ಪಶ್ಚಿಮ ಬಂಗಾಳದ ಫಲ್ತಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆ ರಾಜಕೀಯ ಉದ್ವಿಗ್ನತೆಯ ನಡುವೆ ನಡೆಯುತ್ತಿದ್ದು, ಹಲವು ವರ್ಷಗಳಿಂದ ಭಯ ಮತ್ತು ಹಿಂಸಾಚಾರದ ವಾತಾವರಣದಲ್ಲಿ ಬದುಕಿದ್ದ ಜನರು ಈ ಬಾರಿ ಸ್ವತಂತ್ರವಾಗಿ ಮತ ಚಲಾಯಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಪಶ್ಚಿಮ
ಫಲ್ತಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ನಡೆದ ಮತದಾನ ವೇಳೆ ಇವಿಎಂ ತಿರುಚಾಟ, ಬೂತ್ ವಶಪಡಿಸಿಕೊಳ್ಳುವಿಕೆ ಹಾಗೂ ಮತದಾರರಿಗೆ ಬೆದರಿಕೆ ಹಾಕಿದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮೇ 21ರಂದು ಮರುಮತದಾನ ನಡೆಸಲು ಆದೇಶಿಸಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದ ಹಲವು ಚುನಾವಣೆಗಳಲ್ಲಿ ವಿರೋಧ ಪಕ್ಷದ ಬೆಂಬಲಿಗರಿಗೆ ಮತಗಟ್ಟೆಗಳಿಗೆ ತೆರಳಲು ಅವಕಾಶವೇ ಇರಲಿಲ್ಲ. ಅನೇಕ ಗ್ರಾಮಗಳಲ್ಲಿ ಸಿಪಿಐ(ಎಂ) ಸೇರಿದಂತೆ ವಿರೋಧ ಪಕ್ಷಗಳ ಪ್ರಚಾರಕ್ಕೂ ನಿರ್ಬಂಧವಿತ್ತು ಎಂದು ಜನರು ಆರೋಪಿಸಿದ್ದಾರೆ. ಈಗ ಪರಿಸ್ಥಿತಿ ಬದಲಾಗುತ್ತಿರುವ ಸೂಚನೆ ಕಂಡುಬರುತ್ತಿದ್ದರೂ, ಹೊಸ ರೀತಿಯ ರಾಜಕೀಯ ಧ್ರುವೀಕರಣ ಮತ್ತು ಬೆದರಿಕೆಗಳ ಆತಂಕ ಜನರಲ್ಲಿ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಕೊಲ್ಕತ್ತಾ| ‘ಬಿಡಲು ಬಯಸುವವರು ಹೋಗಲಿ’: ಟಿಎಂಸಿ ನಾಯಕರಿಗೆ ಮಮತಾ ಕರೆ
ಚಾಂಡೀಗಢ, ಗೋಪಾಲಪುರ, ಹರಿಣ್ಡಾಂಗಾ ಸೇರಿದಂತೆ ಹಲವು ಮುಸ್ಲಿಂ ಬಹುಸಂಖ್ಯಾತ ಗ್ರಾಮಗಳಲ್ಲಿ ತೃಣಮೂಲ ಕಾಂಗ್ರೆಸ್ನ ಪ್ರಭಾವ ಕುಸಿದ ಬಳಿಕ ಕೇಸರಿ ಧ್ವಜಗಳು ಕಾಣಿಸಿಕೊಳ್ಳತೊಡಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. “ಹಳೆಯ ಭಯ ಕಡಿಮೆಯಾಗಿದೆ, ಆದರೆ ಹೊಸ ಭಯ ಶುರುವಾಗಿದೆ” ಎಂದು ಕೆಲವು ಮಹಿಳೆಯರು ಆತಂಕ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಸಿಪಿಐ(ಎಂ) ಅಭ್ಯರ್ಥಿ ಶಂಭು ಕುರ್ಮಿ ಮಾತನಾಡಿ, ಫಲ್ತಾದ ಜನರ ಪ್ರಮುಖ ಬೇಡಿಕೆ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸುವುದಾಗಿದೆ ಎಂದಿದ್ದಾರೆ. ಉದ್ಯೋಗ ಕೊರತೆ, ಕಾರ್ಖಾನೆಗಳ ಮುಚ್ಚುವಿಕೆ ಹಾಗೂ ಸ್ಥಳೀಯ ಅಭಿವೃದ್ಧಿಯ ಅಭಾವವೂ ಚುನಾವಣೆಯ ಪ್ರಮುಖ ವಿಷಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಈ ನಡುವೆ, ಫಲ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ಮತ್ತು ಬೆದರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಕೆಲವು ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಮಹಿಳೆಯರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಫಲ್ತಾ ಉಪಚುನಾವಣೆ ಈಗ ಕೇವಲ ಒಂದು ಕ್ಷೇತ್ರದ ಮತದಾನವಲ್ಲ, ಪಶ್ಚಿಮ ಬಂಗಾಳದ ರಾಜಕೀಯ ಬದಲಾವಣೆ ಮತ್ತು ಗ್ರಾಮೀಣ ಜನರ ಪ್ರಜಾಪ್ರಭುತ್ವ ಹಕ್ಕುಗಳ ಕುರಿತ ದೊಡ್ಡ ಚರ್ಚೆಯ ಕೇಂದ್ರವಾಗುತ್ತಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 172 | ‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ | ಎನ್ ಕೆ. ವಸಂತರಾಜ್
