ಉಪಚುನಾವಣೆ : ಹಾನಗಲ್, ಸಿಂದಗಿಯಲ್ಲಿ ಮತದಾನ ಆರಂಭ

ಬೆಂಗಳೂರು : ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸುತ್ತಿದ್ದು, ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳಿಗೂ ಈ ಉಪ ಚುನಾವಣೆ ಪ್ರತಿಷ್ಠೆಯಾಗಿದೆ. ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂನಲ್ಲಿ ದಾಖಲಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಾಗಿದೆ ಎಂದು ರಾಜಕೀಯ ಚಿಂತಕರು ಹೇಳುತ್ತಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರ : ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಉಪ ಚುನಾವಣೆಯ ಮತದಾನ ನಡೆಯಲಿದೆ. ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಕೇಂದ್ರಗಳು ಆರಂಭಗೊಂಡಿದ್ದು, ಸಿಬ್ಬಂದಿ ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದ್ದಾರೆ. ಸಿಂದಗಿ ಚುನಾವಣೆಯಲ್ಲಿ ಒಟ್ಟು 2,34,584 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

1,20,844 ಪುರುಷ ಮತದಾರರು, 1,13,561 ಮಹಿಳಾ ಮತದಾರರು, 32 ಇತರೆ, 147 ಸರ್ವಿಸ್ ವೋಟರಗಳು ಮತ ಚಲಾಯಿಸಲಿದ್ದಾರೆ. 271 ಮತದಾನ ಕೇಂದ್ರಗಳನ್ನು ಹಾಗೂ 26 ಆಕ್ಸಿಲರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ.

7 ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, 22 ಸೆಕ್ಟರ್ ಆಫೀಸರ್ ಗಳು, 18 ಫ್ಲೈಯಿಂಗ್ ಸ್ಕ್ವೇಡ ತಂಡಗಳು, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮತದಾನದ ವೇಳೆ 1308 ಸಿಬ್ಬಂದಿ ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿಆರ್ ಓ, 327 ಎಪಿಆರ್ ಓ ಹಾಗೂ 654 ಪಿ ಓ ಗಳನ್ನು ನಿಯೋಜಿಸಲಾಗಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರ : ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್ ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದಾರೆ.

1,05,525 ಪುರುಷ ಮತದಾರರು, 98,953 ಮಹಿಳಾ ಮತದಾರರು, 83 ಸೇವಾ ಮತದಾರರು, ಮೂವರು ಇತರೆ ಮತದಾರರು ಸೇರಿದಂತೆ ಹಕ್ಕು ಚಲಾಯಿಸಲಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,04,564 ಮತದಾರರಿದ್ದಾರೆ.
239 ಮೂಲ ಮತಗಟ್ಟೆಗಳು ಮತ್ತು 24 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 263 ಮತಗಟ್ಟೆಗಳು ಸಿದ್ಧಪಡಿಸಲಾಗಿದೆ. 263 ಮತಗಟ್ಟೆಗಳಲ್ಲಿ 1,155 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಕ್ಷೇತ್ರದಲ್ಲಿರೋ 33 ಸೂಕ್ಷ್ಮ ಮತ್ತು 3 ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 121 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಒಂದು ವಿಕಲಚೇತನ ಸ್ನೇಹಿ ಮತಗಟ್ಟೆ ಮತ್ತು ಎರಡು ಸಖಿ ಮತಗಟ್ಟೆಗಳ ಸ್ಥಾಪನೆ ಸಹ ಮಾಡಲಾಗಿದೆ.

ನ.2ರಂದು ಮತ ಎಣಿಕೆ: ಈ ಬಾರಿಯ ಚುನಾವಣೆ ಪ್ರಚಾರದ ವೇಳೆ ರಾಜಕೀಯ ನಾಯಕರು ವೈಯಕ್ತಿಕವಾಗಿ ಟೀಕೆಗಳನ್ನು ಮಾಡಿದ್ದರು ಬೈ ಎಲೆಕ್ಷನ್ ಬದಲಾಗಿ ಇದು ‘ಬಯ್ಯುವ’ ಎಲೆಕ್ಷನ್ ಎಂದೆ ಕರೆಸಿಕೊಂಡಿತ್ತು. ಹಾಗಾಗಿ ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕಾಗಿ ನವೆಂಬರ್ ಎರಡರವರೆಗೆ ಕಾಯಬೇಕಿದೆ.

ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನ.2 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ. ಸಿಂದಗಿ ಆರ್.ಡಿ.ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.2ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಹಾನಗಲ್ ಪಟ್ಟಣದ ಕುಮಾರೇಶ್ವರ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *