ಲಾಕ್‍ಡೌನ್ ಪರಿಣಾಮ: ಸಾಲಬಾಧೆ ತಾಳದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಯಾದಗಿರಿ: ಸರಕಾರ ಹೇರಿದ ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ.

ದೋರನಹಳ್ಳಿ ಗ್ರಾಮದ 45 ವರ್ಷ ವಯಸ್ಸಿನ ಭೀಮರಾಯ್ ಸುರಪುರ ಎಂಬಾತ ತನ್ನ ಹೆಂಡತಿ ಶಾಂತಮ್ಮ ಸುರಪುರ (36 ವರ್ಷ) ಜೊತೆಗೆ ತನ್ನ ನಾಲ್ವರು ಮಕ್ಕಳಾದ ಮಕ್ಕಳಾದ ಸುಮಿತ್ರಾ  (12 ವರ್ಷ), ಶ್ರೀದೇವಿ (13 ವರ್ಷ), ಶಿವರಾಜ (6 ವರ್ಷ), ಲಕ್ಷ್ಮೀ (4 ವರ್ಷ) ತನ್ನದೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಓದಿ: ಕೃಷಿ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಪ್ರತಿಭಟನೆ: ರೈತರನ್ನು ಬಂಧಿಸಿದ ಪೊಲೀಸರು

ಭೀಮರಾಯ್ ಸುರಪುರ ತೋಟಗಾರಿಕೆ ಮಾಡಬೇಕೆಂದು ಕೃಷಿ ಸಾಲ ಮತ್ತು ವೈಯಕ್ತಿಕ ಸಾಲವನ್ನು ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ತನ್ನ ಕುಟುಂಬದೊಂದಿಗೆ ಜಮೀನಿಗೆ ತೆರಳಿದ್ದ ಭೀಮರಾಯ್, ಮೊದಲಿಗೆ ಮಕ್ಕಳ ಕಾಲಿಗೆ ಕಲ್ಲು ಕಟ್ಟಿ ಹೊಂಡಕ್ಕೆ ಹಾಕಿದ್ದಾನೆ. ಬಳಿಕ ತನ್ನ ಹೆಂಡತಿ ಜೊತೆಗೆ ತಾನು ಸಹ ಹಾರಿದ್ದಾನೆ.

ಶಹಾಪುರ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ನಾಲ್ವರ ಶವಗಳನ್ನ ಹೊರತೆಗೆದಿದ್ದು, ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ವೇದಮೂರ್ತಿ, ಎಸಿ ಪ್ರಶಾಂತ್ ಹನಗಂಡಿ, ತಹಶೀಲ್ದಾರ ಜಗನ್ನಾಥ್ ರೆಡ್ಡಿ, ಡಿವೈಎಸ್‌ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *