ಬೆಳಗಾವಿ: ಪ್ರವಾದಿ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೆ!

ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ, ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಅಣಕು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಕಂಡುಬಂದಿದೆ. ಇದು, ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ನೂಪುರ್‌ ಶರ್ಮಾ ಹೇಳಿಕೆಯಿಂದ ಆಕ್ರೋಶಗೊಂಡಿರುವ ಕೆಲವು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನು ಓದಿ: ಕಾನ್ಪುರ: ಬಿಜೆಪಿ ವಕ್ತಾರೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಕೋಮು ಹಿಂಸಾಚಾರ-36 ಮಂದಿ ಬಂಧನ

ನೂಪುರ್ ಶರ್ಮಾ ಅವರ ಭಾವಚಿತ್ರವಿರುವ ಪ್ರತಿಕೃತಿ ನಗರದ ಫೋರ್ಟ್ ರಸ್ತೆಯಲ್ಲಿ ಹಗ್ಗ ಕಟ್ಟಿ  ನೆನ್ನೆ (ಜೂನ್‌ 09) ತಡರಾತ್ರಿ ನೇತುಹಾಕಿದ್ದರು. ಇಂದು ಬೆಳಗ್ಗೆ ಇದನ್ನು ಕಂಡ ಹಿಂದೂ ಜಾಗರಣ, ಶ್ರೀರಾಮ ಸೇನೆ, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.

ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪೊಲೀಸರು ಪ್ರತಿಕೃತಿ ತೆರವು ಮಾಡಿದರು. ಪೊಲೀಸರು ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *