ಸಿಎಎ ಜಾರಿ ಇಲ್ಲ | ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಪುನರುಚ್ಛಾರ

ತಿರುವನಂತಪುರಂ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗುವುದಿಲ್ಲ ಎಂಬ ನಿಲುವಿಗೆ ತಮ್ಮ ಸರ್ಕಾರ ಇನ್ನೂ ಅಚಲವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ದೇಶಾಭಿಮಾನಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಎ ನಾಗರಿಕ ಸಮುದಾದಯದ ಒಂದು ವರ್ಗವನ್ನು ಬೆದರಿಸುವ ಗುರಿಯನ್ನು ಹೊಂದಿದೆ ಎಂದು ಟೀಕಿಸಿದ್ದಾರೆ. ದಕ್ಷಿಣದ ಮತ್ತೊಂದು ರಾಜ್ಯವಾದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡಾ ಬುಧವಾರ ಸಿಎಎ ವಿರುದ್ಧ ಮಾತನಾಡಿದ್ದಾರೆ.

“ಸಿಎಎ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳುವುದನ್ನು ನಾವು ಕೇಳುತ್ತಿದ್ದೇವೆ. ಕೇರಳದಲ್ಲಿ ಇದನ್ನು ಜಾರಿಗೆ ತರುವುದಿಲ್ಲ ಎಂದು ನಾವು ಈಗಾಗಲೇ ಹೇಳಿದ್ದೇವೆ, ಅದೇ ಹೇಳಿಕೆಗೆ ಇನ್ನೂ ಎಲ್‌ಡಿಎಫ್ ಸರ್ಕಾರದ ನಿಲುವಾಗಿದೆ” ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ತಿಜೋರಿ ತುಂಬಿಸುವ 10 ನೇ ರೈತ-ಕಾರ್ಮಿಕ ವಿರೋಧಿ ಬಜೆಟ್: ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿಭಟನೆಗೆ ಕರೆ

ಜಾತ್ಯತೀತ ರಾಷ್ಟ್ರವನ್ನು ಧಾರ್ಮಿಕ ರಾಷ್ಟ್ರವಾಗಿ ಪರಿವರ್ತಿಸಲು ದೇಶದಲ್ಲಿ ತ್ವರಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, “ಈ ಎಲ್ಲಾ ಅಪಾಯಕಾರಿ ಪ್ರವೃತ್ತಿಗಳು ಮತ್ತು ನಡೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು” ಎಂದು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಭಾಷಣದಲ್ಲಿ ಸಿಎಂ ಹೇಳಿದ್ದಾರೆ.

 ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ತಮಿಳುನಾಡು ಎಂದಿಗೂ ಜಾರಿಗೆ ತರುವುದಿಲ್ಲ: ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್

ಮುಸ್ಲಿಮರು ಮತ್ತು ಶ್ರೀಲಂಕಾ ತಮಿಳರ ವಿರುದ್ಧದ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ತಮಿಳುನಾಡು ಎಂದಿಗೂ ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬುಧವಾರ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಕಾನೂನನ್ನು ಏಳು ದಿನಗಳಲ್ಲಿ ದೇಶದಲ್ಲಿ ಜಾರಿಗೆ ತರಲಾಗುವುದು ಎಂಬ ಕೇಂದ್ರ ರಾಜ್ಯ ಸಚಿವ ಸಂತಾನು ಠಾಕೂರ್ ಅವರ ಹೇಳಿಕೆಯನ್ನು ಅವರು ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನಲ್ಲಿ ಪೌರತ್ವ (ತಿದ್ದುಪಡಿ) ಕಾಯಿದೆಗೆ ಕಾಲಿಡಲು ನಾವು ಬಿಡುವುದಿಲ್ಲ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ. ಪಶ್ಚಿಮ ಬಂಗಾಳ ಮಾತ್ರವಲ್ಲದೆ ಭಾರತದಾದ್ಯಂತ ಸಿಎಎ ಏಳು ದಿನಗಳಲ್ಲಿ ಜಾರಿಗೆ ಬರಲಿದೆ ಎಂಬ ಠಾಕೂರ್ ಅವರ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯಿಸುತ್ತಾ, ಡಿಎಂಕೆಯು ವಿರೋಧ ಪಕ್ಷದಲ್ಲಿದ್ದರೂ, ತಮಿಳುನಾಡಿನಲ್ಲಿ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಅದರ ವಿರುದ್ಧ ಎರಡು ಕೋಟಿ ಸಹಿಗಳನ್ನು ಒಟ್ಟುಗೂಡಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಟೀಕಾಕಾರ, ಹೋರಾಟಗಾರ ಹರ್ಷ್ ಮಂದರ್ ಮೇಲೆ ಸಿಬಿಐ ದಾಳಿ

“ನಾವು 2021 ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಸಿಎಎ ಹಿಂಪಡೆಯಲು ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದೇವೆ. ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಡಿಎಂಕೆ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ. ದೇಶದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ವಿರುದ್ಧವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ, ಕೇಂದ್ರ ಸರ್ಕಾರದ ವಿಧ್ವಂಸಕ ಚಟುವಟಿಕೆಗಳು ಮತ್ತು ಅದನ್ನು ಬೆಂಬಲಿಸುವ ಎಐಎಡಿಎಂಕೆಯ ಕಪಟ ನಾಟಕಗಳನ್ನು ಜನರು ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅದಾಗ್ಯೂ, ಸ್ಟಾಲಿನ್‌ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಪಕ್ಷವು ಸರ್ಕಾರದಲ್ಲಿದ್ದಾಗಲೂ ಅಲ್ಪಸಂಖ್ಯಾತರಿಗೆ ಅಥವಾ ಶ್ರೀಲಂಕಾ ತಮಿಳರಿಗೆ ಯಾವುದೇ ಸಮಸ್ಯೆಯಾದರೆ ಮೌನವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕೋಮುವಾದವನ್ನು ವಿರೋಧಿಸುವ ನಾಟಕ’ವನ್ನೇ ತನ್ನ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡಿರುವ ಡಿಎಂಕೆ, ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯನ್ನು ವಿರೋಧಿಸುವ ಮೂಲಕ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವಾಗ ಬಿಜೆಪಿಯೊಂದಿಗೆ ಸ್ನೇಹ ಬೆಳೆಸುವ ಮೂಲಕ ಅಲ್ಪಸಂಖ್ಯಾತರನ್ನು ವಂಚಿಸುತ್ತಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ಇದು ದೇಶದ ಕಾನೂನಾಗಿದೆ ಎಂದು ಪ್ರತಿಪಾದಿಸಿದ್ದರು.

ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್‌ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *