ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ

ನೌಕರರು ಮಾನಸಿಕ ಒತ್ತಡದ ನಿವಾರಣೆಗಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಸಲಹೆ

ಗದಗ ಫೆ. 6: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ, ಆರೋಗ್ಯವೇ ಭಾಗ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಥಿತಿಯಲ್ಲಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಸರ್ಕಾರಿ ನೌಕರರು ಪ್ರತಿ ದಿನ ಕೆಲಸದ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿಯಿದ್ದು ಅದನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿರ್ವಹಿಸಲು ದೈಹಿಕ ಸದೃಢತೆ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಬಿ. ಸಂಕನೂರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು 2020-21 ಕಾರ್ಯಕ್ರಮವನ್ನು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸರ್ಕಾರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ಇರುವ ನೌಕರರೇ ಎಲ್ಲ ಕೆಲಸಗಳನ್ನು ನಿಭಾಯಿಸುವ ಪರಿಸ್ಥಿತಿ ಇದ್ದು ಒಬ್ಬ ನೌಕರ ನಾಲ್ಕು ಜನರ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಸಾಮಾನ್ಯವಾಗಿ ನೌಕರನು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಈ ಒತ್ತಡ ನಿವಾರಣೆಗಾಗಿ ಪ್ರತಿ ದಿನ ಕನಿಷ್ಟ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಸದೃಢ ದೈಹಿಕ ಆರೋಗ್ಯದೊಂದಿಗೆ ಮಾನಸಿಕವಾಗಿ ಬಲಿಷ್ಟರಾಗಲು ಸಹಕಾರಿಯಾಗಿದೆ.

ನೌಕರರು ವೃತ್ತಿ ಕಾರ್ಯನಿರ್ವಹಿಸುವುದರೊಂದಿಗೆ ಕೌಟುಂಬಿಕವಾಗಿ ಮಕ್ಕಳ ಲಾಲನೆ ಪಾಲನೆ ಮಾಡುವುದರ ಕಡೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ವಿದ್ಯಾಭ್ಯಾಸ ಒದಗಿಸುವದರಲ್ಲಿಯೂ ಗಮನ ಹರಿಸಬೇಕು. ನಿಮ್ಮ ಮಕ್ಕಳನ್ನು ಕುಟುಂಬದೊಂದಿಗೆ  ದೇಶದ ಆಸ್ತಿಯನ್ನಾಗಿಸಲು ಕರೆ ನೀಡಿದರು. ಒಂದು ಸರ್ಕಾರಕ್ಕೆ ಉತ್ತಮ ರೀತಿಯ ಹೆಸರು ತರಲು ನೌಕರರ ಶ್ರಮ ಅಪಾರವಾಗಿರುತ್ತದೆ. ಅಂತಹ ನೌಕರರು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಸರ್ಕಾರಕ್ಕೆ ಉತ್ತಮ ಹೆಸರು ತರುವಲ್ಲಿ ಕಾರಣೀಭೂತರಾಗಬೇಕು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಮಾತನಾಡಿ ನಮ್ಮ ನೌಕರರಿಗೆ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಾಮಥ್ರ್ಯ ಇದ್ದು ಇದರೊಂದಿಗೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‍ಬಾಬು ಮಾತನಾಡಿ ನೌಕರರ ಕ್ರೀಡಾಕೂಟವು ನೌಕರರಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಹೊರಹೊಮ್ಮಲಿದೆ. ನೌಕರರುಈ ಕ್ರೀಡಾಕೂಟದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕೆಂದು ತಿಳಿಸಿದರು. ಕ್ರೀಡಾಕೂಟಗಳಿಂದ ನೌಕರರಲ್ಲಿ ಮುಂದಾಳುತ್ವ ಹಾಗೂ ಸಹಕರಿಸಿಕೊಂಡು ಹೋಗುವ ಮನೋಭವನೆ ಮೂಡುತ್ತದೆ. ಸ್ಪರ್ದೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು ನೌಕರರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ  ನೌಕರರು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರವ್ಯಾಪಿ ಕರೋನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದ್ದು ರಕ್ತದ ಅಗತ್ಯತೆ ಈ ಮೊದಲಿನಷ್ಟೇ ಇರುತ್ತದೆ. ನೌಕರರು ರಕ್ತದಾನ ಮಾಡುವ ಮೂಲಕ ಆಗುವ ಜೀವ ಹಾನಿಯನ್ನು ತಡೆಯಲು ಮುಂದಾಗಬೇಕು.

ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ್ ಮಾತನಾಡಿ ನೌಕರರು ಮಾನವೀಯತೆಯ ಮೇಲೆ ಅನೇಕ ಸೇವಾ ಮನೋಭಾವದ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ರಕ್ತದಾನ ಮಾಡಲೂ ಸಹ ಮುಂದಾಗೋಣ. ಇದರಿಂದ ಇನ್ನೊಂದು ಜೀವ ಉಳಿಸಿದಂತಾಗುತ್ತದೆ.  ರಕ್ತದಾನದ ಮೂಲಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ ಎನ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್. ಅಣ್ಣಿಗೇರಿ,  ಕೋಶಾದ್ಯಕ್ಷ ಸತೀಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಕೆ.ಎಫ್. ಹಳ್ಯಾಳ, ಕ್ರೀಡಾ ಕಾರ್ಯದರ್ಶಿ ವೈ.ಕೆ. ಚೌಡಾಪುರ, ತಾಲೂಕು ಘಟಕಗಳ ಅಧ್ಯಕ್ಷರಾದ ಆನಂದ್ ಬಣಪ್ಪನವರ, ಜಗದೀಶ ಮಡಿವಾಳರ, ಡಾ. ಬಸವರಾಜ ಬಳ್ಳಾರಿ, ಎಸ್.ಕೆ.ಪಾಟೀಲ, ಡಿ.ಎಚ್.ಪಾಟೀಲ, ಡಾ. ಎಂ.ಎ. ಹಾದಿಮನಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಿನಗಾ, ಕ.ಸಾ.ಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ, ಕೋಶಾಧ್ಯಕ್ಷ ಎ.ಕೆ.ವಂಟಿ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನೌಕರರು ಹಾಜರಿದ್ದರು.

 ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *