ಬೆಂಗಳೂರು: ಜನಗಣತಿ ಕಾರ್ಯದಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರ್ಗಾವಣೆಯನ್ನು 2027ರ ಮಾರ್ಚ್ 31ರವರೆಗೆ ತಡೆಹಿಡಿಯುವ ಕುರಿತು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಜನಗಣತಿ
೨೦೨೭ರ ಜನಗಣತಿಯ ಎರಡನೇ ಹಂತದ ಜನಸಂಖ್ಯೆ ಲೆಕ್ಕಪತ್ರ ಕಾರ್ಯದಲ್ಲಿ ರಾಜ್ಯದ ಸುಮಾರು ಒಂದು ಲಕ್ಷ ಐವತ್ತು ಸಾವಿರ ಸರ್ಕಾರಿ ನೌಕರರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಜನಗಣತಿ ಕಾರ್ಯದಲ್ಲಿ ನಿರಂತರತೆ ಕಾಪಾಡಲು ಸಿಬ್ಬಂದಿ ವರ್ಗಾವಣೆಗೆ ತಾತ್ಕಾಲಿಕ ತಡೆ ವಿಧಿಸುವ ಸಾಧ್ಯತೆ ಇದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಜನಗಣತಿ ಸಿಬ್ಬಂದಿಯ ವಿವರಗಳನ್ನು ಸರ್ಕಾರ ಸಂಗ್ರಹಿಸುತ್ತಿದ್ದು, ಈ ಕುರಿತು ಅಂತಿಮ ಆದೇಶ ಮುಂದಿನ ವಾರ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, “ಜನಗಣತಿ ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈಗ ರಾಜ್ಯ ಸರ್ಕಾರದ ಅಂತಿಮ ಆದೇಶಕ್ಕಾಗಿ ನೌಕರರು ಕಾಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗೃಹಕಾರ್ಮಿಕರ ಕಲ್ಯಾಣ ಮಸೂದೆ ಕುರಿತು ಸಚಿವ ಸಂಪುಟ ಚರ್ಚೆ | ದೂರು ಪರಿಹಾರ ಸಮಿತಿ ರಚನೆಗೆ ಸರ್ಕಾರ ಚಿಂತನೆ
ಮೇ 20ರಂದು ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳು, ಮಹಾನಗರ ಆಯುಕ್ತರು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು, ತರಬೇತಿ ಪಡೆದ ಮತ್ತು ನಿಯೋಜಿತ ಜನಗಣತಿ ಸಿಬ್ಬಂದಿಯ ವಿವರಗಳನ್ನು ಮೇ 23ರೊಳಗೆ ಸಲ್ಲಿಸುವಂತೆ ಸೂಚಿಸಿದೆ.
ಕರ್ನಾಟಕದಲ್ಲಿ ಜನಗಣತಿಯ ಮೊದಲ ಹಂತದ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ನೋಂದಣಿ ಪ್ರಕ್ರಿಯೆ ನಡೆದಿದ್ದು, ಏಪ್ರಿಲ್ ೧೬ರಿಂದ ಮೇ ೧೫ರವರೆಗೆ ಮನೆಪಟ್ಟಿ ಹಾಗೂ ವಸತಿ ಗಣತಿ ಕಾರ್ಯ ಕೈಗೊಳ್ಳಲಾಗಿತ್ತು.
