ವಿರಾಜಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡಕೂಲಿ ಕಾರ್ಮಿಕ ಕುಟುಂಬಗಳ ಪಡಿತರ ಚೀಟಿಯನ್ನು ರದ್ದು ಮಾಡುತ್ತಿರುವುದರಿಂದ ಬಡ ಕುಟುಂಬಗಳಿಗೆ ಸರ್ಕಾರದ ಪಡಿತರ ಸೌಲಭ್ಯಗಳು ದೊರಕುತ್ತಿಲ್ಲ. ಆದ್ದರಿಂದ ಕೂಡಲೆ ಸರ್ಕಾರ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸುವಂತೆ ಆಗ್ರಹಿಸಿ ಸಿಪಿಐಎಂ ಪಕ್ಷದ ವತಿಯಿಂದ ಪಟ್ಟಣದಲ್ಲಿ ಮಿನಿವಿಧಾನಸೌಧದ ಮುಂಭಾಗ ಏಪ್ರಿಲ್ 1ರಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಪ್ರವಿಣ್ ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. ವಿರಾಜಪೇಟೆ
ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಎ.ಸಿ.ಸಾಬು ಮಾತನಾಡಿ, ’ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಸರ್ಕಾರ ಬಡ ಕೂಲಿ ಕಾರ್ಮಿಕರ ಪಡಿತರ ಸೌಲಭ್ಯವನ್ನು ರದ್ದು ಮಾಡಲು ಹೊರಟಿದೆ. ರಾಜ್ಯದಲ್ಲಿ 7.76 ಲಕ್ಷ ಬಿಪಿಎಲ್ ಚೀಟಿಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ‘ ಎಂದರು. ವಿರಾಜಪೇಟೆ
ಈಗಾಗಲೇ 3 ಲಕ್ಷದ 65 ಸಾವಿರ ಪಡಿತರ ಚೀಟಿ ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ 4.5 ಸಾವಿರಕ್ಕೂ ಹೆಚ್ಚು ಕಾರ್ಡ್ಗಳನ್ನು ರದ್ದು ಮಾಡಲಾಗಿದ್ದು, ಸರ್ಕಾರದ ಬಿಪಿಎಲ್ ಪಡಿತರ ಚೀಟಿ ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹ 1.20 ಲಕ್ಷ ನಿಗದಿ ಮಾಡಲಾಗಿದೆ. ರದ್ದು ಮಾಡಿರುವ ಪಡಿತರ ಚೀಟಿಯನ್ನು ಕೂಡಲೇ ವಿತರಿಸಬೇಕು. ಇಲ್ಲವಾದಲ್ಲಿ ಕಾರ್ಮಿಕ ಸಂಘಟನೆಗಳಿಂದ ದೊಡ್ಡಮಟ್ಟದ ಹೋರಾಟದ ಅನಿವಾರ್ಯ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡ ವಕೀಲ ಕೆ.ವಿ.ಸುನೀಲ್ ಮಾತನಾಡಿ, ’ಸರ್ಕಾರ ಪಡಿತರ ಚೀಟಿ ರದ್ದು ಮಾಡಿರುವ ಪಕ್ಷ ವಿರೋಧಿಸುತ್ತದೆ. ರಾಜ್ಯದಲ್ಲಿ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯ ಮೂಲಕ ಮತ್ತಷ್ಟು ಅಗತ್ಯ ವಸ್ತುಗಳನ್ನು ವಿತರಿಸಬೇಕು‘ ಎಂದು ಒತ್ತಾಯಿಸಿದರು.
ಸಿಪಿಐಎಂ ಪಕ್ಷದ ನಗರ ಸಮಿತಿಯ ಕೆ.ಎಸ್.ರಮೇಶ್ ಶಾಜಿ, ಪದ್ಮಿನಿ ಶ್ರಿಧರ್, ದಲಿತ ಸಮಿತಿಯ ಸತೀಶ್ ಕುಮಾರ್ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪ್ರವಿಣ್ ಕುಮಾರ್ ಪಡಿತರ ಚೀಟಿಯನ್ನು ರದ್ದು ಮಾಡಲು ಕಾರಣ ಏನೆಂಬುದು ತಿಳಿದಿಲ್ಲ. ಯಾರ ಪಡಿತರ ಚೀಟಿ ರದ್ದು ಮಾಡಲಾಗಿದೆಯೊ ಅವರು ಅರ್ಜಿ ಸಲ್ಲಿಸಲಿ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಎ.ಹಮೀದ್, ಕೆ.ಎಸ್.ರತೀಶ್, ಹರಿದಾಸ್, ಖಾಸಿಂ, ಬಾಪುಟ್ಟಿ, ಡಿವೈಎಫ್ಐ ಎ.ಎಚ್.ಸಾದೀಕ್, ದಸಂಸದ ಕುಮಾರ, ಸದಸ್ಯರು ಭಾಗವಹಿಸಿದ್ದರು.
ಇದನ್ನೂ ನೋಡಿ: ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media
