ಹಾಸನ: ಜಾನುವಾರು ಖರೀದಿ ಮತ್ತು ವ್ಯಾಪಾರ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಹಾಸನ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳೇ ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಿರುವ ರೈತರು, ಡಿಸಿ ಕಚೇರಿಗೆ ದನಗಳೊಂದಿಗೆ ತೆರಳಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಾತನಾಡಿರುವ ರೈತರು, “ಎಲ್ಲೆಡೆ ರೈತರಿಗೆ ತೊಂದರೆ ಆಗುತ್ತಿದೆ. ಜಾನುವಾರು ವ್ಯಾಪಾರ ನಡೆಯುತ್ತಿಲ್ಲ. ನಮ್ಮ ದನಗಳನ್ನು ಮಾರಲು ಆಗದಿದ್ದರೆ ಬೀಜ ಖರೀದಿ, ಉಳುಮೆ ಸೇರಿದಂತೆ ಕೃಷಿ ಕೆಲಸಗಳನ್ನು ಹೇಗೆ ನಡೆಸುವುದು?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ವಿತರಣೆಗೆ ಖಾಸಗಿ ದಾರಿ: ಟಾಟಾ ಪವರ್ ಅರ್ಜಿ
“ನಮಗೆ ₹50 ಸಾವಿರ ಪರಿಹಾರ ಕೊಡಿ ಅಥವಾ ನಮ್ಮ ಜಾನುವಾರುಗಳನ್ನು ಖರೀದಿಸಿ. ನಾವು ಬೆಳೆ ಬೆಳೆಸಬೇಕು, ಜೀವನ ಸಾಗಿಸಬೇಕು. ಜಾನುವಾರುಗಳನ್ನು ತೆಗೆದುಕೊಳ್ಳದೇ ಹೋದರೆ ನಮ್ಮ ಬದುಕು ಹೇಗೆ?” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರು ರೈತರು, “ಪಶ್ಚಿಮ ಬಂಗಾಳದಲ್ಲಿ ನಡೆದಂತೆಯೇ ಇಲ್ಲಿ ಕೂಡ ರೈತರಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಜಾನುವಾರುಗಳನ್ನು ತೆಗೆದುಕೊಂಡು ಡಿಸಿ ಕಚೇರಿಗೆ ತೆರಳುವ ಬಗ್ಗೆ ಚರ್ಚೆ ನಡೆದಿದ್ದು, ಈ ಸಂಬಂಧ ಅನುಮತಿ ಪಡೆಯುವ ವಿಚಾರವೂ ಪ್ರಸ್ತಾಪವಾಗಿದೆ.
ಇದೇ ವೇಳೆ, ರೈತ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸುವ ಕುರಿತು ಕೂಡ ಮಾತುಕತೆ ನಡೆದಿರುವುದು ವಿಡಿಯೊದಲ್ಲಿ ಕೇಳಿಬಂದಿದೆ. “11 ಗಂಟೆಗೆ ಪ್ರತಿಭಟನೆಗೆ ಸೇರೋಣ” ಎಂದು ಕೆಲವರು ಕರೆ ನೀಡಿರುವ ದೃಶ್ಯಗಳು ವೈರಲ್ ಆಗಿವೆ.
ಇದನ್ನೂ ನೋಡಿ: ಹಾಸ್ಟೆಲ್ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media
