ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಜುಲೈ 31ರಂದು ಸಂಭವಿಸಿದ ಅನುಮಾನಾಸ್ಪದ ಗುಂಡಿನ ದಾಳಿಯಲ್ಲಿ ಉತ್ತರ ಪ್ರದೇಶ ಮತ್ತು ಛತ್ತೀಸ್ಗಢ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆಯ ವೇಳೆ ಕುಲ್ಗಾಂ ಜಿಲ್ಲೆಯ ಕೆಲ್ಲಂ ಗ್ರಾಮದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರ ಮೇಲೆ ಅಪರಿಚಿತ ಗುಂಡುಗಾರರು ಗುಂಡು ಹಾರಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಗಾಯಗೊಂಡಿದ್ದ ಇಬ್ಬರನ್ನು ತಕ್ಷಣವೇ ಅನಂತನಾಗ್ ಪಟ್ಟಣದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ವಿಶೇಷ ಚಿಕಿತ್ಸೆಗಾಗಿ ಸಾಗಿಸಲಾಯಿತು. ಆದರೆ ವೈದ್ಯರ ಪ್ರಯತ್ನಗಳ ನಡುವೆಯೂ, ಛತ್ತೀಸ್ಗಢದ ದೀಪಕ್ ಮತ್ತು ಉತ್ತರ ಪ್ರದೇಶದ ಭೂಪಿಂದರ್ ಎಂದು ಗುರುತಿಸಲ್ಪಟ್ಟ ಈ ಇಬ್ಬರು ಕಾರ್ಮಿಕರು ಗಂಭೀರ ಗಾಯಗಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: 45 ಲಕ್ಷ ಹೆಸರುಗಳು ಕೈಬಿಟ್ಟ ಈಸಿಐ
ಈ ಘಟನೆ ಬಳಿಕ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು, ದಾಳಿ ನಡೆಸಿದವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಈ ಕುರಿತು ಇನ್ನಷ್ಟು ವಿವರಗಳು ನಿರೀಕ್ಷೆಯಲ್ಲಿವೆ.
ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಅನಂತನಾಗ್ ಪಟ್ಟಣದಲ್ಲಿ ಯಾತ್ರಾ ಕರ್ತವ್ಯದಲ್ಲಿದ್ದ ಜೆ&ಕೆ ಸಶಸ್ತ್ರ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಶಿಕ್ ಹುಸೈನ್ ಕುರೇಶಿ ಅವರನ್ನು ಅಪರಿಚಿತ ಗುಂಡುಗಾರರು ಹತ್ಯೆ ಮಾಡಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸಂಚಾರ ಮಾರ್ಗಗಳು ಮತ್ತು ಹೊರರಾಜ್ಯದ ಕಾರ್ಮಿಕರ ಕೆಲಸದ ಸ್ಥಳಗಳ ಸುತ್ತ ಹೆಚ್ಚುವರಿ ಭದ್ರತಾ ನಿಗಾವಹಿಸುತ್ತಿವೆ.
ದಾಳಿಕೋರರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಆರ್ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ನೋಡಿ: ಆರ್ಚರ್ ಮೀನು: ನೀರಿನ ಬಾಣ ಬಿಟ್ಟು ಬೇಟೆಯಾಡುವ ಗುರಿಕಾರ Janashakthi Media
