ಸಹಕಾರ ಸಂಘಗಳಲ್ಲಿ ಅಧ್ಯಕ್ಷ ಸ್ಥಾನಕ್ಕೂ ಮೀಸಲು ವ್ಯವಸ್ಥೆಗೆ ಸರ್ಕಾರ ಒಪ್ಪಿಗೆ

ಬೆಂಗಳೂರು: ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷ ಸ್ಥಾನಕ್ಕೂ ಮೀಸಲು ವ್ಯವಸ್ಥೆ ಅಳವಡಿಕೆಗೆ ಅವಕಾಶ ಕಲ್ಪಿಸುವುದು, ಗ್ರೇಟರ್‌ ಬೆಂಗಳೂರು ಆಡಳಿತಕ್ಕೆ ಚುನಾವಣೆ ನಡೆಸಲು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ ಪರಿಗಣನೆ, ದೇವದಾಸಿಯರ ಮಕ್ಕಳ ಕಲ್ಯಾಣಕ್ಕೆ ನಾನಾ ಸೌಲಭ್ಯ ಸೇರಿದಂತೆ ನಾನಾ ಉದ್ದೇಶದ 17 ವಿಧೇಯಕಗಳಿಗೆ ಆಗಸ್ಟ್‌ 7ರಂದು ನಗರದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೂ ಸ್ಥಾನಮಾನ ಕಲ್ಪಿಸಲು ಆಯ್ದ ನಿರ್ದೇಶಕ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಸರಕಾರ ಮುಂದಾಗಿತ್ತು. ಈ ನಾಮನಿರ್ದೇಶಿತ ನಿರ್ದೇಶಕರಿಗೆ ಮತದಾನದ ಹಕ್ಕನ್ನೂ ಕಲ್ಪಿಸಿ ಉಭಯ ಸದನಗಳಲ್ಲೂಅಂಗೀಕಾರ ಪಡೆದು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ಸಹಕಾರ 

ಬಳಿಕ ವಿಧೇಯಕವನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವ ಪ್ರಸ್ತಾವವನ್ನು ಸರಕಾರ ತಿದ್ದುಪಡಿ ವಿಧೇಯಕದಲ್ಲಿಕೈಬಿಟ್ಟಿದೆ. ಈ ಸಂಘಗಳ ಅಧ್ಯಕ್ಷ ಸ್ಥಾನಕ್ಕೆ ಮೀಸಲು ನೀಡಲು ಅವಕಾಶ ಕಲ್ಪಿಸುವ ಅಂಶವು ತಿದ್ದುಪಡಿ ವಿಧೇಯಕದಲ್ಲಿದೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಸದ್ದಿಲ್ಲದ ತುರ್ತು ಪರಿಸ್ಥಿತಿ

ದೇವದಾಸಿ ಮಕ್ಕಳಿಗೆ ನಾನಾ ಸೌಲಭ್ಯ

ದೇವದಾಸಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಪಡೆದು ಉತ್ತಮ ಅವಕಾಶ ಪಡೆದುಕೊಳ್ಳಲು ಅನುಕೂಲವಾಗುವಂತೆ ತಂದೆಯ ಹೆಸರನ್ನು ದಾಖಲೆಗಳಲ್ಲಿ ದಾಖಲಿಸುವುದರಿಂದ ವಿನಾಯಿತಿ, ಪಿಂಚಣಿ ಸೇರಿದಂತೆ ಇತರ ಸೌಲಭ್ಯವನ್ನು ಸುಗಮವಾಗಿ ಪಡೆಯುವುದು ಸೇರಿದಂತೆ ನಾನಾ ಸೌಲಭ್ಯವುಳ್ಳ ‘ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ’ಕ್ಕೆ ಅನುಮೋದನೆ ದೊರಕಿದೆ.

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ- 2025ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೇಂದ್ರೀಯ ಅಂತರ್ಜಲ ಪ್ರಾಧಿಕಾರವು ಅಂತರ್ಜಲ ನಿರ್ವಹಣೆ ಸಂಬಂಧ ವಾಣಿಜ್ಯ, ಕೈಗಾರಿಕೆ, ಮೂಲಸೌಕರ್ಯ, ಗಣಿಗಾರಿಕೆ, ಟ್ಯಾಂಕರ್‌ ನೀರು ಪೂರೈಕೆ ಹಾಗೂ ಇತರೆ ಉದ್ದೇಶಗಳಿಗೆ ಅಂತರ್ಜಲ ಬಳಸಲು ನಿರಾಕ್ಷೇಪಣಾ ಪತ್ರ ನೀಡುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳನ್ನು ರಾಜ್ಯದಲ್ಲಿಅಳವಡಿಸಿಕೊಂಡು ಜಾರಿಗೊಳಿಸುವ ಅಂಶಗಳು ವಿಧೇಯಕದಲ್ಲಿವೆ.

ಆಯುಕ್ತಾಲಯ ಸ್ಥಾಪನೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ರಚನೆ, ಆಯುಕ್ತರ (ಐಎಎಸ್‌ ಅಧಿಕಾರಿ- ಹಿರಿಯ ಶ್ರೇಣಿ) ನೇಮಕ, ಅವರ ಅಧಿಕಾರ ಹಾಗೂ ಕಾರ್ಯ ನಿರ್ವಹಣೆ ವಿಧಾನ ಕುರಿತ ಅಂಶಗಳುಳ್ಳ ಕರ್ನಾಟಕ ನಗರ ಯೋಜನೆ ಹಾಗೂ ಸಂಬಂಧಿತ ಇತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣಗಳನ್ನು ಆಯುಕ್ತಾಲಯದ ವ್ಯಾಪ್ತಿಗೆ ಒಳಪಡಿಸುವುದು ಸೇರಿದಂತೆ ಹಲವು ಅಂಶಗಳಿವೆ.

ಜಿಬಿಎಗೆ ಚುನಾವಣೆ?

ನೂತನ ಗ್ರೇಟರ್‌ ಬೆಂಗಳೂರು ಆಡಳಿತಕ್ಕೆ ಚುನಾವಣೆ ನಡೆಸಲು ರಾಜ್ಯ ವಿಧಾನಸಭೆ ಚುನಾವಣೆಗೆ ಪರಿಗಣಿಸಿದ್ದ ಮತದಾರರ ಪಟ್ಟಿಯನ್ನೇ ಅನುಕರಿಸಲು ಅವಕಾಶ ಕಲ್ಪಿಸುವ ಗ್ರೇಟರ್‌ ಬೆಂಗಳೂರು ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಜಿಬಿಎ ಆಡಳಿತಕ್ಕೆ ಚುನಾವಣಾ ಆಯೋಗವೇ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂಬುದಾಗಿ ಕಾಯಿದೆಯಲ್ಲಿದೆ. ಹೊಸ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧಪಡಿಸಲು ಸಾಕಷ್ಟು ಸಮಯಾವಕಾಶ ಬೇಕಾಗಿರುವುದರಿಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನೇ ಪರಿಗಣಿಸಲು ತಿದ್ದುಪಡಿ ವಿಧೇಯಕ ಸಿದ್ಧಗೊಂಡಿದೆ. ಇದರಿಂದ ಜಿಬಿಎಗೆ ಶೀಘ್ರವೇ ಚೊಚ್ಚಲ ಚುನಾವಣೆ ನಡೆಯುವುದೇ ಎಂಬ ಕುತೂಹಲ ಮೂಡಿಸಿದೆ.

ಅನುಮೋದನೆಯಾದ ಪ್ರಮುಖ ವಿಧೇಯಕಗಳು

ಕರ್ನಾಟಕ ಬಂದರು (ಲ್ಯಾಂಡಿಂಗ್‌ ಮತ್ತು ಶಿಪ್ಪಿಂಗ್‌ ಫೀಸ್‌) (ತಿದ್ದುಪಡಿ) ವಿಧೇಯಕ (ಪ್ರತಿ ಮೂರು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಿಸುವ ಹಾಗೂ ಒಂದೊಮ್ಮೆ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆಯಾಗದಿದ್ದರೆ ಸರಕಾರ ಅಧಿಸೂಚನೆ ಮೂಲಕ ಶುಲ್ಕ ಪರಿಷ್ಕರಣೆಗೆ ಅವಕಾಶ ಕಲ್ಪಿಸುವುದು)

  • ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ
  • ಕರ್ನಾಟಕ ಸರಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ
  • ಕರ್ನಾಟಕ ಭೂಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕ
  • ಕರ್ನಾಟಕ ಅಪರಾಧ ಮುಕ್ತಗೊಳಿಸುವಿಕೆ (ಉಪಬಂಧಗಳ ತಿದ್ದುಪಡಿ) ವಿಧೇಯಕ
  • ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ
  • ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಅನುಕೂಲತೆ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ
  • ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ
  • ಸುಗ್ರೀವಾಜ್ಞೆ ಗೆ ಬದಲಾಗಿ ಇಬ್ಬರು ಹೆಚ್ಚುವರಿ ಸದಸ್ಯರನ್ನು ಸಹ ಕಾಯಿದೆಗೆ ಸೇರ್ಪಡೆಗೊಳಿಸುವ ಸಂಬಂಧ ಪರಿಷ್ಕೃತ ಗದಗ- ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರ ತಿದ್ದುಪಡಿ ವಿಧೇಯಕ
  • ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ ವಿಧೇಯಕ)

ಜಿಎಸ್‌ಟಿ ತಿದ್ದುಪಡಿ ಸಿಎಂಗೆ ಅಧಿಕಾರ

ಜಿಎಸ್‌ಟಿ ಕೌನ್ಸಿಲ್‌ನಲ್ಲಿಉದ್ದೇಶಿತ ತಿದ್ದುಪಡಿ ವಿಧೇಯಕದ ಬಗ್ಗೆ ತಕರಾರು, ಆತಂಕಗಳಿದ್ದರೆ ಆ ಬಗ್ಗೆ ಪರಾಮರ್ಶಿಸಿ ಸೂಕ್ತ ತೀರ್ಮಾನ ತೆಗೆದುಕೊಳುವ ಅಧಿಕಾರವನ್ನು ಮುಖ್ಯಮಂತ್ರಿಗಳ ನೀಡಿ ನಂತರ ಕರ್ನಾಟಕ ಜಿಎಸ್‌ಟಿ ತಿದ್ದುಪಡಿ ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.

ವೇಮುಲ ವಿಧೇಯಕ ಮುಂದೂಡಿಕೆ

ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಘನತೆಯ ಹಕ್ಕು ರಕ್ಷಿಸುವ ಉದ್ದೇಶದ ‘ಕರ್ನಾಟಕ ರೋಹಿತ್‌ ವೇಮುಲ ಶಿಕ್ಷಣ ಮತ್ತು ಘನತೆಯ ಹಕ್ಕು (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) ವಿಧೇಯಕ -2025’ದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದರೂ ಮುಂದೂಡಿಕೆಯಾಗಿದೆ. ಉದ್ದೇಶಿತ ವಿಧೇಯಕ ಕುರಿತಂತೆ ವಿಸ್ತೃತ ಪರಾಮರ್ಶೆ ಅಗತ್ಯವಿರುವ ಹಿನ್ನೆಲೆಯಲ್ಲಿಈ ವಿಷಯವನ್ನು ಮುಂದೂಡಲಾಯಿತು ಸಚಿವ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಇದನ್ನೂ ನೋಡಿ: ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಸಮಾವೇಶ

Donate Janashakthi Media

Leave a Reply

Your email address will not be published. Required fields are marked *