ಮಾಲಿನ್ಯ ಸಂತ್ರಸ್ತ ಗ್ರಾಮಸ್ತರ ಬದುಕಿನೊಂದಿಗೆ ಎಮ್ಆರ್ಪಿಎಲ್ ಚೆಲ್ಲಾಟ
ಜೋಕಟ್ಟೆ: MRPL ಮೂರನೆ ಹಂತದ ಕೋಕ್ ಸಲ್ಪರ್ ಘಟಕದಿಂದ ಉಂಟಾದ ಮಾರಕ ಮಾಲಿನ್ಯದಿಂದ ಸಂತ್ರಸ್ತರಾದ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಸ್ಥರು 2014 ರಲ್ಲಿ ಕಂಪೆನಿಯ ವಿರುದ್ದ ಬೃಹತ್ ಹೋರಾಟವನ್ನು ಸಂಘಟಿಸಿದ್ದರು. ಹೋರಾಟವು ತೀವ್ರ ಸ್ವರೂಪ ಪಡೆದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು ಎಂದು ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಹಸಿರು
ಸುಮಾರು ಎರಡು ವರ್ಷಗಳ ಸತತ ಹೋರಾಟದ ತರುವಾಯ 2016 ಎಪ್ರಿಲ್ ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳ ಆಧಾರದಲ್ಲಿ, ಕೋಕ್ ಸಲ್ಪರ್ ಘಟಕದ ಮಾಲಿನ್ಯಕ್ಕೆ ತಡೆ ಹೇರಲು ಆರು ಅಂಶಗಳ ಕ್ರಮಗಳನ್ನು ಕೈಗೊಳ್ಳಲು ಕಂಪೆನಿಗೆ ಸೂಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತು. ಹಸಿರು
ಶಬ್ದ, ವಾಯು ಮಾಲಿನ್ಯ, ಕೋಲ್, ಸಲ್ಪರ್ ಹಾರುಬೂದಿಯ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದ ಈ ಆರು ಅಂಶಗಳಲ್ಲಿ ಐದು ಅಂಶಗಳನ್ನು ಕಂಪೆನಿಯು ಭಾಗಶಃ ಜಾರಿಗೊಳಿಸಿದೆ. ಇಷ್ಟಾದರೂ ಶಬ್ದ, ವಾಯು ಮಾಲಿನ್ಯದ ಪ್ರಮಾಣ ಕಡಿಮೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಸಿರು
ಇದನ್ನೂ ಓದಿ: ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾಕ್ಕೆ ಮಾಯಾವತಿ ಆಗ್ರಹ
ಆರು ಅಂಶಗಳ ಆದೇಶದಲ್ಲಿ ಕಂಪೆನಿ ಹಾಗು ಗ್ರಾಮಗಳ ಜನವಸತಿ ನಡುವಿನ ಹೆಚ್ಚು ಭಾದಿತ ಪ್ರದೇಶದಲ್ಲಿ 27 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಹಸಿರು ವಲಯ ನಿರ್ಮಿಸುವುದು, ಜಮೀನು, ವಸತಿ ಕಳೆದುಕೊಳ್ಳುವವರಿಗೆ ಕೈಗಾರಿಕಾ ಭೂಸ್ವಾಧೀನದ ನಿಯಮದಂತೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಅತ್ಯಂತ ಮಹತ್ವದ ಅಂಶ ಆಗಿತ್ತು. ಹಸಿರು
ಸರಕಾರದ ಈ ಮಹತ್ವದ ಆದೇಶ ಜಾರಿಗೆ ಕಂಪೆನಿಯು ತೀರಾ ನಿರಾಸಕ್ತಿ ತೋರಿದ ಕಾರಣ, ಹತ್ತು ವರ್ಷಗಳ ಕಾಲ ಭೂಸ್ವಾಧೀನ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಹೋರಾಟ ಸಮಿತಿಯ ಬೆಂಬಿಡದ ಪ್ರಯತ್ನದಿಂದಾಗಿ ಸ್ವಾಧೀನ ಪಡೆಸಬೇಕಾದ 27 ಎಕರೆ ಜಮೀನು ಗುರುತಿಸುವ ಕಾರ್ಯವು 5 ವರ್ಷಗಳ ಹಿಂದೆ ಅಂತಿಮ ಗೊಂಡಿತ್ತು. ಆ ತರುವಾಯ ಭೂಸ್ವಾಧೀನದಿಂದ ಜಮೀನು, ವಸತಿ ಕಳೆದು ಕೊಳ್ಳುವ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಪ್ಯಾಕೇಜ್ ಅಂತಿಮ ಗೊಳಿಸಲು ಮತ್ತೆ ಐದು ವರ್ಷಗಳ ದೀರ್ಘ ಅವಧಿಯನ್ನು ಕ್ರಮಿಸಬೇಕಾಯಿತು. ಕೈಗಾರಿಕೆಗಾಗಿ ಭೂ ಸ್ವಾಧೀನದ ಸಂದರ್ಭ ನೀಡುವ ನಿಯಮ ಬದ್ಧ ಪರಿಹಾರಗಳನ್ನು ನೀಡಲು ಕಂಪೆನಿ ನಿರಾಕರಿಸಿತು ಎಂದರು. ಹಸಿರು
ಭೂಮಿ ಕಳೆದು ಕೊಳ್ಳುವ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗ, ಬದಲಿ ಮನೆ ನಿವೇಶನ ಸಹಿತ ಹಲವು ಸವಲತ್ತುಗಳನ್ನು ನೀಡಲು ನಿರಾಕರಿಸಿತು. ಎಲ್ಲವನ್ನು ಸೇರಿಸಿ ಒಂದು ಬಾರಿಯ ನಗದು ಪರಿಹಾರ ಪಡೆಯಲು ಒತ್ತಾಯಿಸಿತು. ಕಂಪೆನಿಯ ಮಾಲಿನ್ಯದಿಂದ ಈಗಿರುವ ವಸತಿಯಲ್ಲಿ ಜೀವನ ನಡೆಸಲಾಗದ ಸಂತ್ರಸ್ತರ ಅಸಹಾಯಕತೆಯನ್ನು ದುರುಪಯೋಗ ಪಡಿಸಿ, ಉದ್ಯೋಗ, ಬದಲಿ ನಿವೇಶನದಂತಹ ಬಹುಮುಖ್ಯ ಅಂಶಗಳನ್ನು ಕೈ ಬಿಟ್ಟು, ಅದರ ಬದಲಿಗೆ ಎಲ್ಲವನ್ನು ಮೊತ್ತವಾಗಿ ಸೇರಿಸಿ ಒಂದು ಬಾರಿಗೆ ನಗದಾಗಿ ಪಡೆಯುವ ‘ಒನ್ ಟೈಮ್ ಸಟ್ಲ್ ಮೆಂಟ್’ ಗೆ ಸಂತ್ರಸ್ತ ಕುಟುಂಬಗಳು ಒಪ್ಪಿಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ಕಂಪೆನಿ ನಿರ್ಮಿಸಿತು.
ಕಂಪೆನಿಯ ಈ ಎಲ್ಲಾ ಶರತ್ತುಗಳನ್ನು ಒಪ್ಪಿಕೊಂಡು ಪರಿಹಾರ ಪ್ಯಾಕೇಜ್ ಅಂತಿಮಗೊಂಡ ತರುವಾಯವೂ MRPL ಆಡಳಿತವು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅನಗತ್ಯ ವಿಳಂಬ ಧೋರಣೆ ಅನುಸುರಿಸುತ್ತಿದೆ. ಒಂದು ಬಾರಿಯ ನಗದು ಪರಿಹಾರಕ್ಕೆ ಒಪ್ಪಿಕೊಂಡರೆ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಿ ಕಂಪೆನಿಯು ನೇರವಾಗಿ ಭೂಸ್ವಾಧೀನ ನಡೆಸುವುದು ಎಂದು ತಿಳಿಸಿದ್ದ ಕಂಪೆನಿಯು ಈಗ ಮತ್ತೆ ಹೊಸ ಆಟ ಹೂಡಿದೆ. ಕೆಐಎಡಿಬಿ ಇಂದಲೆ ಭೂಸ್ವಾಧೀನ ನಡೆಸುವುದಾಗಿ ತಿಳಿಸಿದೆ. ಅಷ್ಟಲ್ಲದೆ, ಭೂಸ್ವಾಧೀನ ಪ್ರಕ್ರಿಯೆಗೆ ಕೆಐಎಡಿಬಿ ವಿಧಿಸುವ ಭೂ ಮೌಲ್ಯದ ಹತ್ತು ಶೇಕಡಾ ಮೊತ್ತದ ಸೇವಾ ಶುಲ್ಕವನ್ನು ಮನ್ನಾ ಮಾಡಿ ಉಚಿತವಾಗಿ ಭೂಸ್ವಾಧೀನ ನಡೆಸಿಕೊಡುವಂತೆ ಪತ್ರ ಬರೆದಿದೆ ಎಂದು ಹೇಳಿದರು.
ಇದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ಮತ್ತೆ ವಿಳಂಬಗೊಳ್ಳುವ ಭೀತಿಗೆ ಸಂತ್ರಸ್ತ ಗ್ರಾಮಸ್ಥರು ಒಳಗಾಗಿದ್ದಾರೆ. 4.2. 2026 ಕ್ಕೆ ಜಿಲ್ಲೆಯ ಸಂಸದರು, ಮೂಡಬಿದ್ರೆ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಪ್ಯಾಕೇಜ್ ಅಂತಿಮ ಗೊಂಡಿತ್ತು. ಗರಿಷ್ಟ ಎರಡು ತಿಂಗಳ ಅವಧಿಯಲ್ಲಿ ಭೂ ಸ್ವಾಧೀನ ಆರಂಭಿಸುವುದು, ಮಳೆಗಾಲ ಆರಂಭದ ಮೊದಲು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯ ಕೊನೆಯಲ್ಲಿ ಘೋಷಿಸಿದ್ದರು.
ಇದೀಗ ಎಮ್ ಆರ್ ಪಿ ಎಲ್ ಹೊಸ ಆಟ ಹೂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಗೊಳ್ಳುತ್ತಿದೆ.ಇದರಿಂದಾಗಿ ಕೈಗಾರಿಕಾ ಮಾಲಿನ್ಯದಿಂದ ಸಂತ್ರಸ್ಥರಾಗಿರುವ ಗ್ರಾಮಸ್ಥರ ಬದುಕು ನರಕ ಸದೃಶವಾಗಿ ಮುಂದುವರಿಯುವಂತಾಗಿದೆ. ಕರ್ಕಶ ಶಬ್ದ, ಸಹಿಸಲಸಾಧ್ಯವಾದ ದುರ್ಗಂಧ, ಕುಡಿಯುವ ನೀರಿನ ಮಾಲಿನ್ಯ, ಪೆಟ್ ಕೋಕ್ ಹಾರುಬೂದಿಯ ಕಾಟದಿಂದ ಬೇಸತ್ತಿರುವ ಜನತೆ ಕಂಪೆನಿಯ ಹೊಸ ಧೋರಣೆಯಿಂದ ಕಂಗಾಲಾಗುವಂತಾಗಿದೆ.
ಚರ್ಮರೋಗ, ಶ್ವಾಸಕೋಶದ ಕಾಯಿಲೆಯಿಂದ ಹಿಡಿದು ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಂದ ಬಳಲಿ ಹೋಗಿರುವ ಸಂತ್ರಸ್ತ ಗ್ರಾಮಸ್ತರಿಗೆ ಇನ್ನಷ್ಟು ವಿಳಂಬ ಧೋರಣೆ ಸಹಿಸಲು ಸಾಧ್ಯವೆ ಇಲ್ಲ. ಇಂತಹ ಗಂಭೀರವಾದ ಸಮಸ್ಯೆಗಳು, ವಾಸಿಸಲು ಸಾಧ್ಯವೇ ಇಲ್ಲದ ಕಾರಣಕ್ಕೆ ಭೂಸ್ವಾಧೀನದ ಪ್ಯಾಕೇಜ್ ನಲ್ಲಿ ಉದ್ಯೋಗ ಪಡೆಯುವ, ಬದಲಿ ಜಮೀನು ಪಡೆಯುವ ಸೇರಿದಂತೆ ಹಲವು ಹಕ್ಕುಗಳನ್ನು ಗ್ರಾಮಸ್ಥರು ಬಿಟ್ಟುಕೊಟ್ಟಿದ್ದರು. ಹಾಗಿದ್ದೂ ಮತ್ತಷ್ಟು ಸತಾಯಿಸುವ ಕಂಪೆನಿಯ ಈ ಧೋರಣೆಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಂಪೆನಿ ಹಾಗು ಜಿಲ್ಲಾಡಳಿತ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಬೇಕು, ಒಂದು ಬಾರಿಗೆ ನಗದಾಗಿ ಪರಿಹಾರ ಪಡೆಯುವ ಪ್ಯಾಕೇಜ್ ಆಗಿರುವುದರಿಂದ ಮೊದಲಿನ ತೀರ್ಮಾನದಂತೆ ಜಿಲ್ಲಾಡಳಿತದ ಮೂಲಕವೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಎಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಆಗ್ರಹಿಸುತ್ತದೆ ವಾರದ ಒಳಗಡೆ ಸೂಕ್ತ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ಮೇ 1 ರಿಂದ ಸಂತ್ರಸ್ತ ಗ್ರಾಮಸ್ಥರನ್ನು ಸಂಘಟಿಸಿ MRPL ಮುಂಭಾಗ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಅರಂಭಿಸುವುದಾಗಿ ಈ ಮೂಲಕ ತಿಳಿಸುತ್ತಿದ್ದೇವೆ ಎಂದರು.
ಇದನ್ನೂ ನೋಡಿ: ಎಕ್ಸಿಟ್ ಪೋಲ್ vs ಫಲಿತಾಂಶ: ಅಂದಾಜು ಮೀರಿದ ಎಲ್ಡಿಎಫ್ ಗೆಲುವು Janashakthi Media
