ಮಡಿಕೇರಿ: ಕಳೆದ 2024ರ ಲೋಕಸಭಾ ಚುನಾವಣೆಯಲ್ಲೂ ಮತ ಕಳವು ನಡೆದಿದೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಕೊಡಗು- ಮೈಸೂರು ಕ್ಷೇತ್ರದಲ್ಲಿ ಮತ ಕಳ್ಳತನವಾಗಿರುವ ಬಗ್ಗೆ ಸ್ವತಃ ತಾನೇ ನಡೆಸಿದ ಅಧ್ಯಯನದ ವರದಿಯನ್ನು ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರಿಗೂ ವರದಿ ನೀಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಲಕ್ಷ ಮತದಾರರಿದ್ದು, 8 ವಿಧಾನಸಭಾ ಕ್ಷೇತ್ರಗಳಿವೆ. 2,202 ಬೂತ್ಗಳಿದ್ದು, 292 ಮತಗಟ್ಟೆಗಳಲ್ಲಿ ಇವಿಎಂ ರಿಗ್ಗಿಂಗ್ ನಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಧರ್ಮಸ್ಥಳ| ಅಜಿತ್ ಹನುಮಕ್ಕನವರ್ ವಿರುದ್ಧ 7 ಎಫ್ಐಆರ್ ದಾಖಲು
ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ1,45,616 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ 27,522 ಹಾಗೂ ಬಿಜೆಪಿಗೆ 1,18,094 ಮತ ಬಂದಿವೆ. 2018, 2023ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಶೇ.40ಕ್ಕಿಂತ ಹೆಚ್ಚು ಮತಗಳು ಬಂದಿದ್ದವು.
ಆದರೆ, 2024ರ ಚುನಾವಣೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಮತಗಳು ಮಾತ್ರ ಬಂದಿರುವುದು ಮತ ಕಳವು ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಗ್ರಾಮವೊಂದರ ಬೂತ್ನಲ್ಲಿ 750 ಮತ ಚಲಾವಣೆಯಾಗಿದ್ದು, 15 ಮನೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಕನಿಷ್ಠ 50 ಮತಗಳಾದರೂ ಬರಬೇಕಿತ್ತು. ಆದರೆ ಬಂದಿದ್ದು 7 ಮತ ಮಾತ್ರ.
ನರಸಿಂಹರಾಜ ಕ್ಷೇತ್ರದ ಶಾಂತಿನಗರದಲ್ಲಿ ಒಂದೇ ಸಮುದಾಯ ಮಾತ್ರ ಇದೆ. 700 ಮತಗಳಲ್ಲಿ 500 ಕಾಂಗ್ರೆಸ್ಗೆ ಮತ್ತು ಬಿಜೆಪಿಗೆ 200 ಮತ ಸಿಕ್ಕಿವೆ. ಇಲ್ಲಿ ಬಿಜೆಪಿಗೆ ಒಂದೇ ಒಂದೂ ವೋಟು ಸಿಗುವ ಅವಕಾಶ ಇಲ್ಲ. ಜತೆಗೆ 700 ಮತದಾರರಿದ್ದರೂ 750 ಮತಗಳು ಚಲಾವಣೆಯಾಗಿವೆ. ಇವೆಲ್ಲವೂ ಮತ ಕಳವು ಆಗಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದರು.
ಯಾವ ಬೂತ್ಗಳಲ್ಲಿ ಯಾವ ಯಾವ ಮತ ದಾರರಿದ್ದಾರೆ ಎಂದು ಅಧ್ಯಯನ ಮಾಡಲಾಗಿದೆ. ಶೇ.40 ರಿಂದ ಶೇ.50ರಷ್ಟು ಕಾಂಗ್ರೆಸ್ ಪಕ್ಷದ ಮತಗಳು ಬರಬೇಕಿತ್ತು. ಆದರೆ ಕೆಲವು ಬೂತ್ಗಳಲ್ಲಿ ಶೇ.20ಕ್ಕಿಂತ ಕಡಿಮೆ ಬಂದಿದೆ. ಇದರಿಂದಾಗಿ ಮತ ಕಳ್ಳತನವಾಗಿರುವುದು ಸ್ಪಷ್ಟವಾಗಿದೆ. ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದರು ಇಂತಹ ಕಳುವಾದ ಮತಗಳಿಂದಲೇ ಗೆಲುವು ಕಂಡಿದ್ದಾರೆ ಎಂದರು.
ದಾಖಲೆ ಕೊಡಲಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನವಾಗಿದ್ದರೆ ಬಿಜೆಪಿಯವರು ದಾಖಲೆ ಸಮೇತ ದೂರು ನೀಡಲಿ. ಸುಖಾ ಸುಮ್ಮನೆ ದಾಖಲೆ ಇಲ್ಲದೆ ಆರೋಪ ಮಾಡುವುದು ಬಿಜೆಪಿಯ ಅಜೆಂಡಾ. ಬಿಜೆಪಿಯ ಕೈಗೊಂಬೆಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಆಪಾದಿಸಿದರು.
ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಅಧಿಕಾರ ದರ್ಪ, ಹಣದ ಅಹಂಕಾರ ಕೊನೆಯಾಗಲಿ Janashakthi Media
