ಎಣ್ಣೆಬೀಜ ರೈತರಿಗೆ AI ನೆರವು: ವಾಟ್ಸಾಪ್ ಆಧಾರಿತ ‘ಕಿಸಾನ್ ಮಿತ್ರ’ ಸೇವೆ ಆರಂಭಿಸಿದ ICAR

ನವದೆಹಲಿ: ಎಣ್ಣೆಬೀಜ ಬೆಳೆ ಬೆಳೆಸುವ ರೈತರಿಗೆ ಸಮಯೋಚಿತ ಹಾಗೂ ಸಂಶೋಧನಾ ಆಧಾರಿತ ಸಲಹೆಗಳನ್ನು ಬಹುಭಾಷೆಗಳಲ್ಲಿ ನೀಡಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) AI ಆಧಾರಿತ ವಾಟ್ಸಾಪ್ ಸಾಧನವನ್ನು ಆರಂಭಿಸಿದೆ.

ಮಳೆಗಾಲದ ಖರೀಫ್ ಹಂಗಾಮಿಗೆ ದೇಶ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ, ಕಡಿಮೆ ಮಳೆಯ ಮುನ್ಸೂಚನೆಗಳು ಮತ್ತು ತಿನಿಸೆಣ್ಣೆ ಆಮದು ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರದ ಹೊಸ ಪ್ರಯತ್ನಗಳ ನಡುವೆ ಈ ಉಪಕ್ರಮವನ್ನು ಆರಂಭಿಸಲಾಗಿದೆ.

‘ಆಯಿಲ್‌ಸೀಡ್ಸ್ ಕಿಸಾನ್ ಮಿತ್ರ’ ಎಂಬ ಈ ಸೇವೆಯನ್ನು ಹೈದರಾಬಾದ್‌ನ ICAR-ಭಾರತೀಯ ಎಣ್ಣೆಬೀಜ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ವಾಟ್ಸಾಪ್ ಆಧಾರಿತ ಸೇವೆಯಾಗಿದ್ದು, ಬಹುಭಾಷಾ ಚಾಟ್‌ಬಾಟ್ ಮೂಲಕ ಸಂಶೋಧನಾ ಆಧಾರಿತ ಮಾಹಿತಿಯನ್ನು ನೇರವಾಗಿ ರೈತರ ಮೊಬೈಲ್‌ಗಳಿಗೆ ತಲುಪಿಸುತ್ತದೆ. ಇದರಿಂದ ರೈತರು ತಮಗೆ ತಿಳಿದಿರುವ ಭಾಷೆಯಲ್ಲೇ ಸಲಹೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: AIADMKಗೆ ದೊಡ್ಡ ಹೊಡೆತ: ಮಾಜಿ ಸಚಿವ ಪಿ. ಬೆಂಜಮಿನ್ ಸೇರಿ ಹಲವು ನಾಯಕರು ಡಿಎಂಕೆ ಸೇರ್ಪಡೆ

ದೇಶೀಯ ಬಳಕೆಯನ್ನು ಪೂರೈಸಲು ಭಾರತವು ತಿನಿಸೆಣ್ಣೆ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಒಟ್ಟು ಬಳಕೆಯಲ್ಲಿ ಸುಮಾರು 55-60 ಶೇಕಡಾ ಭಾಗ ಆಮದುಗಳ ಮೂಲಕವೇ ಪೂರೈಸಲಾಗುತ್ತಿದೆ.

ಪ್ರಸ್ತುತ ಭಾರತವು ಸುಮಾರು 12.2 ಮಿಲಿಯನ್ ಟನ್ ತಿನಿಸೆಣ್ಣೆ ಉತ್ಪಾದಿಸುತ್ತಿದ್ದು, ಸುಮಾರು 16 ಮಿಲಿಯನ್ ಟನ್ ಅನ್ನು ₹1.32 ಲಕ್ಷ ಕೋಟಿ ವೆಚ್ಚದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇದರಿಂದ ತಿನಿಸೆಣ್ಣೆ ಆಮದುಗಳು ಚಿನ್ನ ಹಾಗೂ ತೈಲ-ವಾಯು ಇಂಧನಗಳ ನಂತರ ದೇಶದ ಆಮದು ವೆಚ್ಚದಲ್ಲಿ ಪ್ರಮುಖ ಸ್ಥಾನದಲ್ಲಿವೆ.

ಈ ಉಪಕ್ರಮದ ಮೂಲಕ ದೇಶದಾದ್ಯಂತದ ಎಣ್ಣೆಬೀಜ ರೈತರು ಯಾವುದೇ ಹೆಚ್ಚುವರಿ ಆಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲದೆ, ಈಗಾಗಲೇ ಪರಿಚಿತವಾಗಿರುವ ವಾಟ್ಸಾಪ್ ವೇದಿಕೆಯ ಮೂಲಕ ಉಚಿತ, ವಿಶ್ವಾಸಾರ್ಹ ಹಾಗೂ ತಕ್ಷಣದ ಬೆಳೆ ಸಲಹೆಗಳನ್ನು ಪಡೆಯಬಹುದು.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಪ್ರಕಟಣೆಯ ಪ್ರಕಾರ, ರೈತರು +91 4024598180 ಸಂಖ್ಯೆಯನ್ನು ತಮ್ಮ ವಾಟ್ಸಾಪ್‌ನಲ್ಲಿ ‘Oilseeds Kisaan Mitra’ ಎಂದು ಉಳಿಸಿಕೊಂಡು, ಶೇಂಗಾ, ಸಾಸಿವೆ, ಎಳ್ಳು, ಸೂರ್ಯಕಾಂತಿ, ಸೋಯಾಬಿನ್, ನೈಜರ್ ಸೇರಿದಂತೆ ಇತರ ಎಣ್ಣೆಬೀಜ ಬೆಳೆಗಳ ಕುರಿತು ಯಾವುದೇ ಭಾರತೀಯ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಬಹುದು.

AI ಆಧಾರಿತ ಚಾಟ್‌ಬಾಟ್ ತಕ್ಷಣವೇ ಬೀಜ ಆಯ್ಕೆ, ಬೆಳೆ ನಿರ್ವಹಣೆ, ಕೀಟ ಮತ್ತು ರೋಗ ನಿಯಂತ್ರಣ, ನೀರಾವರಿ ಹಾಗೂ ಕೊಯ್ಲಿನ ನಂತರದ ಕ್ರಮಗಳ ಬಗ್ಗೆ ಸಂಶೋಧನಾ ಆಧಾರಿತ ಮಾರ್ಗದರ್ಶನವನ್ನು ನೀಡುತ್ತದೆ. ಈ ಸೇವೆ ವಾರದ ಏಳು ದಿನಗಳು, ದಿನಕ್ಕೆ 24 ಗಂಟೆಗಳ ಕಾಲ ಉಚಿತವಾಗಿ ಲಭ್ಯವಿದೆ.

ICAR-ಭಾರತೀಯ ಎಣ್ಣೆಬೀಜ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಆರ್.ಕೆ. ಮಥೂರ್ ಅವರು, ‘ಕಿಸಾನ್ ಮಿತ್ರ’ ಸೇವೆಯ ಮೂಲಕ ICARನ ಎಣ್ಣೆಬೀಜ ಸಂಶೋಧನೆಯನ್ನು ದೇಶದ ಪ್ರತಿಯೊಬ್ಬ ರೈತನಿಗೂ ಅವರದೇ ಭಾಷೆಯಲ್ಲಿ, ಅವರು ಈಗಾಗಲೇ ಬಳಸುತ್ತಿರುವ ವೇದಿಕೆಯಲ್ಲಿ ತಲುಪಿಸಿರುವುದು ಇದೇ ಮೊದಲ ಬಾರಿಗೆ ಎಂದು ತಿಳಿಸಿದ್ದಾರೆ.

“ವಿವಿಧ ICAR ಸಂಸ್ಥೆಗಳ ವೈಜ್ಞಾನಿಕ ಜ್ಞಾನವನ್ನು ವಾಟ್ಸಾಪ್‌ನ ಬಹುಭಾಷಾ AI ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮೂಲಕ, ಪ್ರಯೋಗಾಲಯದಿಂದ ರೈತರ ಹೊಲವರೆಗೆ ಇರುವ ದೂರ, ಭಾಷಾ ಅಡೆತಡೆ ಮತ್ತು ವೆಚ್ಚದ ಅಂತರಗಳನ್ನು ನಿವಾರಿಸಿದ್ದೇವೆ,” ಎಂದು ಅವರು ಹೇಳಿದರು.

ಇದೇ ವೇಳೆ, “ಖರೀಫ್ ಬಿತ್ತನೆ ಆರಂಭವಾಗುತ್ತಿರುವ ಹಿನ್ನೆಲೆ, ಎಲ್ಲಾ ಎಣ್ಣೆಬೀಜ ರೈತರು ಮತ್ತು ಸಂಬಂಧಿತರು ‘ಕಿಸಾನ್ ಮಿತ್ರ’ ಸೇವೆಯನ್ನು ಉಳಿಸಿಕೊಂಡು ತಮ್ಮ ಪ್ರಶ್ನೆಗಳಿಗೆ 24/7 ಬಳಸಿಕೊಳ್ಳುವಂತೆ ನಾವು ಪ್ರೋತ್ಸಾಹಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *