media
