ನೀಟ್ ಹಗರಣ: ವಿದ್ಯಾರ್ಥಿ ಚಳವಳಿ ತೀವ್ರ, ಸಚಿವರ ರಾಜೀನಾಮೆಗೆ ಒತ್ತಾಯ

ಬೆಂಗಳೂರು: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತಿಳಿಸಿದರು. ನೀಟ್

ದೇಶದ ಯುವಜನರು ಕೇಳುತ್ತಿರುವುದಾದರೂ ಏನನ್ನು? 21 ಮಕ್ಕಳನ್ನು ಬಲಿತೆಗೆದುಕೊಂಡ ಈ ಹಗರಣಕ್ಕೆ ಕಾರಣಕರ್ತರು ಯಾರು? ಅವರಿಗೆ ಶಿಕ್ಷೆಯಾಗಲಿ. ಮುಂದೆಂದೂ ಇಂಥ ಹಗರಣಗಳು ನಡೆಯದಿರಲಿ. ತಮ್ಮ ಮೂಗಿನ ಅಡಿಯಲ್ಲಿ ಇಂಥ ಹತ್ಯಾಕಾಂಡಕ್ಕೆ ಸಮನಾದ ಹಗರಣ ನಡೆಯಲು ಬಿಟ್ಟು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ ಎಂಬುದು ಅವರ ಮುಖ್ಯ ಬೇಡಿಕೆ ಎಂದರು.

ಆದರೆ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇಡೀ ದೇಶಕ್ಕೆ ಅರ್ಥವಾಗುತ್ತಿರುವುದು ಮೋದಿಯವರ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಯಕಶ್ಚಿಃತ್ ಒಬ್ಬ ಮಂತ್ರಿಯ ರಾಜೀನಾಮೆ ಪಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಧರ್ಮೇಂಧ್ರ ಪ್ರಧಾನ್ ಅಷ್ಟು ದೊಡ್ಡ ವ್ಯಕ್ತಿಯೇ? ಪ್ರಭಾವಶಾಲಿಯೇ? ಒಬ್ಬನ ರಾಜಕೀಯ ಭವಿಷ್ಯಕ್ಕಾಗಿ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಾಶಪಡಿಸಬೇಕಾ? ಸಣ್ಣ ಮಕ್ಕಳೂ ಈಗ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ: ನೀಟ್‌ ಹಗರಣ: ಕ್ಲೀನ್‌ಚಿಟ್‌ ಸತ್ಯವನ್ನು ಮುಚ್ಚಿಹಾಕಿದೆಯೇ?

ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸರ್ಕಾರ ಮಾಡಬೇಕಿದ್ದ ಮೊದಲ ಕೆಲಸ ಶಿಕ್ಷಣ ಸಚಿವರ ಬದಲಾವಣೆ. ಅದನ್ನು ಯಾರೋ ಹೇಳಿ ಕೇಳಿ ಮಾಡಬೇಕಾಗಿರಲಿಲ್ಲ. ಸರ್ಕಾರಕ್ಕೆ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದಿದ್ದರೆ ಮೊದಲ ದಿನವೇ ಅದನ್ನು ಮಾಡಬೇಕಿತ್ತು. 21 ವಿದ್ಯಾರ್ಥಿಗಳ ಹೆಣಗಳು ಬಿದ್ದರೂ ಶಿಕ್ಷಣ ಸಚಿವನನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಸರ್ಕಾಕ್ಕೆ ನಾಚಿಕೆಗೇಡಿನ ವಿಷಯ ಎಂದು ಸ್ವತಃ ಮೋದಿಯವರಿಗೇ ಅನ್ನಿಸಬೇಕಿತ್ತು. ಆದರೆ ಇಡೀ ಸರ್ಕಾರ ಮತ್ತು ಅದರ ಬೆಂಬಲಿಗರು ಸಚಿವನ ಬೆನ್ನಿಗೆ ನಿಂತುಬಿಟ್ಟರು ಎಂದು ಹೇಳಿದರು.

ಈಗ ಈ ಚಳವಳಿ ಎಲ್ಲಿಗೆ ಬಂದು ನಿಂತಿದೆ ನೋಡಿ. ಆಗಾಗ ರೇಡಿಯೋಗಳಲ್ಲಿ ಮನದ ಮಾತು ಆಡುವ ಪ್ರಧಾನ ಮಂತ್ರಿಗಳು ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೆ ಮಾತೇ ಆಡಲಿಲ್ಲ. ಸಾವಿರಗಟ್ಟಲೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಾಂತರವಾಗುತ್ತ ಹೋಯಿತು. ಕೋಟಿಗಟ್ಟಲೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಈ ಆಂದೋಲನ ಕೂಡಿಕೊಂಡರು. ಜನರ ದೃಷ್ಟಿಯಲ್ಲಿ, ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಸರ್ಕಾರದ ವಿಶ್ವಾಸಾರ್ಹತೆ ಮುಕ್ಕಾಗುತ್ತಲೇ ಹೋಯಿತು. ವಿದ್ಯಾರ್ಥಿಗಳು ತಮ್ಮದೇ ದೇಶದ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡರು. ಇಷ್ಟೆಲ್ಲ ಆಗುವುದಕ್ಕೆ ಬಿಡಬೇಕಿತ್ತಾ? ಎಂಉ ಪ್ರಶ್ನಿಸಿದರು.

ಜುಲೈ 20, 21 ರಂದು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಪೈಶಾಚಿಕ ದಾಳಿಯನ್ನು ಯಾವ ನಾಗರಿಕ ಸಮಾಜ ಸಹಿಸಿಕೊಳ್ಳಲು ಸಾಧ್ಯ? ಈ ದಾಳಿಗೆ ಒಳಗಾದವರು ವಿದ್ಯಾರ್ಥಿಗಳು, ಹದಿಹರೆಯದವರು, 25 ವರ್ಷದ ಒಳಗಿನವರು. ಒಬ್ಬ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿ ಒಬ್ಬ ಹೆಣ್ಣಮಗಳ ಖಾಸಗಿ ಅಂಗಕ್ಕೆ ಲಾಠಿಯಿಂದ ತಿವಿಯುವ ದೃಶ್ಯವನ್ನು ಗಮನಿಸಿದೆ. ಎಂಥ ರಾಕ್ಷಸರು ಇವರು? ಮೊಳೆಗಳನ್ನು ಸಿಕ್ಕಿಸಲಾಗಿದ್ದ ಲಾಠಿಗಳಿಂದ ವಿದ್ಯಾರ್ಥಿಗಳನ್ನು ಬಡಿಯಲಾಯಿತು. ವಿದ್ಯಾರ್ಥಿಗಳ ಗುಂಪಿನ ಮೇಲೆಯೇ ಅಶ್ರುವಾಯು ಸೆಲ್ ಗಳನ್ನು ಸಿಡಿಸಲಾಯಿತು. ಪೊಲೀಸರ ಜೊತೆಯಲ್ಲಿ ಕೆಲವು ಗೂಂಡಾಗಳೂ ಸೇರಿಕೊಂಡು ವಿದ್ಯಾರ್ಥಿಗಳನ್ನು ಹೊಡೆದರು ಎಂದು ಆರೋಪಿಸಿದರು.

ನಮ್ಮ ಪ್ರಧಾನಿಯವರನ್ನು ಅವರ ಬೆಂಬಲಿಗರು ವಿಶ್ವಗುರು ಎಂದು ಹೇಳುತ್ತಾರೆ. ಅವರನ್ನು ವಿಶ್ವನಾಯಕ ಎಂದು ಬಿಂಬಿಸುತ್ತಾರೆ. ನಮ್ಮ ದೇಶದ ಪ್ರಧಾನಿ ವಿಶ್ವನಾಯಕರಾಗುವುದು ನಮಗೆ ಹೆಮ್ಮೆಯ ವಿಷಯವೇ. ಆದರೆ ತನ್ನದೇ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಬೇಡುತ್ತ ಲಾಠಿ, ಬೂಟಿನೇಟು ತಿನ್ನುತ್ತಿರುವಾಗ ಪ್ರಧಾನಿ ಮೋದಿಯವರು ವಿಶ್ವನಾಯಕ ಎಂದು ಹೇಳಿಕೊಳ್ಳುವ ನೈತಿಕತೆ ಉಳಿಸಿಕೊಳ್ಳುತ್ತಾರೆಯೇ? ಇಷ್ಟು ಸಣ್ಣ ವಿಷಯ ಇವರಿಗೆ ಅರ್ಥವಾಗುತ್ತಿಲ್ಲವೇ? ಎಂದು ಕೇಳಿದರು.

ಎಂದಿನಂತೆ ಕೆಲವು ಸರ್ಕಾರದ ಬೆಂಬಲಿಗರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೇಶ ವಿರೋಧಿ, ಪಾಕಿಸ್ತಾನದಿಂದ ಫಂಡು ಬಂದಿದೆ, ಚೀನಾ ಇದರ ಹಿಂದೆ ಇದೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಈ ದುಷ್ಟ ವ್ಯವಸ್ಥೆಯಿಂದ ಸತ್ತ 21 ಮಕ್ಕಳು ಭಾರತೀಯರಲ್ಲವೇ? ಅವರು ಪಾಕಿಸ್ತಾನಿಗಳಾ? ಚೀನೀಯರಾ? ಅವರಿಗೆ ನ್ಯಾಯ ಕೊಡಬೇಕಾಗಿದ್ದು ಭಾರತ ಸರ್ಕಾರವಲ್ಲವೇ? ನ್ಯಾಯ ಕೇಳುವವರೆಲ್ಲ ಪಾಕಿಸ್ತಾನಿಗಳಾಗಿಬಿಡುತ್ತಾರಾ ಈ ದೇಶದಲ್ಲಿ? ಯಾರೋ ಪಾಕಿಸ್ತಾನೀಯರು ಈ ಚಳವಳಿಯನ್ನು ಬೆಂಬಲಿಸಿದ ಮಾತ್ರಕ್ಕೆ ಆ ಹೋರಾಟ ಪಾಕಿಸ್ತಾನ ಪ್ರೇರಿತ ಆಗಿಬಿಡುತ್ತದೆಯೇ?

ಈಗ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿ ಐತಿಹಾಸಿಕವಾದದ್ದು. ಈ ಚಳವಳಿಯನ್ನು ವಿದ್ಯಾರ್ಥಿಗಳೇ ಮುನ್ನಡೆಸಬೇಕು. ವಿದ್ಯಾರ್ಥಿಗಳೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಈ ಪ್ರತಿಭಟನೆಯಿಂದ ದೂರವೇ ಉಳಿಯಬೇಕು, ಬೇಕಿದ್ದರೆ ಅವರು ಪ್ರತ್ಯೇಕವಾಗಿ ಚಳವಳಿ ನಡೆಸಲಿ. ಈ ಚಳವಳಿಗೆ ರಾಜಕೀಯ ಬಣ್ಣ ಬರುವುದು ಬೇಡ. ವಿದ್ಯಾರ್ಥಿಗಳು ಒಂದು ದುರಹಂಕಾರಿ ಸರ್ಕಾರವನ್ನು ಬಗ್ಗಿಸಿ, ಅದರ ಕರ್ತವ್ಯವನ್ನು, ಜವಾಬ್ದಾರಿಯನ್ನು ನೆನಪಿಸುತ್ತಿದ್ದಾರೆ. ಅವರ ಜೊತೆಗೆ ನಾವು ನಿಲ್ಲೋಣ ಎಂದರು.

ವಿದ್ಯಾರ್ಥಿಗಳ ಬೆನ್ನಿಗೆ ಇಡೀ ದೇಶದ ಜನತೆ ಇದೆ. ಕನ್ನಡದ ಜನತೆಯೂ ಇದೆ. ಈ ಆಂದೋಲನ ಯಶಸ್ವಿಯಾಗಲಿ, ಶಿಕ್ಷಣ ವ್ಯವಸ್ಥೆ ಸರಿಯಾದ ದಾರಿಗೆ ಹೋಗಲಿ. ಎಲ್ಲದಕ್ಕಿಂತ ಮುಖ್ಯವಾಗಿ ನೀಟ್ ಎಂಬ ವ್ಯವಸ್ಥೆಯೇ ರದ್ದಾಗಲಿ, ನಮಗೆ ಸಿಇಟಿ ಸಾಕು, ಈ ದರಿದ್ರ ನೀಟ್ ಬೇಡವೇ ಬೇಡ ಎಂದು ತಿಳಿಸಿದರು.

ಇದನ್ನೂ ನೋಡಿ: ಫಿಫಾ ವಿಶ್ವಕಪ್ 2026 ಫೈನಲ್ | ಮೆಸ್ಸಿಯ ಕೊನೆಯ ಕನಸೋ? ಸ್ಪೇನ್‌ನ ಹೊಸ ಇತಿಹಾಸವೋ? Janashakthi Media

Donate Janashakthi Media