ಆರ್ಟ್ ಆಫ್ ಲಿವಿಂಗ್‌ ವಿರುದ್ಧ ಭೂ ಒತ್ತುವರಿ ಆರೋಪ: ತನಿಖೆಗೆ ಎಸ್‌ಐಟಿ ರಚಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ ನಡೆದಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಶ್ರೀ ಶ್ರೀ ರವಿಶಂಕರ್‌ ಅವರ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ, ಅದರ ಅಂಗಸಂಸ್ಥೆಗಳು ಹಾಗೂ ಇತರ ವ್ಯಕ್ತಿಗಳ ವಿರುದ್ಧದ ಆರೋಪಗಳನ್ನು ಈ ಎಸ್‌ಐಟಿ ಪರಿಶೀಲಿಸಲಿದೆ.

ರಾಜ್ಯ ಸರ್ಕಾರದ ಕಂದಾಯ ಇಲಾಖೆ ಜುಲೈ 17ರಂದು ಹೊರಡಿಸಿರುವ ಆದೇಶದಂತೆ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಂಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ. ಹಿರಿಯ ಕಂದಾಯ ಅಧಿಕಾರಿಗಳು, ಭೂ ದಾಖಲೆ ವಿಭಾಗದ ಅಧಿಕಾರಿಗಳು, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೇರಿದಂತೆ ಹಲವು ಸದಸ್ಯರು ತಂಡದಲ್ಲಿದ್ದಾರೆ. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದೆ.

ಸರ್ಕಾರದ ಆದೇಶದ ಪ್ರಕಾರ, 2025ರ ಅಕ್ಟೋಬರ್‌ನಲ್ಲಿ ಸಹಾಯಕ ಭೂ ದಾಖಲೆ ನಿರ್ದೇಶಕರು ನಡೆಸಿದ ಸಮೀಕ್ಷೆಯಲ್ಲಿ, ಆರ್ಟ್ ಆಫ್ ಲಿವಿಂಗ್‌ನ ಟ್ರಸ್ಟಿಗಳು ಹಾಗೂ ಇತರರು ಸೇರಿ 290 ಎಕರೆಗಿಂತ ಹೆಚ್ಚು ಸರ್ಕಾರಿ ಗೋಮಾಳ ಭೂಮಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅತಿಕ್ರಮಿಸಿರುವ ಸಾಧ್ಯತೆ ಇದೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ. ಭೂ ಮಂಜೂರಾತಿ ದಾಖಲೆಗಳಲ್ಲಿ ಅಕ್ರಮ, ಅನುಮಾನಾಸ್ಪದ ದಾಖಲೆಗಳ ಬಳಕೆ ಹಾಗೂ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿ ಬಳಕೆಯಾಗಿದೆ ಎಂಬ ಆರೋಪಗಳೂ ದಾಖಲಾಗಿವೆ.

ಇದನ್ನೂ ಓದಿ : ಟಿಎಂಸಿ ಬಂಡಾಯ ಸಂಸದರು ಎನ್‌ಡಿಎ ಸೇರ್ಪಡೆಗೆ? ಮುಂದಿನ ವಾರದಿಂದ ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆ!

ಎಸ್‌ಐಟಿ ಭೂ ಮಂಜೂರಾತಿ ದಾಖಲೆಗಳು, ಮೂಲ ಫಲಾನುಭವಿಗಳು ಮತ್ತು ಅವರ ಕಾನೂನುಬದ್ಧ ವಾರಸುದಾರರ ವಿವರಗಳು, ನಕಲಿ ದಾಖಲೆಗಳ ಬಳಕೆ, ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳು, ಉಪಗ್ರಹ ಚಿತ್ರಗಳ ಮೂಲಕ ಪರಿಸರ ಹಾನಿ, ರಾಜಕಾಲುವೆ ಮತ್ತು ಸಾರ್ವಜನಿಕ ಭೂಮಿಯ ಸ್ಥಿತಿ ಸೇರಿದಂತೆ ಎಲ್ಲ ಆಯಾಮಗಳನ್ನು ಪರಿಶೀಲಿಸಲಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿ ಮಾಡಿ ಹೇಳಿಕೆ ದಾಖಲಿಸಬಹುದಾಗಿದೆ.

ಈ ತನಿಖೆಯಲ್ಲಿ ಕಗ್ಗಲಿಪುರ ಗ್ರಾಮದ ಸರ್ವೇ ನಂ. 46 ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭೂ ವ್ಯವಹಾರಗಳು, ವೇದ ವಿಜ್ಞಾನ ಮಹಾವಿದ್ಯಾಪೀಠ, ಸುಮೇರು ಗ್ಲೋಬಲ್ ಸಪೋರ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಸುಮೇರು ರಿಯಾಲ್ಟಿ ಹಾಗೂ ಸಂಬಂಧಿತ ಸಂಸ್ಥೆಗಳ ಪಾತ್ರವೂ ಪರಿಶೀಲನೆಗೆ ಒಳಪಡಲಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನಗಳನ್ನೂ ಸರ್ಕಾರ ಉಲ್ಲೇಖಿಸಿದೆ.

ಇನ್ನೊಂದೆಡೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸತ್ಯಾಂಶ ಹೊರಬರಲೆಂದು ಎಸ್‌ಐಟಿ ತನಿಖೆಯನ್ನು ಸಂಸ್ಥೆ ಸ್ವಾಗತಿಸಿರುವುದಾಗಿ ತಿಳಿಸಿದೆ.

ಇದನ್ನೂ ನೋಡಿ : ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್‌ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *