ಶಹಾಪುರ: ‘ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಪ್ರಾದೇಶಿಕ ಪಕ್ಷಗಳನ್ನು ನುಂಗಿ ಹಾಕಿವೆ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯ ತೆಕ್ಕೆಯಲ್ಲಿ ಸಿಲುಕಿಕೊಂಡಿದೆ. ಕಾಂಗ್ರೆಸ್ನಲ್ಲಿ ಅಧಿಕಾರದ ಗುದ್ದಾಟ ಜೋರಾಗಿದೆ. ನಿಮಗೆ ಅಧಿಕಾರ ನೀಡಿರುವುದು ಜನರ ಕಲ್ಯಾಣಕ್ಕಾಗಿ ಎಂಬುವುದು ಮರೆಯಬೇಡಿ’ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎ.ವಿಜಯರಾಘವನ್ ಏಪ್ರಿಲ್ 27ರಂದು ತಿಳಿಸಿದರು. ನಾಣ್ಯ
ತಾಲ್ಲೂಕಿನ ಗೋಗಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ (ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ)ದ ಸಂಯೋಜಿತ 9ನೇ ರಾಜ್ಯ ಸಮ್ಮೇಳನದ ‘ಪ್ರತಿನಿಧಿ ಅಧಿವೇಶನ’ದಲ್ಲಿ ಅವರು ಮಾತನಾಡಿದರು. ನಾಣ್ಯ
‘ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ. ಕಾಂಗ್ರೆಸ್ ಸರ್ಕಾರವು ಬಿಜೆಪಿಯನ್ನು ಟೀಕಿಸುತ್ತಾ ಬಿಜೆಪಿ ಸರ್ಕಾರವು ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಯನ್ನು ಪರೋಕ್ಷವಾಗಿ ಜಾರಿಗೆ ತರಲು ಹೊರಟಿರುವುದು ಸರಿಯಾದ ಕ್ರಮವಲ್ಲ’ ಎಂದರು.
ಇದನ್ನೂ ಓದಿ: ಬೆಂಗಳೂರು | ಬಿಸಿಲಿನ ತಾಪ ಹೆಚ್ಚಳ: ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆ
ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯದರ್ಶಿ ವಿ.ಶಿವದಾಸನ್ ಮಾತನಾಡಿ, ‘ರಾಜ್ಯದಲ್ಲಿ ಕೂಲಿಕಾರ್ಮಿಕರ ಬದುಕು ಹದಗೆಟ್ಟಿದೆ. ಮೈಕ್ರೋ ಫೈನಾನ್ಸ್ ಹಾವಳಿಯನ್ನು ಹೆಚ್ಚಿಸುವುದರ ಮೂಲಕ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಸಾಲ ಸೌಲಭ್ಯವನ್ನು ಕಡಿತ ಮಾಡಿದೆ’ ಎಂದು ಹೇಳಿದರು.
‘ಕಳೆದ ಐದು ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ಕೃಷಿಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದ್ವಿಮುಖ ನೀತಿ ಕಾರಣ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಸರಿಯಾದ ನಡೆಯಲ್ಲ’ ಎಂದು ಟೀಕಿಸಿದರು.
‘ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿವಾಗಿವೆ. ಶಾಶ್ವತ ಯೋಜನೆಗಳಾದ ಉಚಿತ ಶಿಕ್ಷಣ, ಉಚಿತ ಆರೋಗ್ಯ, ನಿವೇಶನ, ಭೂಮಿ ಹಂಚಿಕೆ, ಗ್ಯಾರಂಟಿ ಕೂಲಿ ಹಣ ಒದಗಿಸಬೇಕು. ಬಿಜೆಪಿ ಒಂದಡೆ ಗ್ಯಾರಂಟಿ ವಿರೋಧಿಸುತ್ತಲೇ ಮತ್ತೊಂದೆಡೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.
ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಯಶವಂತ, ಉಪಾಧ್ಯಕ್ಷ ಜಿ.ಎಸ್.ನಾಗರಾಜ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಚೆನ್ನಪ್ಪ ಆನೇಗುಂದಿ, ಭೀಮಶೆಟ್ಟಿ ಯಂಪಳ್ಳಿ, ನಾಗರತ್ನ ನಾಡಾ, ಅನಿಲಕುಮಾರ, ಬಿ.ಎಂ. ಶಿವಮಲ್ಲಯ್ಯ, ಬಿ.ಹನುಮೇಶ, ಮುನಿ ವೆಂಟಪ್ಪ, ವೆಂಕಟೇಶ್ವರಲು ಸೇರಿದಂತೆ ಪ್ರತಿನಿಧಿ ಅಧಿವೇಶದಲ್ಲಿ 300 ಜನ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಗಲಿದ ಗಣ್ಯರನ್ನು ಸ್ಮರಿಸಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media
