ಸಿಜೆಪಿ ಪ್ರತಿಭಟನೆ ವೇಳೆ 17 ಮೆಟ್ರೋ ನಿಲ್ದಾಣ ಬಂದ್; ಕೇಂದ್ರ ಸರ್ಕಾರ, ಪೊಲೀಸರಿಂದ ಉತ್ತರ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಜುಲೈನಲ್ಲಿ ನಡೆದ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆಗಳ ಸಂದರ್ಭದಲ್ಲಿ ದೆಹಲಿಯ 17 ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ್ದ ಕ್ರಮದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ದೆಹಲಿ ಪೊಲೀಸ್, ದೆಹಲಿ ಮೆಟ್ರೋ ರೈಲು ನಿಗಮ (DMRC) ಮತ್ತು ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ಸಿಜೆಪಿ 

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಯಾವ ಕಾನೂನುಬದ್ಧ ಅಧಿಕಾರವಿದೆ ಎಂಬ ಪ್ರಶ್ನೆಯನ್ನು ಅರ್ಜಿ ಎತ್ತಿದೆ.

ಅರ್ಜಿದಾರರ ಪರ ವಕೀಲರು, ಮೆಟ್ರೋ ರೈಲ್ವೇಸ್ ಕಾಯ್ದೆಯಲ್ಲಿ ಮೆಟ್ರೋ ನಿಲ್ದಾಣಗಳನ್ನು ಈ ರೀತಿಯಲ್ಲಿ ಮುಚ್ಚುವ ಸ್ಪಷ್ಟ ಅವಕಾಶವಿಲ್ಲ ಎಂದು ವಾದಿಸಿದರು. ಅಲ್ಲದೆ, ನಿಲ್ದಾಣಗಳನ್ನು ಮುಚ್ಚುವ ಕುರಿತು ಯಾವುದೇ ಔಪಚಾರಿಕ ಆದೇಶ ಹೊರಡಿಸದೆ, ಸಾಮಾಜಿಕ ಜಾಲತಾಣ ‘ಎಕ್ಸ್‌’ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಪೊಲೀಸರಿಗೆ ಪ್ರತಿಭಟನೆ ಹಾಗೂ ಸಂಚಾರವನ್ನು ನಿಯಂತ್ರಿಸುವ ಅಧಿಕಾರವಿದ್ದರೂ, ಸಾರ್ವಜನಿಕ ಉಪಯುಕ್ತ ಸೇವೆಯಾದ ಮೆಟ್ರೋವನ್ನು ಬಂದ್ ಮಾಡುವಂತೆ ನಿರ್ದೇಶಿಸಲು ಅಧಿಕಾರವಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಸಂದರ್ಭಗಳಿಗೆ ನಿರ್ದಿಷ್ಟ ಪ್ರಮಾಣಿತ ಕಾರ್ಯವಿಧಾನ (SOP) ಅಗತ್ಯವಿದೆ ಎಂಬ ವಾದವನ್ನೂ ಅವರು ಮುಂದಿಟ್ಟರು. ಸಿಜೆಪಿ

ಇದನ್ನೂ ಓದಿ : ಹೊಸ ಗಣಿ ಕಾನೂನಿಗೆ ವಿರೋಧ: ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ಆರೋಪ

ಆದರೆ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ಕಾನೂನು ಮತ್ತು ಸುವ್ಯವಸ್ಥೆಯ ವಿಷಯಗಳಲ್ಲಿ ನ್ಯಾಯಾಲಯಗಳು ಸಾಮಾನ್ಯವಾಗಿ ಕಾರ್ಯಾಂಗದ ನಿರ್ಧಾರಗಳಿಗೆ ಮಿತವಾದ ಹಸ್ತಕ್ಷೇಪ ಮಾಡುತ್ತವೆ ಎಂದು ಹೇಳಿದರು. ಕಾರ್ಯಾಂಗದ ವಿವೇಚನಾಧಿಕಾರವನ್ನು ಅತಿಯಾದ ಅಥವಾ ಅಸಮರ್ಪಕ ರೀತಿಯಲ್ಲಿ ಬಳಸಿದರೆ ಮಾತ್ರ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿದೆ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು.

ಜುಲೈನಲ್ಲಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಮಂಡಿ ಹೌಸ್, ಐಟಿಒ, ದೆಹಲಿ ಗೇಟ್, ಇಂದ್ರಪ್ರಸ್ಥ, ಖಾನ್ ಮಾರ್ಕೆಟ್, ಜೋರ್‌ಬಾಗ್, ಶಿವಾಜಿ ಸ್ಟೇಡಿಯಂ ಸೇರಿದಂತೆ ಒಟ್ಟು 17 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಮಧ್ಯ ದೆಹಲಿಯ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬಿದ್ದು, ಪ್ರಯಾಣಿಕರು ಹೆಚ್ಚು ಸಮಯ ಹಾಗೂ ಹೆಚ್ಚುವರಿ ವೆಚ್ಚದ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಯಿತು. ಸಿಜೆಪಿ

ಇದನ್ನೂ ನೋಡಿ : SIR | ಚುನಾವಣಾ ಆಯೋಗದ ಎಡವಟ್ಟು – ಮತದಾರರಿಗೆ ಆಪತ್ತು! Janashakthi Media

Donate Janashakthi Media

Leave a Reply

Your email address will not be published. Required fields are marked *