ನವದೆಹಲಿ: ಕೇಂದ್ರ ಸರ್ಕಾರದ ₹84,084 ಕೋಟಿ ಮೊತ್ತದ ‘ಸಮುದ್ರ ಮಂಥನ ಯೋಜನೆ’ಯಿಂದ ಖಾಸಗಿ ಕಂಪನಿಗಳಿಗೆ, ವಿಶೇಷವಾಗಿ ಅದಾನಿ ಸಮೂಹಕ್ಕೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಿ, ಅನುದಾನವನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹ ಗೋಹಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದ್ರದ ಆಳದಲ್ಲಿನ ತೈಲ ಮತ್ತು ಅನಿಲ ಶೋಧನೆಗೆ ಕೇಂದ್ರ ಸಚಿವ ಸಂಪುಟ ₹84,084 ಕೋಟಿ ಮಂಜೂರು ಮಾಡಿದೆ. ಈ ಯೋಜನೆಯಡಿ ಶೋಧನೆ ನಡೆಸುವ ಕಂಪನಿಗೆ ಯೋಜನಾ ವೆಚ್ಚದ ಶೇ.50ರಷ್ಟು ಹಣವನ್ನು ನೇರವಾಗಿ ನೀಡುವ ವ್ಯವಸ್ಥೆ ಇದೆ ಎಂದು ಆರೋಪಿಸಿದರು.
ಈ ಯೋಜನೆಯಿಂದ ಅದಾನಿ ಸಮೂಹಕ್ಕೆ ಈಗಾಗಲೇ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೋಹಿಲ್ ದೂರಿದರು. ಅದಾನಿ ಸಮೂಹವು ಮೂರು ತೈಲ–ಅನಿಲ ಬ್ಲಾಕ್ಗಳಿಗೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದು, ಅವುಗಳಲ್ಲಿ ಶೋಧನೆ ಆರಂಭಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.
ಅದಾನಿ ಮತ್ತು ವೆಲ್ಸ್ಪನ್ ಸಂಸ್ಥೆಗಳು 2005ರಲ್ಲಿ ತೈಲ ಮತ್ತು ಅನಿಲ ಶೋಧನೆಗಾಗಿ ಜಂಟಿ ಸಹಭಾಗಿತ್ವದ ಸಂಸ್ಥೆ ಸ್ಥಾಪಿಸಿವೆ. ಅದರಲ್ಲಿ ಅದಾನಿ ಸಮೂಹ ಶೇ.65ರಷ್ಟು ಮತ್ತು ವೆಲ್ಸ್ಪನ್ ಶೇ.35ರಷ್ಟು ಪಾಲು ಹೊಂದಿವೆ ಎಂದು ಗೋಹಿಲ್ ತಿಳಿಸಿದರು. ಹೊಸ ಯೋಜನೆಯಿಂದ ಈ ಸಂಸ್ಥೆಯ ವಾಣಿಜ್ಯ ಸ್ಥಿತಿಗೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್ನ ಆರೋಪವಾಗಿದೆ.
मोदी सरकार में हर स्कीम सिर्फ अडानी और खुद नरेंद्र मोदी को फायदा पहुंचाने के लिए बनाई जाती है।
कैबिनेट ने ऐसी ही एक स्कीम को मंजूरी दी है- 'समुद्र मंथन योजना'
⦿ इस योजना के तहत भारत सरकार पहले फेज के लिए 84,084 करोड़ रुपए खर्च करेगी
⦿ मोदी सरकार इस प्रोजेक्ट का 50% पैसा सीधा… pic.twitter.com/jSKCxZZthc
— Congress (@INCIndia) August 31, 2026
ಇದನ್ನೂ ಓದಿ : ಫುಟ್ಪಾತ್ ಖಾಲಿ ಮಾಡಲು ಬುಲ್ಡೋಜರ್: ಬೀದಿ ವ್ಯಾಪಾರಿಗಳ ಬದುಕಿನ ಗತಿ ಏನು?
ಯೋಜನೆ ಘೋಷಣೆಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿ ಪ್ರಣವ್ ಅದಾನಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನ್ನೂ ಗೋಹಿಲ್ ಪ್ರಸ್ತಾಪಿಸಿದರು. ಯೋಜನೆಯ ಲಾಭ ಯಾರಿಗೆ ಸಿಗಲಿದೆ ಎಂಬುದಕ್ಕೆ ಇದು ಸೂಚನೆ ನೀಡುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.
ಇದೇ ವೇಳೆ, ವೆಲ್ಸ್ಪನ್ ಸಮೂಹವು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ₹10 ಕೋಟಿ ದೇಣಿಗೆ ನೀಡಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ಮಾಡಿದೆ. ಗುಜರಾತ್ನಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತೈಲ ಶೋಧನೆಗೆ ₹27,000 ಕೋಟಿ ಖರ್ಚು ಮಾಡಲಾಗಿತ್ತು. ಈ ವೆಚ್ಚ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಸಿಎಜಿ ವರದಿ ಹೇಳಿದೆ ಎಂದು ಗೋಹಿಲ್ ಆರೋಪಿಸಿದರು. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡುವ ಹಲವು ನಿರ್ಧಾರಗಳ ಸರಣಿಯ ಭಾಗವೇ ‘ಸಮುದ್ರ ಮಂಥನ’ ಯೋಜನೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಹಾರಾಷ್ಟ್ರದಲ್ಲಿ 6,600 ಮೆಗಾವ್ಯಾಟ್ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಟೆಂಡರ್, ಮಧ್ಯಪ್ರದೇಶದ ಸಿಂಗ್ರೌಲಿ ಪ್ರದೇಶದ ಕಲ್ಲಿದ್ದಲು ಗಣಿಗಾರಿಕೆ ಬ್ಲಾಕ್ಗಳ ಹಂಚಿಕೆ ಹಾಗೂ ತಾಮ್ರ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕ ಕಡಿತ ಸೇರಿದಂತೆ ಹಲವು ವಿಷಯಗಳನ್ನು ಗೋಹಿಲ್ ಪ್ರಸ್ತಾಪಿಸಿದರು.
₹84,084 ಕೋಟಿಯ ಸಂಪೂರ್ಣ ಹಣವನ್ನು ಖಾಸಗಿ ಕಂಪನಿಗಳಿಗೆ ನೀಡುವ ಬದಲು ಸರ್ಕಾರಿ ಸ್ವಾಮ್ಯದ ಒಎನ್ಜಿಸಿಗೆ ನೀಡಿ ದೇಶೀಯ ತೈಲ ಮತ್ತು ಅನಿಲ ಶೋಧನೆಗೆ ಬಳಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟಿನ ನಡುವೆ ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಹಣವನ್ನು ಖಾಸಗಿ ಕಂಪನಿಗಳಿಗೆ ನೀಡುವ ಅಗತ್ಯವೇನು ಎಂದು ಗೋಹಿಲ್ ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ: ‘ಗೋ ಬ್ಯಾಕ್’ ಘೋಷಣೆ, ಮತೀಯವಾದಿಗಳ ಕೆಟ್ಟ ನಡೆ Janashakthi Media
