ಮೈಸೂರು: ಆದಿವಾಸಿಗಳಿಗೆ ಸರ್ಕಾರ ನೀಡಿರುವ ಭರವಸೆಯಂತೆ ಭೂಮಿ ನೀಡಬೇಕು, ಸುಸಜ್ಜಿತ ವಸತಿ ಕಲ್ಪಿಸಬೇಕು ಹಾಗೂ ವರ್ಷಪೂರ್ತಿ ಪೌಷ್ಟಿಕ ಆಹಾರ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಹಕ್ಕೊತ್ತಾಯ ಸಲ್ಲಿಸಲಾಯಿತು. ಆದಿವಾಸಿಗಳಿಗೆ
ದಸರಾ ಗಜಪಯಣದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿಗಳಿಗೆ ಸಮಿತಿಯ ಮುಖಂಡರು ಹಕ್ಕೊತ್ತಾಯ ಸಲ್ಲಿಸಿದರು. ಆದಿವಾಸಿ ಕುಟುಂಬಗಳ ಪುನರ್ವಸತಿ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಭೂಮಿ ಹಾಗೂ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕುಟುಂಬಗಳಿಗೆ ತಕ್ಷಣ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಆದಿವಾಸಿ ಕುಟುಂಬಗಳಿಗೆ ಭೂಮಿ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕ ಆಹಾರದಂತಹ ಮೂಲಭೂತ ಅಗತ್ಯಗಳನ್ನು ಖಾತರಿಪಡಿಸಬೇಕು. ಈಗಾಗಲೇ ಭೂಮಿ ನೀಡಲಾಗಿರುವ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಆದಿವಾಸಿಗಳ ಬದುಕಿನ ಗುಣಮಟ್ಟ ಸುಧಾರಿಸಲು ಸರ್ಕಾರ ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ : ಉದ್ಯಾನವನಗಳ ಜಾಗಕ್ಕೆ ಶೇ.5ರಷ್ಟು ಕತ್ತರಿ: ತಿದ್ದುಪಡಿ ಹಿಂಪಡೆಯಲು ‘ಜಾಗೃತ ನಾಗರಿಕರು ಕರ್ನಾಟಕ’ ಒತ್ತಾಯ
ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ಆದಿವಾಸಿ ಸಮುದಾಯಕ್ಕೆ ಸಮರ್ಪಕವಾಗಿ ತಲುಪಬೇಕು. ಪುನರ್ವಸತಿ ಪ್ರಕ್ರಿಯೆಯಲ್ಲಿ ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಆದಿವಾಸಿಗಳ ಜೀವನೋಪಾಯ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಹಕ್ಕೊತ್ತಾಯದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ತಾಲೂಕು ಅಧ್ಯಕ್ಷ ಜೆ.ಕೆ. ತಿಮ್ಮ, ಕಾರ್ಯದರ್ಶಿ ಸಂಜಯ್, ಖಜಾಂಚಿ ಬಸಪ್ಪ, ಮುಖಂಡರಾದ ವಿ. ಬಸವರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ತಾಲೂಕು ಅಧ್ಯಕ್ಷ ಬೀರೇಶ್ವರ್, ಆದಿವಾಸಿ ಮುಖಂಡರಾದ ಹರೀಶ್, ಅನೀಲ್, ನಾಗರಾಜ್, ರಮೇಶ್, ಮತ್ತಪ್ಪ, ಗುಂಡಾ, ಅಶೋಕ, ಜಯಪ್ಪ, ಸಾವಿತ್ರಿ, ವಸಂತ, ಅಯ್ಯಪ್ಪ, ಬಿ.ಕೆ. ಸೋಮ, ಸಣ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಉಚಿತ ಯುಪಿಐಗೆ ಶುಲ್ಕ ಬೀಳುತ್ತಾ? ಕಾರ್ಪೊರೇಟ್ ಲಾಭದ ಸಾಧನವಾಯ್ತೆ ಯುಪಿಐ? Janashakthi Media
