ಸೆ.17ರಿಂದ 22ವರೆಗೆ ಸಿಪಿಎಂನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ: ಸೀತಾರಾಂ ಯೆಚುರಿ

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿರುವಾಗ ಸೆಪ್ಟಂಬರ್ 17ರಿಂದ 22 ರ ವರೆಗೆ ಒಂದು ರಾಷ್ಟ್ರೀಯ ಮಟ್ಟದ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕರೆ ನೀಡಿರುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಸೆಪ್ಟಂಬರ್ 1ರಂದು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.

 ಬಿಜೆಪಿ ಕೇಂದ್ರ ಸರಕಾರ ಜನಗಳ ತಕ್ಷಣದ ಅಗತ್ಯಗಳನ್ನು ತುರ್ತಾಗಿ ಪೂರೈಸಬೇಕು ಎಂದು ಆಗ್ರಹಿಸುವ ಜೊತೆಗೇ, ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿರುವುದು, ಅಲ್ಪಸಂಖ್ಯಾತರ ಮೇಲೆ ಗುರಿಯಿಡುವುದು, ನಮ್ಮ ಜನಗಳ ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಮೇಲೆ ವ್ಯಾಪಕ ದಾಳಿಗಳು, ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಇತರ ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳ ಮೇಲೆ ಮಾಡುತ್ತಿರುವ ಅಮಾನುಷ ಹಲ್ಲೆಗಳು, ಖಾಸಗೀಕರಣದ ಮೂಲಕ ರಾಷ್ಟ್ರೀಯ ಆಸ್ತಿಗಳ ಲೂಟಿ  ಮತ್ತು ಕಾರ್ಮಿಕ ಕಾನೂನುಗಳ ರದ್ಧತಿ ಮುಂತಾದ ಪ್ರಶ್ನೆಗಳನ್ನು, ಎತ್ತಿ ತೋರಲಾಗುವುದು. ಮುಖ್ಯವಾಗಿ ಈ ನಾಲ್ಕು ಪ್ರಶ್ನೆಗಳ ಮೇಲೆ ಈ ರಾಷ್ಟ್ರವ್ಯಾಪಿ ಪ್ರತಿಟನೆಯಲ್ಲಿ ಗಮನ ಕೇಂದ್ರೀಕರಿಸಲಾಗುವುದು ಎಂದು ಯೆಚುರಿ ಹೇಳಿದ್ದಾರೆ.

  • ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲ ಕುಟುಂಬಗಳಿಗೆ ತಕ್ಷಣದಿಂದಲೇ ಮುಂದಿನ ಆರು ತಿಂಗಳು, ತಿಂಗಳಿಗೆ ರೂ.7500 ರಂತೆ ನಗದು ವರ್ಗಾವಣೆ ಮಾಡಬೇಕು,
  • ಆಹಾರದ ಅಗತ್ಯವಿರುವ ಎಲ್ಲರಿಗೂ ಪ್ರತಿವ್ಯಕ್ತಿಗೆ ಪ್ರತಿ ತಿಂಗಳು 10 ಕೆ.ಜಿ.ಯಂತೆ ಮುಂದಿನ ಆರು ತಿಂಗಳು ಉಚಿತವಾಗಿ ಆಹಾರಧಾನ್ಯಗಳನ್ನು ಒದಗಿಸಬೇಕು,
  • ಮನರೇಗವನ್ನು ವಿಸ್ತರಿಸಿ ಒಂದು ವರ್ಷದಲ್ಲಿ ಕನಿಷ್ಟ 200 ದಿನಗಳ ಕೆಲಸವನ್ನು ಹೆಚ್ಚಿಸಿದ ಕೂಲಿಯಲ್ಲಿ ಖಾತ್ರಿಪಡಿಸಬೇಕು, ಒಂದು ನಗರಪ್ರದೇಶ ಉದ್ಯೋಗ ಖಾತ್ರಿ ಕಾಯ್ದೆಯನ್ನು ತರಬೇಕು ಮತ್ತು ನಿರುದ್ಯೋಗ ಭತ್ಯೆಯನ್ನು ಎಲ್ಲ ನಿರುದ್ಯೋಗಿಗಳಿಗೆ ಪ್ರಕಟಿಸಬೇಕು.
  • ಭಾರತೀಯ ಸಂವಿಧಾನವನ್ನು ಮತ್ತು ಅದರ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ಮೂಲಭೂತ ಖಾತ್ರಿಗಳನ್ನು ರಕ್ಷಿಸಿಕೊಳ್ಳುವುದು.

ಸಂಸತ್ತಿನ ಮಳೆಗಾಲದ ಅಧಿವೇಶನದ ಹಿನ್ನೆಲೆಯಲ್ಲಿ  ಸೆಪ್ಟಂಬರ್‍ 12ರಂದು ನಡೆದ ಪೊಲಿಟ್‍ ಬ್ಯುರೋದ ಆನ್‍ಲೈನ್‍ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಮತ್ತು ಕೈಗೊಂಡ ನಿರ್ಧಾರಗಳ ಬಗ್ಗೆ ಯೆಚುರಿ ಈ ಪತ್ರಿಕಾಗೋ಼ಷ್ಠಿಯಲ್ಲಿ ವಿವರಿಸಿದ್ದಾರೆ.

ಸರಕಾರ ಈ ಲಾಕ್‍ಡೌನಿನ ಅವಧಿಯಲ್ಲಿ ಹನ್ನೊಂದು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದು ಅವನ್ನು ಸಿಪಿಐ(ಎಂ) ವಿರೋಧಿಸಿದೆ. ಇವುಗಳಲ್ಲಿ ಕೆಲವು, ನಿರ್ದಿಷ್ಟವಾಗಿ ಕೃಷಿಗೆ ಸಂಬಂಧಪಟ್ಟವುಗಳು ನಮ್ಮ ರೈತರಿಗೆ, ಭಾರತೀಯ ಕೃಷಿಗೆ ಮತ್ತು ಭಾರತದ ಆರ್ಥಿಕ ಸಾರ್ವಭೌಮತೆಗೆ ಅತ್ಯಂತ ಅಪಾಯಕಾರಿ ಮತ್ತು ಹಾನಿಕಾರಕವಾಗಿರುವಂತವುಗಳು. ಸಿಪಿಐ(ಎಂ) ಈ ಸುಗ್ರೀವಾಜ್ಞೆಗಳನ್ನು ವಿರೋಧಿಸುವ ಮತ್ತು ಅವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುವ ಠರಾವುಗಳ ಬಗ್ಗೆ ನೋಟಿಸನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಸಲ್ಲಿಸಿದೆ ಎಂದು ಯೆಚುರಿ ತಿಳಿಸಿದರು.

ಇದಲ್ಲದೆ ಹೊಸ ಶಿಕ್ಷಣ ನೀತಿ, ರಾಷ್ಟ್ರೀಯ ಡಿಜಿಟಲ್‍ ಆರೋಗ್ಯ ಮಿಷನ್ ಮತ್ತು ವೈಯಕ್ತಿಕ ದತ್ತಾಂಶಗಳ ರಕ್ಷಣೆಯನ್ನು ನಿರಾಕರಿಸುವ ಇದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಆರೋಗ್ಯಪಾಲನೆಯ ಖಾಸಗೀಕರಣ, ಪರಿಸರ ಪರಿಣಾಮ ನಿರ್ಧಾರಣೆ ಮತ್ತು ಹೊಸ ಗಣಿಗಾರಿಕೆ ನಿಬಂಧನೆಗಳು ಮುಂತಾದವುಗಳು ಜನಗಳ ಮತ್ತು ದೇಶಗಳ ಹಿತದಲ್ಲಿ ಇಲ್ಲ. ಇವುಗಳ ಜಾರಿಯ ಮೊದಲು ಅವನ್ನು  ಆಮೂಲಾಗ್ರವಾಗಿ ಚರ್ಚಿಸಬೇಕು ಮತ್ತು ಸಂಸತ್ತು ಪರೀಕ್ಷಣೆಗೊಳಪಡಿಸಬೇಕು ಎಂದು ಪಕ್ಷದ ಸಂಸತ್‍ ಸದಸ್ಯರು ಒತ್ತಾಯಿಸುತ್ತಾರೆ ಎಂದೂ ಯೆಚುರಿ ತಿಳಿಸಿದ್ದಾರೆ.

ಸಿಪಿಐ(ಎಂ) ಈಗಾಗಲೇ ಬಿಜೆಪಿ-ಫೇಸ್‍ ಬುಕ್ ನಂಟಿನ ಪ್ರಶ್ನೆಯನ್ನು ಎತ್ತಿದೆ ಮತ್ತು ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ಸೇರಿದಂತೆ ಒಂದು ಆಮೂಲಾಗ್ರ ತನಿಖೆಯಾಗಬೇಕು ಎಂದೂ ಸಿಪಿಐ9ಎಂ) ಆಗ್ರಹಿಸಿದೆ.

ಗಂಭೀರ ಕೊವಿಡ್‍ ಪರಿಸ್ಥಿತಿ ಮತ್ತು ಆರ್ಥಿಕ ವಿಧ್ವಂಸ

ಕೊವಿಡ್‍ ಮಹಾಸೋಂಕು ದೇಶಾದ್ಯಂತ ರಂಪಾಟ ನಡೆಸಿದೆ. ಈಗ ಇಡೀ ಜಗತ್ತಿನಲ್ಲಿ ಪ್ರತಿದಿನ ಸೋಂಕು ತಗಲುತ್ತಿರುವವರ ಸಂಖ್ಯೆ ಭಾರತದಲ್ಲೇ ಅತಿ ಹೆಚ್ಚು ಎಂಬ ಒಂದು ಗಂಭೀರ ಸನ್ನಿವೇಶವನ್ನು ತಲುಪಿದೆ. ಆದರೆ ಕೇಂದ್ರ  ಸರಕಾರ ಮತ್ತು ಪ್ರಧಾನ ಮಂತ್ರಿ ಮೋದಿ ತಮ್ಮ ಹೊಣೆಯಿಂದ ಸುಮಾರಾಗಿ ಜಾರಿಕೊಂಡೇ ಬಿಟ್ಟಿದ್ದಾರೆ, ಜನಗಳನ್ನು ಅವರ ಪಾಡಿಗೇ ಬಿಟ್ಟು ಬಿಟ್ಟಿದ್ದಾರೆ. ಈ ರಂಪಾಟ ಅಡೆ-ತಡೆಯಿಲ್ಲದೆ ಸಾಗಿರುವುದರಿಂದ  ಆರೋಗ್ಯ ಸೌಕರ್ಯಗಳನ್ನು ತುರ್ತಾಗಿ ಹೆಚ್ಚಿಸಬೇಕಾಗಿದೆ, ಕೊವಿಡ್‍ ಮಹಾಸೋಂಕನ್ನು ಎದುರಿಸುವ ಪ್ರಯತ್ವನ್ನು ಸೇರಿಕೊಳ್ಳುವಂತೆ ಖಾಸಗಿ ಆರೋಗ್ಯ ಸೇವೆ ಒದಗಿಸುವವರನ್ನು ಆದೇಶಿಸಬೇಕಾಗಿದೆ. ಆದರೆ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ.

ತದ್ವಿರುದ್ಧವಾಗಿ, ಕೇರಳದ ಎಲ್‍.ಡಿ.ಎಫ್. ಸರಕಾರ ತಪಾಸಣೆಯಿಂದ ಹಿಡಿದು, ಆಸ್ಪತ್ರೆಗೆ ಸೇರಿಸುವುದು ಮತ್ತು ಶುಶ್ರೂಷೆ ಒದಗಿಸುವ ವರೆಗೆ ಎಲ್ಲವನ್ನೂ ಉಚಿತವಾಗಿ ಒದಗಿಸುತ್ತಿದೆ. ಇದರಿಂದಾಗಿ ಕೇವಲ 2ಶೇ. ರೋಗಿಗಳಷ್ಟೇ ಖಾಸಗಿ ಆಸ್ಪತ್ರೆ ಸೌಕರ್ಯಗಳನ್ನು ಬಳಸುತ್ತಿದ್ದಾರೆ. ಖಾಸಗಿ ಅಸ್ಪತ್ರೆಗಳಿಗೆ ದರಗಳನ್ನೂ ರಾಜ್ಯ ಸರಕಾರವೇ ನಿಗದಿ ಮಾಡಿದೆ. ಕೇಂದ್ರ ಸರಕಾರ ಆಸ್ಪತ್ರೆ ಸೌಕರ್ಯಗಳನ್ನು ವಿಸ್ತರಿಸಬೇಕು ಮತ್ತು ಉಚಿತ ಶುಶ್ರೂಷೆಗೆ ವ್ಯವಸ್ಥೆ ಮಾಡಬೇಕು ಹಾಗೂ ಖಾಸಗಿ ಆರೋಗ್ಯ ಸೌಕರ್ಯಗಳಿಗೆ ತರ್ಲಬದ್ಧ ದರಗಳನ್ನು ನಿಗದಿ ಮಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಕೊವಿಡ್‍ ಬಂದೆರಗುವ ಎಷ್ಟೋ ಮೊದಲೇ ಭಾರತೀಯ ಅರ್ಥವ್ಯವಸ್ಥೆಯಲ್ಲಿ ನೋಟುರದ್ಧತಿ ಮತ್ತು ಜಿಎಸ್‍ಟಿ ಜಾರಿಯೊಂದಿಗೆ ಆರಂಭವಾಗಿದ್ದ ವಿಧ್ವಂಸ ಎಷ್ಟರ ವರೆಗೆ ಹದಗೆಟ್ಟಿದೆಯೆಂದರೆ ಜಗತ್ತಿನ ಎಲ್ಲ ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ ಭಾರತವೇ, ಎಪ್ರಿಲ್‍-ಜೂನ್‍2020ರ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ  ಅತ್ಯಂತ  ಕೆಟ್ಟ ಪತನವನ್ನು ಕಂಡಿದೆ, (-) 23.9ಶೇ.ಕ್ಕೆ ಕುಸಿದಿದೆ.

ಇದರಿಂದಾಗಿ ನಿರುದ್ಯೋಗ ನಾಗಾಲೋಟ ಹೂಡಿದೆ, ಸಂಬಳದಾರರಲ್ಲಿಯೂ 2.1 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.  ಇದು ಕೋಟ್ಯಂತರ ಭಾರತೀಯರನ್ನು ಪಾಪರುಗಳಾಗಿ ಮಾಡಿ ಅವರ ನೋವನ್ನು, ಸಂಕಟಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಮೇಲೆ ಬೆನ್ನು ಮುರಿಯುವ ಬೆಲೆಯೇರಿಕೆಗಳು, ನಿರ್ದಿಷ್ಟವಾಗಿ ಆಹಾರ, ತರಕಾರಿ, ಹೈನು ಉತ್ಪನ್ನಗಳು ಮತ್ತು ಇಂಧನ ಮುಂತಾದ ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆಗಳ ಹೊರೆ ಬಿದ್ದಿದೆ.

ಇಂತಹ ಸಂದರ್ಭದಲ್ಲೂ ಕೇರಳದಲ್ಲಿ ಎಲ್.ಡಿ.ಎಫ್‍. ಸರಕಾರ ರಾಜ್ಯದಲ್ಲಿ 78 ಲಕ್ಷ ಜನಗಳಿಗೆ ಉಚಿತ ಆಹಾರ ಮತ್ತು 58 ಲಕ್ಷ ಮಂದಿಗೆ ಮಾಸಿಕ ಸಾಮಾಜಿಕ ಸುರಕ್ಷಿತತೆಯ ಪೆನ್ಶನ್‍ ಒದಗಿಸುತ್ತಿದೆ. ಎಲ್‍.ಡಿ.ಎಫ್‍. ಸರಕಾರ ಈ ರೀತಿಯಲ್ಲಿ ಪರಿಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವಾಗ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‍ ನೇತೃತ್ವದ  ಯುಡಿಎಫ್ ಮತ್ತು ಬಿಜೆಪಿ ಪರಸ್ಪರ ಸಂಯೋಜನೆಯಿಂದ ಕೆಲಸ ಮಾಡುತ್ತಿವೆ, ಕೊವಿಡ್‍ ಸೋಂಕನ್ನು ಎದುರಿಸುವ ಮತ್ತು ಜನಗಳಿಗೆ ಪರಿಹಾರ ಒದಗಿಸುವ ಸರಕಾರದ ಕೆಲಸಗಳಲ್ಲಿ ಅಡಚಣೆಗಳನ್ನು ಉಂಟು ಮಾಡುತ್ತಿವೆ  ಎಂದು ಯೆಚುರಿ ಖೇದ ವ್ಯಕ್ತ ಪಡಿಸಿದರು.

ಕೇಂದ್ರ ಸರಕಾರದ ನಿಜವಾದ ಅಜೆಂಡಾ

ಕೊವಿಡನ್ನು ಎದುರಿಸಲು ಮತ್ತು ಜನಗಳಿಗೆ ಪರಿಹಾರ ಒದಗಿಸಲು ಏಕಚಿತ್ರದಿಂದ ಗಮನ ಕೇಂದ್ರೀಕರಿಸುವ ಬದಲು ಈ ಬಿಜೆಪಿ ಕೇಂದ್ರ ಸರಕಾರ ಭಾರತೀಯ ಸಂವಿಧಾನವನ್ನು ಶಿಥಿಲಗೊಳಿಸಿ ಭಾರತೀಯ ಗಣತಂತ್ರದ ಚಾರಿತ್ರ್ಯವನ್ನೇ ಬದಲಿಸಲು ಪ್ರಯತ್ನಿಸುವ ಆರೆಸ್ಸೆಸ್ ಅಜೆಂಡಾವನ್ನೇ ಆಕ್ರಾಮಕವಾಗಿ ಅನುಸರಿಸುತ್ತಿದೆ. ಕಳೆದ ಆರು ತಿಂಗಳಲ್ಲಿ ಸರಕಾರ ನವ-ಉದಾರವಾದಿ ಸುಧಾರಣೆಗಳನ್ನು ಆಕ್ರಾಮಕ ರೀತಿಯಲ್ಲಿ ಜಾರಿಗೊಳಿಸಲು ಹೊರಟಿದೆ.

ಕ್ರಿಮಿನಲ್‍ ನ್ಯಾಯ ವ್ಯವಸ್ಥೆಯನ್ನು, ಕೇಂದ್ರ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲೀಸ್, ಎನ್‍ಐಎ, ಸಿಬಿಐ, ಇಡಿ ಮುಂತಾದವುಗಳ ನಗ್ನ ದುರುಪಯೋಗವನ್ನು, ರಾಜಕೀಯ ವಿರೋಧಿಗಳನ್ನು ರಾಕ್ಷಸರೆಂಬಂತೆ ಬಿಂಬಿಸಲಿಕ್ಕಾಗಿ  ಸಂಪೂರ್ಣವಾಗಿ ಬುಡಮೇಲು ಮಾಡಲಾಗುತ್ತಿದೆ, ಇದು ಪ್ರಜಾಪ್ರಭುತ್ವದ ಮೇಲೆ ಪೂರ್ಣ ಪ್ರಮಾಣದ ದಾಳಿಯ ಸಂಕೇತ ಎಂದು ಸೀತಾರಾಮ್‍ ಯೆಚುರಿ ವರ್ಣಿಸಿದರು.

ಸುಳ್ಳು ಆರೋಪಗಳ ಮೇಲೆ ಮುಗ್ಧ ಅಲ್ಪಸಂಖ್ಯಾತರನ್ನು, ಜನಗಳ, ವಿಶೇಷವಾಗಿ, ದಲಿತರು/ಬುಡಕಟ್ಟುಗಳು ಜನಗಳು ಮುಂತಾದಅಂಚಿಗೆ ತಳ್ಳ್ಪಟ್ಟಿರುವ ಜನಗಳ ಹಕ್ಕುಗಳನ್ನು ಪ್ರತಿಪಾದಿಸುವ ಸಕ್ರಿಯ ಕಾರ್ಯಕರ್ತರನ್ನು ಯು.ಎ.ಪಿ.ಎ, ಎನ್‍.ಎಸ್.ಎ, ರಾಜದ್ರೋಹ ಕಾಯ್ದೆಯಂತಹ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ ಎಂದು ಅವರು ತಿಳಿಸಿದರು.

ಈ ಬಿಜೆಪಿ ಕೇಂದ್ರ ಸರಕಾರ ಅವಿರತವಾಗಿ ಎಲ್ಲ ಅಧಿಕಾರ, ಪ್ರಾಧಿಕಾರದ ಕೇಂದ್ರೀಕರಣದ ಧಾವಂತವನ್ನು ತೀವ್ರಗೊಳಿಸುತ್ತಿದೆ. ಕೇಂದ್ರ ಸರಕಾರ ರಾಜ್ಯಗಳಿಗೆ ಕಾನೂನು ಪ್ರಕಾರ ಸಲ್ಲತಕ್ಕ ಜಿ.ಎಸ್‍.ಟಿ. ಬಾಕಿಗಳನ್ನು ತೆರಲು, ಅಗತ್ಯವಿದ್ದರೆ ರಿಜರ್ವ್ ಬ್ಯಾಂಕಿನಿಂದ ಸಾಲ ಮಾಡಿ, ಕೊಡಬೇಕು ಎಂಬ ಸಿಪಿಐ(ಎಂ) ನಿಲುವನ್ನು ಪುನರುಚ್ಚರಿಸಿದ ಯೆಚುರಿ ಕೇಂದ್ರ ಸರಕಾರ, ಕೊವಿಡ್‍ ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಜಮ್ಮು ಮತ್ತು ಕಾಶ್ಮೀರ

ಈ ರಾಜ್ಯದಲ್ಲಿ ಆಗಸ್ಟ್ 2019ರಲ್ಲಿ ರಾಜಕೀಯ ಲಾಕ್‍ ಡೌನ್ ಹಾಕಿದ ನಂತರ ಮೊದಲ ಬಾರಿಗೆ ಆರು ಮುಖ್ಯಧಾರೆಯ ರಾಜಕೀಯ ಪಕ್ಷಗಳ ಸಭೆ ನಡೆದು ಒಂದು ಘೋಷಣೆಯನ್ನು ಅಂಗೀಕರಿಸಿರುವುದನ್ನು ಪೊಲಿಟ್‍ ಬ್ಯುರೊ ಸ್ವಾಗತಿಸಿದೆ. ಸಾಮಾನ್ಯ ರಾಜಕೀಯ ಚಟುವಟಿಕೆಗಳನ್ನು, ರಾಜ್ಯದ ಸ್ಥಾನಮಾನವನ್ನು ಹಾಗೂ ಕಲಮು 370ನ್ನು ಮರುಸ್ಥಾಪಿಸಬೇಕು ಎಂದು ಈ ಘೋಷಣೆ ಆಗ್ರಹಿಸಿದೆ.

ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಎಲ್ಲ ನಿರ್ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಸಾರ್ವಜನಿಕ ಸಾರಿಗೆ ಮತ್ತು ಇತರ ಸೇವೆಗಳೊಂದಿಗೆ ಸಂಪೂರ್ಣ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಬೇಕು ಎಂದು ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

ಭಾರತ ಮತ್ತು ಚೀನಾದ ನಡುವೆ ಸಂಘರ್ಷಗಳು ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸುತ್ತ, ಭಾರತ ಮತ್ತು ಚೀನಾದ ವಿದೇಶಾಂಗ ಮಂತ್ರಿಗಳ ನಡುವೆ ಸಪ್ಟಂಬರ್‍ 11ರಂದು ಮಾಸ್ಕೋದಲ್ಲಿ ನಡೆದ ಸಭೆಯ ಫಲಿತಾಂಶವಾಗಿ ಒಂದು ಜಂಟಿ ಹೇಳಿಕೆ ಪ್ರಕಟವಾಗಿದೆ ಎಂಬುದನ್ನು ಪೊಲಿಟ್‍ ಬ್ಯುರೊ ಗಮನಿಸಿದೆ. ಇದರಲ್ಲಿ ‘ವಾಸ್ತವ ಹತೊಟಿ ರೇಖೆ’(ಎಲ್‍.ಎ.ಸಿ) ಮೇಲೆ ಘರ್ಷಣೆಯನ್ನು ನಿಲ್ಲಿಸಬೇಕು, ಹಿಂದಕ್ಕೆ ಸರಿಯಬೇಕು ಎಂದು ಕರೆ ನೀಡಲಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಸಂವಾದಗಳ ಮೂಲಕ ಒಂದು ಶಾಂತಿಯುತ ಇತ್ಯರ್ಥಕ್ಕೆ ಬರಲು ಪ್ರಯತ್ನಗಳು ಮುಂದುವರೆಯುತ್ತವೆ ಎಂದು ಘೋಷಿಸಲಾಗಿದೆ ಮತ್ತು “ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು” ಎಂಬುದನ್ನು ಪುನರುಚ್ಚರಿಸಲಾಗಿದೆ.

ನಮ್ಮ ಸೈನಿಕರ ಸಾವಿಗೆ ಕಾರಣವಾದ ಜೂನ್‍ 15ರ ತಿಕ್ಕಾಟದ ನಂತರ, ಇತ್ತೀಚೆಗೆ ಎರಡೂ ಕಡೆಗಳಿಂದ ಗಾಳಿಯಲ್ಲಿ ಗುಂಡು ಹಾರಾಟ ವರದಿಯಾಗಿದೆ. ಇದು 45 ವರ್ಷಗಳ ನಂತರ ನಡೆಯುತ್ತಿದೆ. ಪರಿಸ್ಥಿತಿಯಲ್ಲಿ ಉದ್ವೇಗವಿದೆ, ಅದು ಗಂಭೀರವಾಗಿದೆ, ಅದನ್ನು ಸಡಿಲಗೊಳಿಸಬೇಕಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಮೂಲಕ ಶಾಂತಿಯುತ ಇತ್ಯರ್ಥದ ನಿಲುವಿಗೆ ಸಿಪಿಐ(ಎಂ) ಬದ್ಧವಾಗಿದೆ ಎಂದು ಈ ಬಗ್ಗೆ ಮಾತಾಡುತ್ತ ಯೆಚುರಿ ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *