ನವದೆಹಲಿ: ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೇಗ್ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯ ನೀಡಿರುವ ತೀರ್ಪನ್ನು ಭಾರತ ತಿರಸ್ಕರಿಸಿದೆ. ವಿಶ್ವ ಬ್ಯಾಂಕ್ ರಚಿಸಿರುವ ಈ ಮಧ್ಯಸ್ಥಿಕೆ ಸಂಸ್ಥೆಗೆ ಭಾರತದ ಸಾರ್ವಭೌಮ ನಿರ್ಧಾರಗಳ ಕುರಿತು ತೀರ್ಪು ನೀಡುವ ಯಾವುದೇ ಅಧಿಕಾರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ವಿಶ್ವ ಬ್ಯಾಂಕ್ ರಚಿಸಿರುವ ಮಧ್ಯಸ್ಥಿಕೆ ನ್ಯಾಯಾಲಯವು ಸಿಂಧೂ ಜಲ ಒಪ್ಪಂದ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದ್ದು, ಒಪ್ಪಂದದಡಿ ಭಾರತದ ಜಲವಿದ್ಯುತ್ ಯೋಜನೆಗಳ ವಿನ್ಯಾಸ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಬದ್ಧತೆಗಳನ್ನು ಭಾರತ ಮುಂದುವರಿಸಬೇಕು ಎಂದು ಸೂಚಿಸಿತ್ತು. ಭಾರತ ಮಾತ್ರ ಈ ತೀರ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.
ಈ ನ್ಯಾಯಾಲಯವನ್ನು ಸಿಂಧೂ ಜಲ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ ರಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಆರೋಪಿಸಿದೆ. ಹೀಗಾಗಿ, ಅದರ ಇತ್ತೀಚಿನ ತೀರ್ಪು ಮಾತ್ರವಲ್ಲದೆ ಈ ಹಿಂದೆ ನೀಡಿರುವ ಆದೇಶಗಳನ್ನೂ ಭಾರತ ಮಾನ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ ಈ ಮಧ್ಯಸ್ಥಿಕೆ ಸಂಸ್ಥೆಯ ಕಾನೂನುಬದ್ಧ ಅಸ್ತಿತ್ವವನ್ನೇ ಎಂದಿಗೂ ಒಪ್ಪಿಕೊಂಡಿಲ್ಲ. ಅದರ ವಿಚಾರಣಾ ಪ್ರಕ್ರಿಯೆಯಲ್ಲಿ ಭಾರತ ಭಾಗವಹಿಸಿಯೂ ಇಲ್ಲ. ಹೀಗಾಗಿ ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ಈ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ :₹84,084 ಕೋಟಿ ‘ಸಮುದ್ರ ಮಂಥನ’ ಯೋಜನೆ: ಅದಾನಿಗೆ ಲಾಭ ಮಾಡಿಕೊಡುವ ಹುನ್ನಾರವೇ? ಕಾಂಗ್ರೆಸ್ ಆರೋಪ
ಇದೇ ವೇಳೆ, 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸಿಂಧೂ ಜಲ ಒಪ್ಪಂದವನ್ನು ‘ತಡೆಹಿಡಿದಿರುವ’ ನಿರ್ಧಾರ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
ಹೇಗ್ನ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿನ ಪ್ರಕಾರ, 1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿ ಮಾಡಲಾದ ಸಿಂಧೂ ಜಲ ಒಪ್ಪಂದ ಇನ್ನೂ ಜಾರಿಯಲ್ಲಿದೆ. ಒಪ್ಪಂದವನ್ನು ತಡೆಹಿಡಿಯಲು ಭಾರತಕ್ಕೆ ಮಾನ್ಯ ಕಾರಣವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಟ್ಲೆ ಜಲವಿದ್ಯುತ್ ಯೋಜನೆ ಸೇರಿದಂತೆ ಕೆಲವು ಯೋಜನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದಿನ ಪರಿಶೀಲನೆ ನಡೆಯಬೇಕಿದೆ.
ವಿಶ್ವ ಬ್ಯಾಂಕ್ ನೇಮಕ ಮಾಡುವ ತಟಸ್ಥ ತಜ್ಞರು ಈ ಜಲವಿದ್ಯುತ್ ಯೋಜನೆಗಳು ಒಪ್ಪಂದದ ನಿಯಮಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ಈ ಪ್ರಕ್ರಿಯೆಯ ಅಂತಿಮ ನಿರ್ಧಾರ 2027ರ ಜುಲೈ ವೇಳೆಗೆ ಹೊರಬರುವ ನಿರೀಕ್ಷೆಯಿದೆ.
ಹೀಗಾಗಿ, ಸಿಂಧೂ ಜಲ ಒಪ್ಪಂದದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಹಾಗೂ ಕಾನೂನು ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಭಾರತ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಹೇಗ್ ಮಧ್ಯಸ್ಥಿಕೆ ಸಂಸ್ಥೆಯ ಯಾವುದೇ ಆದೇಶವು ತನ್ನ ಯೋಜನೆಗಳು ಅಥವಾ ಸಾರ್ವಭೌಮ ನಿರ್ಧಾರಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಇದನ್ನೂ ನೋಡಿ :ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ: ‘ಗೋ ಬ್ಯಾಕ್’ ಘೋಷಣೆ, ಮತೀಯವಾದಿಗಳ ಕೆಟ್ಟ ನಡೆ Janashakthi Media
