ಪ್ರಾಚೀನ ಸಮಾಜವೂ ಆಧುನಿಕ ಚಹರೆಯೂ

ಹಾಸನದ ಪ್ರಕರಣವು ಭಾರತೀಯ ಸಮಾಜದ ಪ್ರಾಚೀನ ಲಕ್ಷಣಗಳನ್ನು ಸಾಬೀತುಪಡಿಸಿದೆ

– ನಾ ದಿವಾಕರ

 

ಇತಿಹಾಸದುದ್ದಕ್ಕೂ ಮಾನವ ಸಮಾಜದ ಬೆಳವಣಿಗೆಯನ್ನು ಗಮನಿಸಿದಾಗ ಅಲ್ಲಿ ಢಾಳಾಗಿ ನಮಗೆ ಕಾಣುವುದು ವಿವಿಧ ಸಮಾಜಗಳ ನಡುವಿನ ಸಂಘರ್ಷಗಳು ಹಾಗೂ ಈ ಸಮಾಜಗಳ ಒಳಗೆ ಘಟಿಸುವಂತಹ ಆಂತರಿಕ ಕಲಹಗಳು. ಯುದ್ಧ, ಹಿಂಸೆ, ಕ್ರೌರ್ಯ ಮತ್ತು ಯಜಮಾನಿಕೆಯ ದಬ್ಬಾಳಿಕೆ. ಈ ಎಲ್ಲ ಪ್ರಕ್ರಿಯೆಯಗಳಲ್ಲಿ ಸದಾಕಾಲವೂ ಹಲ್ಲೆಗೊಳಗಾಗಿರುವುದು, ಅಪಮಾನಿತರಾಗಿರುವುದು ಮಹಿಳಾ ಸಮೂಹ ಮತ್ತು ಸಮಾಜದ ಕೆಳಸ್ತರದ ಸಮುದಾಯಗಳು. ಆಧುನಿಕ ಯುಗದ ಯುದ್ಧ ಪರಂಪರೆಯೂ ಸಹ ಇದನ್ನೇ ಬಿಂಬಿಸುತ್ತದೆ. ರಾಷ್ಟ್ರೀಯತೆ ಅಥವಾ ಭೌಗೋಳಿಕ ವ್ಯಾಮೋಹಕ್ಕೊಳಗಾಗಿ, ಯುದ್ಧಗಳನ್ನು ವೈಭವೀಕರಿಸುವ ಮೇಲ್ಪದರದ ಸಮಾಜಗಳು (Elite socities) ಪಿತೃಪ್ರಧಾನ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವುದರಿಂದ ಅಲ್ಲಿ ನಲುಗಿಹೋಗುವ ಅಸಹಾಯಕ ಮಹಿಳಾ ಸಂಕುಲ ಹಾಗೂ ಶೋಷಿತ ಸಮುದಾಯಗಳು ಚರಿತ್ರೆಯ ಪುಟಗಳಲ್ಲಿ ಮರೆಯಾಗಿಹೋಗುತ್ತವೆ.

ಇದೇ ಚಾರಿತ್ರಿಕ ಪ್ರಮೇಯವನ್ನು ಆಧುನಿಕ ಜಗತ್ತಿಗೆ ಹೋಲಿಸಿ ನೋಡಿದಾಗ ಧರ್ಮದ್ವೇಷ ಮತ್ತು ಮತಸಂಘರ್ಷದ ಪ್ರಭಾವದಿಂದ ವಿವಿಧ ಸಮಾಜಗಳ ನಡುವೆ ನಡೆದಿರುವ ನೂರಾರು ಯುದ್ಧಗಳಲ್ಲಿ, ಕೋಮು ಸಂಘರ್ಷಗಳಲ್ಲಿ, ಮತೀಯ ಕಲಹಗಳಲ್ಲಿ ನಲುಗಿಹೋಗಿರುವ ಸಾವಿರಾರು ಮಹಿಳೆಯರು, ಶೋಷಿತರು ನಮಗೆ ಕಾಣುತ್ತಾರೆ.  ಸಂಘರ್ಷವಾದಿಗಳು ಹಾಗೂ ಗಲಭೆಕೋರರ ದೃಷ್ಟಿಯಲ್ಲಿ Soft Target ಆಗಿಯೇ ಕಾಣುವ ಮಹಿಳೆಯರು ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯಕ್ಕೊಳಗಾಗುವುದು ಚಾರಿತ್ರಿಕ ವಾಸ್ತವ. ಗುಜರಾತ್‌ ಗಲಭೆಯ ಒಂದು ಪ್ರತ್ಯಕ್ಷ ಸಾಕ್ಷಿ ಬಿಲ್ಕಿಸ್‌ ಬಾನೋ ರೂಪದಲ್ಲಿ ನಮ್ಮ ನಡುವೆ ಇದ್ದೇ ಇದೆ.  ಜಗತ್ತಿನಾದ್ಯಂತ ಹರಡಿರುವ ಮುಸ್ಲಿಂ ಭಯೋತ್ಪಾದಕ ಗುಂಪುಗಳು ಜಿಹಾದ್‌ ಅಥವಾ ಧರ್ಮಸಂಘರ್ಷದ ಹೆಸರಲ್ಲಿ ನಡೆಸುವ ಭೀಕರ ಯುದ್ಧಗಳಲ್ಲೂ ಮಹಿಳಾ ಸಮುದಾಯವೇ ಹೆಚ್ಚು ಬಲಿಯಾಗಿರುವುದನ್ನು ಚರಿತ್ರೆ ನಿರೂಪಿಸಿದೆ.

ವರ್ತಮಾನ ಸಮಾಜದ ಕರಾಳ ಚಹರೆ

ಆದರೆ ವರ್ತಮಾನ ಭಾರತದಲ್ಲಿ ಯುದ್ಧ, ಭಯೋತ್ಪಾದಕ ಕೃತ್ಯಗಳು, ಕೋಮು ಸಂಘರ್ಷದ ಹೊರತಾಗಿಯೂ ದಿನನಿತ್ಯ ಲಕ್ಷಾಂತರ ಮಹಿಳೆಯರು ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ತುತ್ತಾಗುತ್ತಿರುವುದು ಏನನ್ನು ಸೂಚಿಸುತ್ತದೆ ? ಯುದ್ಧ ಕಾಲದಲ್ಲಿ ನಡೆಯುವುದಕ್ಕಿಂತಲೂ ಭೀಕರವಾದ ಅತ್ಯಾಚಾರಗಳು ನಮ್ಮ ನಡುವೆ ಸಂಭವಿಸುತ್ತಲೇ ಇವೆ, ಅಪರಾಧಿಗಳು ಮುಕ್ತರಾಗಿಯೇ ಇದ್ದಾರೆ, ಸಂತ್ರಸ್ತೆಯರು ನ್ಯಾಯಕ್ಕಾಗಿ ಅಂಗಲಾಚುತ್ತಲೇ ಇದ್ದಾರೆ, ಇದು ಏನನ್ನು ಸೂಚಿಸುತ್ತದೆ. ಅಂದರೆ ಮಹಿಳಾ ದೌರ್ಜನ್ಯಗಳಿಗೆ ಯುದ್ಧ-ಕಲಹ-ಸಂಘರ್ಷಗಳು ಒಂದು ನೆಪ ಮಾತ್ರ . ಸಮಾಜದ ಮೇಲೆ ಯಜಮಾನಿಕೆ-ಪಾರಮ್ಯ ಸಾಧಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪುರುಷ ಸಮಾಜದ ಸಾರ್ವಕಾಲಿಕ ಹಪಹಪಿಯೇ ಮಹಿಳಾ ಸಂಕುಲಕ್ಕೆ ಅಪಾಯಕಾರಿಯಾಗಿ ಕಾಣುತ್ತದೆ. ಹಾಸನದಲ್ಲಿ ನಡೆದಿರುವ ಸಾಮೂಹಿಕ ಲೈಂಗಿಕ ದೌರ್ಜನ್ಯಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ದುರಂತ ಎಂದರೆ ಭಾರತದ ರಾಜಕಾರಣದಲ್ಲಿ ಮಹಿಳಾ ದೌರ್ಜನ್ಯಗಳೂ ಅಸ್ಮಿತೆಯ ಚೌಕಟ್ಟುಗಳಿಗೆ ಸಿಲುಕಿ ಸಂತ್ರಸ್ತೆಯರು ವಿಂಗಡಿಸಲ್ಪಡುತ್ತಿದ್ದಾರೆ. ಹಾಗಾಗಿಯೇ ಉನ್ನಾವೋ, ಗುಜರಾತ್‌, ನಿರ್ಭಯ, ಹಾಥ್ರಸ್‌, ಧಾನಮ್ಮ, ಸೌಜನ್ಯ, ಹಾಸನಗಳಲ್ಲಿ ಕಾಣದ ʼಜಿಹಾದ್‌ʼ ಅಥವಾ ಧರ್ಮಯುದ್ಧ ನೇಹಾ ಪ್ರಕರಣದಲ್ಲಿ ಕಾಣುತ್ತದೆ. ಬಿಜೆಪಿ ಸೃಷ್ಟಿಸಿರುವ ಹೊಸ ರಾಜಕೀಯ ಪರಿಭಾಷೆಯಲ್ಲಿ ಬಳಕೆಯಾಗುತ್ತಿರುವ ಲವ್‌ ಜಿಹಾದ್‌, ತುಕಡೆತುಕಡೆ ಗ್ಯಾಂಗ್‌, ಅರ್ಬನ್‌ ನಕ್ಸಲ್‌ ಮುಂತಾದ ಪದಗಳು ಅರ್ಥಹೀನವಾಗಿದ್ದರೂ ವಾಟ್ಸಾಪ್‌ ವಿದ್ವಾಂಸರು, ಮಾಧ್ಯಮ ಪಂಡಿತರು, ವಿದ್ಯುನ್ಮಾನ ಸುದ್ದಿಮನೆಗಳ ವಿದ್ವತ್‌ ವಲಯವು ಈ ಪದಗಳನ್ನೇ ಚರ್ಚೆಗಳ ಕೇಂದ್ರ ಬಿಂದುವಾಗಿ ಬಳಸುವುದರ ಪರಿಣಾಮ, ಹಾಸನದಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಈ ವ್ಯಾಖ್ಯಾನಗಳಿಗೆ ಒಳಪಡದೆ ಕೇವಲ ಅಧಿಕಾರ ರಾಜಕಾರಣದ ಹೊಲಸಿನಲ್ಲಿ ಚರ್ಚೆಗೊಳಗಾಗುತ್ತಿವೆ.

ಮೂಲತಃ, ಊಳಿಗಮಾನ್ಯ ಸಮಾಜದ ಪಾಳೆಗಾರಿಕೆಯ ಅವಶೇಷಗಳನ್ನು ಇನ್ನೂ ಕಾಪಾಡಿಕೊಂಡಿರುವ ಒಂದು ಪಿತೃಪ್ರಧಾನ ಸಮಾಜ ಹೇಗೆ ಒಂದು ಸಮಾಜವನ್ನು ನಿರ್ಬಂಧಿಸಿ ನಿಯಂತ್ರಿಸುತ್ತದೆ ಎನ್ನುವುದನ್ನು ಹಾಸನದ ಪ್ರಕರಣಗಳು ನಿರೂಪಿಸಿವೆ. ಇಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರನ್ನು ಅತೃಪ್ತರು-ಆಕಾಂಕ್ಷಿತರು-ಆಮಿಷಕ್ಕೊಳಗಾದವರು ಎಂದು ವಿಂಗಡಿಸುವ ಅಗತ್ಯವಿಲ್ಲ. ರಾಜಕೀಯ ಅಧಿಕಾರ, ಸಾಮಾಜಿಕ ಪಾಳೆಗಾರಿಕೆ, ಆರ್ಥಿಕ ಯಜಮಾನಿಕೆ ಹಾಗೂ ಅಧಿಕಾರಶಾಹಿಯ ಆಡಳಿತ ದರ್ಪ ಇವೆಲ್ಲವುಗಳ ಸಮೀಕರಣವನ್ನು ಹಾಸನದ ಪ್ರಕರಣಗಳಲ್ಲಿ ಗುರುತಿಸಬಹುದು. ಪ್ರಜಾಪ್ರಭುತ್ವದಲ್ಲೂ ಸಹ ಆಡಳಿತಶಾಹಿಯು ತನ್ನ ಪಾರಂಪರಿಕ ಊಳಿಗಮಾನ್ಯ ಲಕ್ಷಣಗಳನ್ನು ಪೋಷಿಸಿಕೊಂಡು ಬಂದಿರುವ ಭಾರತದ ರಾಜಕೀಯ ವ್ಯವಸ್ಥೆಯು ಈ ರೀತಿಯ ಸ್ಥಳೀಯ ಪಾಳೆಗಾರಿಕೆಯನ್ನೂ ಸಹ ವಿವಿಧ ರೂಪಗಳಲ್ಲಿ ಕಾಪಾಡಿಕೊಂಡೇ ಬಂದಿದೆ.  ಇದರ ಒಂದು ಆಯಾಮವನ್ನು ಹಾಸನದ ಪ್ರಕರಣಗಳಲ್ಲಿ ಗುರುತಿಸಬಹುದು.

ಇದನ್ನು ಓದಿ : ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಬಳಸದಂತೆ ತಡೆಯಾಜ್ಞೆ

ದೌರ್ಜನ್ಯದ ಸಾಮಾಜಿಕ ನೆಲೆಗಳು

ಹಾಸನದ ಸಾಮೂಹಿಕ ಲೈಂಗಿಕ ದೌರ್ಜನ್ಯಗಳನ್ನು ಭಿನ್ನ ನೆಲೆಯಲ್ಲಿ ನೋಡಿದಾಗ ಆಡಳಿತಶಾಹಿಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು, ಸ್ವಹಿತಾಸಕ್ತಿಗಳಿಗಾಗಿ, ಸ್ವೇಚ್ಛಾಚಾರದಲ್ಲಿ ತೊಡಗಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಹಾಗೆಯೇ ಸಮಾಜದ ದುರ್ಬಲ ವರ್ಗಗಳ ಮೇಲೆ, ಅಸಹಾಯಕರ ವಿರುದ್ಧ ಮತ್ತು ಅಮಾಯಕ ಶ್ರೀಸಾಮಾನ್ಯರ ವಿರುದ್ಧ ಒಂದು ಬಲಿಷ್ಠ ಸಾಮಾಜಿಕ ವ್ಯವಸ್ಥೆ ಪಾಳೆಗಾರಿಕೆಯ ಯಜಮಾನಿಕೆಯನ್ನು ಸ್ಥಾಪಿಸಿದರೆ , ತಳಮಟ್ಟದ ಸಮಾಜದಲ್ಲಿ ಎಂತಹ ವಿಕೃತಿಗಳು ಸಂಭವಿಸಬಹುದು ಎನ್ನುವುದಕ್ಕೂ ಈ ಪ್ರಕರಣಗಳು ಸಾಕ್ಷಿಯಾಗಿವೆ. ಈ ಯಜಮಾನಿಕೆಯನ್ನು ಪ್ರೋತ್ಸಾಹಿಸುವ ಮೇಲ್ಪದರ ಸಮಾಜವೊಂದಿದೆ ಹಾಗೆಯೇ ರಕ್ಷಿಸುವ ಅಧಿಕಾರಶಾಹಿಯೂ ಕ್ರಿಯಾಶೀಲವಾಗಿದೆ. ಇಂತಹ ಹೇಯ ಕೃತ್ಯಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ರಾಜಕೀಯ ಶಕ್ತಿಗಳೂ ಇವೆ. ಯಾರನ್ನು, ಯಾವುದನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ?

ವಿಪರ್ಯಾಸ ಎಂದರೆ ಈ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಾಮುದಾಯಿಕ ಅಥವಾ ಸಾಮಾಜಿಕ ವಿಕೃತಿಯಾಗಿ ನೋಡದೆ, ವ್ಯಕ್ತಿಗತ ನೆಲೆಯಲ್ಲಿ ನೋಡುವ ಮೂಲಕ ಕಲಿತ ವರ್ಗದ ಒಂದು ಭಾಗವೂ ಸಹ ಸಂತ್ರಸ್ತರು-ಸಂತ್ರಸ್ತರಲ್ಲದವರು ಎಂದು ವಿಂಗಡಿಸುತ್ತಿದೆ. ಇಲ್ಲಿ ನಮ್ಮನ್ನು ಹಲವು ಜಿಜ್ಞಾಸೆಗಳು ಕಾಡುತ್ತವೆ.  ನೂರಾರು ಅಸಹಾಯಕ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳು ಯಾರಿಂದ ನಡೆದಿವೆ ? ಇದು ಯಾರಿಂದ-ಹೇಗೆ-ಏತಕ್ಕಾಗಿ ಬಯಲಾಯಿತು ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಕಾಡಬೇಕಿರುವುದು, ಈ ದೌರ್ಜನ್ಯಗಳನ್ನು ಸಹಿಸಿಕೊಳ್ಳುವಂತಹ ಒಂದು ಕಲಿತ ಸಮಾಜ ನಮ್ಮ ನಡುವೆ ಇರುವುದು. ಈ ಪ್ರಕರಣದಲ್ಲಿ ದಾಳಿಗೊಳಗಾಗಿರುವ ಮಹಿಳೆಯರೆಲ್ಲರೂ ಸಂತ್ರಸ್ತರು ಎನ್ನಲಾಗುವುದಿಲ್ಲ ಎಂಬ ಚರ್ಚಾರ್ಹ ಅಭಿಪ್ರಾಯಗಳ ನಡುವೆಯೇ, ಸ್ವಪ್ರೇರಣೆಯಿಂದ ಲೈಂಗಿಕ ಸಂಪರ್ಕಕ್ಕೆ ಸಮ್ಮತಿಸುವ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂತ್ರಸ್ತರೆನ್ನಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸಹ ಮುಂದಿಡಲಾಗುತ್ತದೆ.

ಪಿತೃಪ್ರಧಾನ ಯಜಮಾನಿಕೆ ಹಾಗೂ ಊಳಿಗಮಾನ್ಯ ಸಾಮಾಜಿಕ ಮನಸ್ಥಿತಿಯಲ್ಲೇ ಕಾರ್ಯನಿರ್ವಹಿಸುವ ಭಾರತದ ಅಧಿಕಾರ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಈ ಪ್ರಶ್ನೆಯೇ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ಹೊಲಗದ್ದೆಗಳಿಂದ ಉನ್ನತಾಧಿಕಾರದ ಚೇಂಬರುಗಳವರೆಗೂ, ಕೆಲಸದ ಸ್ಥಳಗಳಲ್ಲಾಗಲೀ, ಅಧಿಕಾರ ಕೇಂದ್ರಗಳಲ್ಲಾಗಲೀ ಸಾಮಾನ್ಯ ಮಹಿಳೆ ತನ್ನ ಉನ್ನತ ಸ್ಥಾನಮಾನಗಳ ಹೊರತಾಗಿಯೂ, ಸ್ಥಾಪಿತ ವ್ಯವಸ್ಥೆಗೆ ಅಧೀನಳಾಗಿಯೇ ಇರುವ ಪರಿಸ್ಥಿತಿ ನಮ್ಮಲ್ಲಿದೆ. ಈ ವ್ಯವಸ್ಥೆಯನ್ನು ಅಥವಾ ಇದರ ವಾರಸುದಾರರನ್ನು ಧಿಕ್ಕರಿಸುವ, ವಿರೋಧಿಸುವ ಅಥವಾ ಆಜ್ಞೆಯನ್ನು ಉಲ್ಲಂಘಿಸುವ ಯಾವುದೇ ನಡೆಗೆ ಮಹಿಳೆ ಅಪಾರ ಬೆಲೆ ತೆರಬೇಕಾಗುತ್ತದೆ. ಇದು ಗ್ರಾಮಪಂಚಾಯತ್‌ನಿಂದ ಬ್ಯಾಂಕಿಂಗ್‌ ಕ್ಷೇತ್ರದವರೆಗೂ, ಸಾಫ್ಟ್‌ವೇರ್‌ ಉದ್ದಿಮೆಯಲ್ಲೂ ಕಾಣಬಹುದಾದ ವಾಸ್ತವ. ಮೂಲತಃ ಹಾಸನದ ಪ್ರಕರಣದಲ್ಲಿ ನಮಗೆ ಕಾಣಿಸಬೇಕಾದ್ದು ವ್ಯಕ್ತಿಗತ ಸಂತ್ರಸ್ತೆಯರಲ್ಲ ಅಥವಾ ವೈಯುಕ್ತಿಕ ಅಪರಾಧವೂ ಅಲ್ಲ. ಇಲ್ಲಿ ಕಾಣಬೇಕಾಗಿರುವುದು ನಮ್ಮ ಸಮಾಜದೊಳಗಿನ ಭೌತಿಕ ಮಾಲಿನ್ಯ, ಬೌದ್ಧಿಕ ತ್ಯಾಜ್ಯ ಹಾಗೂ ಸಾಂಸ್ಕೃತಿಕ ವ್ಯಸನ.

ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ಜಿಹಾದಿ ಪಿತೂರಿಯನ್ನು ಗುರುತಿಸುವ ಬಿಜೆಪಿ ನಾಯಕರಿಗೆ ಹಾಸನದಲ್ಲಿ ಕೇವಲ ರಾಜಕೀಯ ಮೇಲಾಟ ಕಾಣುವುದು ಈ ಸಾಂಸ್ಕೃತಿಕ ವ್ಯಸನದ ಸಂಕೇತವಾಗಿದೆ. ಹಲ್ಲೆ/ದಾಳಿಗಳೊಗಾದ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ತಾನೇ ವ್ಯಾಖ್ಯಾನಿಸಿಕೊಂಡು ನ್ಯಾಯ ವ್ಯವಸ್ಥೆಯ ಮುಂದೆ ಅಂಗಲಾಚಲಾಗುತ್ತದೆಯೇ ? ತಾನು ಒಳಗಾದ ಪುರುಷಾಹಮಿಕೆಯ ವಿಕೃತಿಗೆ ಕಾರಣಗಳನ್ನು ತನ್ನೊಳಗೇ ಕಂಡುಕೊಳ್ಳುವಂತೆ ನೊಂದ ಮಹಿಳೆಯನ್ನು ಕೇಳುವುದು ಉಚಿತವೇ ? ದೌರ್ಜನ್ಯಕ್ಕೊಳಗಾದ ಮಹಿಳೆಯ ಸ್ವಪ್ರೇರಣೆ ಅಥವಾ ಸಮ್ಮತಿ, ಪುರುಷ ಸಮಾಜದ ಯಜಮಾನಿಕೆಯ ದರ್ಪ ದಬ್ಬಾಳಿಕೆಗಳನ್ನು ಮಾಫಿ ಮಾಡಿಬಿಡುತ್ತದೆಯೇ ? ತಮ್ಮನ್ನು ಆವರಿಸುವ ಅಸಹಾಯಕತೆಯಿಂದ ಬಾಯ್ಬಿಡಲಾಗದೆ, ಮೌನವಾಗಿ ಪುರುಷವಿಕೃತಿಯನ್ನು ಸಹಿಸಿಕೊಳ್ಳುವ ಅಸಂಖ್ಯಾತ ಅಸಹಾಯಕ ಮಹಿಳೆಯರ ಪಾಡೇನು ? ಸಾಂಸ್ಥಿಕವಾಗಿ ಅಥವಾ ಸಾಂಘಿಕವಾಗಿ ಭಾರತೀಯ ಸಮಾಜದಲ್ಲಿ ಹೀಗೆ ತನ್ನ ಅಂತರಂಗದ ನೋವು-ಅಳಲನ್ನು ತೋಡಿಕೊಳ್ಳಲು ಸಾಮಾನ್ಯ ಮಹಿಳೆಗೆ ಅವಕಾಶಗಳನ್ನು ನಾವು ಕಲ್ಪಿಸಿದ್ದೇವೆಯೇ ?

ಪಿತೃಪ್ರಧಾನ ಪುರುಷಾಧಿಪತ್ಯ

ಪಿತೃಪ್ರಧಾನ ಮೌಲ್ಯಗಳನ್ನು ಉಳಿಸಿಕೊಂಡಿರುವ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ವಲಯಗಳಲ್ಲೂ ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಇದು ಕೇವಲ ರಾಜಕೀಯ ಅಥವಾ ಪಕ್ಷ ರಾಜಕಾರಣದ ಪ್ರಶ್ನೆಯಲ್ಲ. ಅಥವಾ ಯಾವುದೋ ನಿರ್ದಿಷ್ಟ ಮತದ, ಧಾರ್ಮಿಕತೆಯ, ಜಾತಿಯ ಅಥವಾ ಸೈದ್ಧಾಂತಿಕ ಚಿಂತನಾವಾಹಿನಿಯ ಪ್ರಶ್ನೆಯೂ ಅಲ್ಲ. ಸಾಮಾಜಿಕ ಪ್ರಾಬಲ್ಯ ಮತ್ತು ಆರ್ಥಿಕ ಮೇಲಂತಸ್ತಿನ ಆಳ್ವಿಕೆಗೆ/ನಿಯಂತ್ರಣಕ್ಕೆ ಒಳಪಟ್ಟಿರುವ ಎಲ್ಲ ಸಾಂಸ್ಥಿಕ-ಸಾಂಘಿಕ ನೆಲೆಗಳಲ್ಲೂ ಈ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಎದುರಿಸಬೇಕಿದೆ. ಒಂದು ಆರೋಗ್ಯಕರ ಸಮಾಜದ ಜವಾಬ್ದಾರಿ ಇಲ್ಲಿದೆ. ಕಳೆದ ಮೂರು ದಶಕಗಳ ಅಧಿಕಾರ ರಾಜಕಾರಣದಲ್ಲಿ ಭಾರತದ ಮೇಲ್ಪದರ ಸಮಾಜ (Elite society) ಮನುಜ-ಲಿಂಗ ಸೂಕ್ಷ್ಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರ ಪರಿಣಾಮ ಸಮಾಜದ ಕೆಳಸ್ತರಕ್ಕೂ ವಿಸ್ತರಿಸಿರುವ ಸಾಮಾಜಿಕ ನಿಷ್ಕ್ರಿಯತೆ-ನಿರ್ಲಿಪ್ತತೆ-ನಿರ್ಭಾವುಕತೆಯನ್ನು ಗಂಭೀರವಾಗಿ ಮರುವಿಮರ್ಶೆ ಮಾಡಬೇಕಿದೆ.

ಸಾಮಾಜಿಕ-ವಿದ್ಯುನ್ಮಾನ ಮಾಧ್ಯಮಗಳನ್ನು ಗಾಢವಾಗಿ ಆವರಿಸಿರುವ ಈ ನಿರ್ಭಾವುಕತೆಯೇ ಮಹಿಳಾ ದೌರ್ಜನ್ಯಗಳನ್ನು “ಸಾಮಾನ್ಯ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು” ಎಂದು ಪರಿಗಣಿಸುವಂತೆ ಮಾಡಿವೆ. ಹಾಸನದ ಲೈಂಗಿಕ ದೌರ್ಜನ್ಯಗಳ ದೃಶ್ಯಗಳನ್ನು ಸಾವಿರಾರು ಪೆನ್‌ ಡ್ರೈವ್‌ಗಳ ಮೂಲಕ, ಸಾಮಾಜಿಕ ತಾಣಗಳ ಮೀಮ್ಸ್‌, ರೀಲ್ಸ್‌ಗಳ ಮೂಲಕ ಹಂಚುವ ಒಂದು ನೀಚ ಸಮಾಜವೂ ನಮ್ಮ ನಡುವೆ ಇರುವುದು ನಮ್ಮನ್ನು ಕಾಡಬೇಕಲ್ಲವೇ ? ಈ Lumpen ಸಮಾಜವನ್ನು ಸೃಷ್ಟಿಸಿ, ಪೋಷಿಸಿ , ಬೆಳೆಸುವ ಅಧಿಕಾರ ರಾಜಕಾರಣಕ್ಕೆ ಏನನ್ನೋಣ ? ಮತ್ತೊಂದೆಡೆ ವಿದ್ಯುನ್ಮಾನ ಮಾಧ್ಯಮಗಳಿಗೆ ಈ ಪ್ರಕರಣದ ರೋಚಕತೆಯೇ ಮುಖ್ಯವಾಗಿ ಟಿಆರ್‌ಪಿ ಗಳಿಕೆಯ ಅಸ್ತ್ರವಾಗುವುದು ಮಹಿಳಾ ಸಂಕುಲಕ್ಕೆ ಅಪಮಾನ ಮಾಡಿದಂತಾಗುವುದಿಲ್ಲವೇ ? ಯಾವುದೇ ವಾಹಿನಿಯಲ್ಲಾದರೂ ಲಿಂಗ ಸೂಕ್ಷ್ಮತೆಯ ನೆಲೆಯಲ್ಲಿ, ಈ ಸಾಮೂಹಿಕ ಲೈಂಗಿಕ ದೌರ್ಜನ್ಯಗಳನ್ನು ಮಹಿಳಾ ಸಂಕುಲದ ಮೇಲೇ ನಡೆದಿರುವ ದುರಾಕ್ರಮಣ ಎಂದು ಚರ್ಚೆ ಮಾಡಲಾಗಿದೆಯೇ ? ಇಲ್ಲ ಎಂದಾದರೆ ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?

ಅತ್ಯಾಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು, ಸಾಧನಗಳು ಇರುವ ಹೊತ್ತಿನಲ್ಲೇ ಇಂತಹ ದುರಾಚಾರಗಳಿಗೆ ಆಸ್ಪದ ನೀಡುವ ಸಮಾಜವೊಂದು, ಇದಾವುದೂ ಇಲ್ಲದಿದ್ದ ಕಾಲದಲ್ಲಿ ಹೇಗಿದ್ದಿರಬಹುದು ? ಒಂದು ಕ್ಷಣ ಊಹಿಸಿಕೊಳ್ಳೋಣವೇ ? ಮಾನವನ ಅತಿರೇಕದ ಕಾಮತೃಷೆಯ ನಿದರ್ಶನವಾಗಿರುವ ಹಾಸನದ ಸಾಮೂಹಿಕ ಲೈಂಗಿಕ ದೌರ್ಜನ್ಯಗಳನ್ನು “ಪೆನ್‌ ಡ್ರೈವ್‌ ಹಗರಣ” ಎಂದು ಬಣ್ಣಿಸುವುದೇ ಅತಾರ್ಕಿಕ. ಸಮಾಜದೊಳಗೆ ಹುದುಗಿದ್ದ ಅಮೇಧ್ಯವನ್ನು ಹೊರಹಾಕಲು ಈ ತಂತ್ರಜ್ಞಾನ ಅಥವಾ ಪೆನ್‌ಡ್ರೈವ್‌ ಎಂಬ ಸಂವಹನ ಸಾಧನ ನೆರವಾಗಿದೆ. ಮನುಜ-ಲಿಂಗ ಸೂಕ್ಷ್ಮತೆಯಿಲ್ಲದ ಸಮಾಜವೊಂದು ಇಂತಹ ಅವಿಷ್ಕಾರಗಳನ್ನೂ ಹೇಗೆ ತನ್ನ ಲಾಭಕ್ಕಾಗಿ ದುರ್ಬಳಕೆ ಮಾಡುತ್ತದೆ ಎಂದು ಈ ಹಗರಣ ನಿರೂಪಿಸಿದೆ. ಮೂರು ದಶಕಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೀಡಾದ ರಾಜಸ್ಥಾನದ ಮಹಿಳೆ ಭಾವರಿದೇವಿ ಇಂದಿಗೂ ನ್ಯಾಯಕ್ಕಾಗಿ ಅಂಗಲಾಚುತ್ತಿರುವುದನ್ನು ನೋಡಿದಾಗ, ಹಾಸನದ ಪ್ರಕರಣಗಳ ನ್ಯಾಯಾರ್ಜನೆ ಆಶಾಭಾವನೆಯನ್ನೇನೂ ಮೂಡಿಸುವುದಿಲ್ಲ. ಅಧಿಕಾರಶಾಹಿ-ಆಡಳಿತಶಾಹಿಯ ಭದ್ರ ಕವಚಗಳು ನೂರಾರು ನೊಂದ ಮಹಿಳೆಯರ ಆಕ್ರಂದನವನ್ನೂ ನಿಶ್ಶಬ್ದಗೊಳಿಸಿಬಿಡುತ್ತವೆ. ಆ ಕ್ಷಮತೆಯನ್ನು ಭಾರತದ ರಾಜಕೀಯ-ಸಾಮಾಜಿಕ ವ್ಯವಸ್ಥೆ ರೂಢಿಸಿಕೊಂಡಿದೆ.

ಆಧುನಿಕತೆ ಹಾಗೂ ಆರ್ಥಿಕ ಅಭಿವೃದ್ಧಿಯ ಫಲಾನುಭವಿ ಸಮಾಜವು ತನ್ನ ಬೌದ್ಧಿಕ ದಾರಿದ್ರ್ಯವನ್ನು ತೊಳೆದುಕೊಂಡು, ಸ್ವಚ್ಚವಾಗುವುದು ವರ್ತಮಾನ ಭಾರತದ ಅವಶ್ಯಕತೆಯಾಗಿದೆ. ಹಾಗಾದಾಗ ಮಾತ್ರ ಈ ಸಮಾಜದಿಂದ ಪೋಷಿಸಲ್ಪಡುವ ಮಾಧ್ಯಮ ವಲಯ ಮತ್ತು ಸಂರಕ್ಷಿಸಲ್ಪಡುವ ಸಾಮಾಜಿಕ ತಾಣಗಳು ತಮ್ಮ ಸ್ವಂತಿಕೆಯನ್ನು ಗುರುತಿಸಿಕೊಂಡು, ಪಿತೃಪ್ರಧಾನ ಯಜಮಾನಿಕೆಯ ಹಿಡಿತದಿಂದ ಹೊರಬರಲು ಸಾಧ್ಯ. ದುರಂತ ಎಂದರೆ ಆಧುನಿಕತೆಯ ಫಲಾನುಭವಿ ಸಮಾಜದ ಮಿದುಳು ಹೆಪ್ಪುಗಟ್ಟಿದೆ. ಮನುಜ ಸೂಕ್ಷ್ಮತೆಯೇ ಇಲ್ಲದ ರಾಜಕೀಯ ವ್ಯವಸ್ಥೆ , ಲಿಂಗ ಸೂಕ್ಷ್ಮತೆಯಿಲ್ಲದ ಸಮಾಜ ಮತ್ತು ಜೀವಪರ ಸಂವೇದನೆಯೇ ಇಲ್ಲದ ಸಾಂಸ್ಕೃತಿಕ ಜಗತ್ತಿನ ನಡುವೆ ಹಾಸನದ ಸಾಮೂಹಿಕ ಲೈಂಗಿಕ ದೌರ್ಜನ್ಯಗಳು ನಮ್ಮನ್ನು ಕಾಡುತ್ತಿದೆ. ಇಲ್ಲಿ ಪುರುಷ ಸಮಾಜದಲ್ಲಷ್ಟೇ ಅಲ್ಲದೆ  ಮುಂದುವರೆದ ವಿಶಾಲ ಸಮಾಜದಲ್ಲೂ ಇರುವ ಸಾಮಾಜಿಕ ವಿಕೃತಿಗಳ ವಿರುದ್ಧ ನಾವು ಹೋರಾಡಬೇಕಿದೆ. ಆಗ ಮಾತ್ರ ನಮಗೆ ದೌರ್ಜನ್ಯಗಳಿಗೊಳಗಾದ ಮಹಿಳೆಯರ ಮಡುಗಟ್ಟಿದ ನೋವು  ಕಾಣಲು ಸಾಧ್ಯ.

ಅಳಿಸಿಹೋಗಬೇಕಿರುವುದು ಪ್ರಾಚೀನ ಪಿತೃಪ್ರಧಾನ ಸಮಾಜ.  ವಿಮೋಚನೆಗೊಳಗಾಗಬೇಕಿರುವುದು ಮಹಿಳಾ ಸಂಕುಲದ ಅಸ್ಮಿತೆ, ಘನತೆ, ಗೌರವ.

ಇದನ್ನು ನೋಡಿ : ಬಳ್ಳಾರಿ ಲೋಕಸಭೆ : ಶ್ರೀರಾಮಲು ರಾಜಕೀಯ ಜೀವನ ಅಂತ್ಯವಾಗುತ್ತಾ?Janashakthi Media

Donate Janashakthi Media

Leave a Reply

Your email address will not be published. Required fields are marked *